ಸತೀಶ್ ನೆತ್ತರಕೆರೆ-ದುಬೈ

✒ಸತೀಶ್ ಕುಲಾಲ್ ನೆತ್ತರಕೆರೆ, ದುಬೈ

ಇಷ್ಟು ದಿನ ಕಂಡು ಕೇಳದ 

ಮುಗ್ಧ ಜೀವಿಗಳ ಆಕ್ರಂದನ

ಇಂದು ತಟ್ಟಿದೆ,

ಹಾಕಿಕೊಂಡಿದ್ದಾನೆ  ಮನುಜ 

ತಾನೇ ಸುತ್ತಲೂ ದಿಗ್ಬಂಧನ.

****

ಈ ಭೂಮಿಗೊಬ್ಬನೇ ಒಡೆಯ 

ಅಂದುಕೊಂಡಿದ್ದು ಸುಳ್ಳು  

ಸದ್ಯ ಕಂಡಾಗ ಅನಿಸಿದ್ದು

ಬದುಕುವ ಹಕ್ಕಿದೆ 

ಎಲ್ಲ ಜೀವರಾಶಿಗೆ ಇಲ್ಲೂ.

***

ಹೊರಗೆ ಹೊರಟಾಗ ಕಂಡಿದ್ದು 

ದೌಲತ್ತು ಸಂಪತ್ತು 

ಕುರುಡು ಕಾಂಚಾಣ ಒಂದೇ

ಬರುವಾಗ ಸಾವನ್ನೂ ಕಟ್ಟಿ

ಕೊಂಡಿದ್ದು ಬೆನ್ನ ಹಿಂದೆ.

***

ಎಷ್ಟೊಂದು ಹಿಂಸೆ ಯಾತನೆ

ಏಕಾಂತ ಒಂಟಿತನದ ಬದುಕು

ಹೆಜ್ಜೆಯಿಟ್ಟರೆ ಸಾಕು 

ಹಿಂಬಾಲಿಸುತ್ತಿದೆ ಸಾವು‌‌

ಕಾಲಿನ ಬುಡಕೂ..

***

ನಮ್ಮವರೇ ಇಂದು 

ಕಂಡಾಗ ಸರಿವರು 

ಮಾರು ದೂರ 

ಎಲ್ಲರಿಗೂ ಬೇಕು ಅಂತರ

ಹೇಗಿದೆ ನೋಡಿ...!?

ಸೃಷ್ಟಿಯ ಮುಂದೆ

ಎಲ್ಲರೊಂದೆ 

ಅಸ್ಪ್ರಶ್ಯರು ಒಂಥರಾ...!!

****

ಸತ್ತು ಮಲಗಿದೆ

ನಿರ್ಜೀವ

ರಸ್ತೆ

ಅಲ್ಲಿ ಗಿಜಿಗುಡುವ ಸದ್ದಿಲ್ಲ!

ನೆನಪಿಸಿದಂತಿದೆ..

ಹೊರಬರಬೇಡಿ ಯಾರೂ

ರೋಗಕ್ಕೆ ಮದ್ದಿಲ್ಲ!!

****

ಲೋಕದ ಭಾರ 

ತಮ್ಮದೇ ತಲೆಯ 

ಮೇಲೆ ಹೊತ್ತಂತೆ

ನಮ್ಮಿಂದಲೇ ದಿನ ಬೆಳಗು

ಎಂಬಂತೆ 

ತಿರುಗುತ್ತಿದ್ದವರಿಗೆ ಈಗ  

ತಿಂದುಂಡು ಹೊರಳಾಡಿ

ದಿನ ಕಳೆಯುವುದು 

ಹೇಗೆಂಬ  ಚಿಂತೆ !!

****

ಕಂಡಾಗ ಅನಿಸಿದ್ದು ..

ಯಾವಾಗಲೂ

ಮಾನವೀಯತೆಯೇ

ಮಿಗಿಲು

ನಮ್ಮ ಹೊಟ್ಟೆ 

ಕೂಡಾ ತುಂಬುವುದು

ಇನ್ನೊಬ್ಬರ ಹಸಿವು ನೀಗಲು

****

ಎಲ್ಲ ಕಾಲಕ್ಕೆ

ಅನಿವಾರ್ಯವಲ್ಲ

ಕೂಡಿಟ್ಟ ಗಳಿಕೆ ಸಂಪತ್ತು

ನಿಜವಾದ 

ನೆಮ್ಮದಿಯ ಗುಟ್ಟು 

ಒಂದಿಷ್ಟು ಪುರುಸೊತ್ತು 

ಮತ್ತು

ನಮ್ಮವರೊಡನೆ ಕಳೆದ ಹೊತ್ತು

****

ದೂರ ತೀರ ಸೆಳೆತಕೆ

ಮಾರು ಹೋಗಿ

ನಮ್ಮತನವ ಮಾರಿ,

ಮರಳಿ ಬರುವಾಗ

ಬಿಟ್ಟಿ ಬಂದಿದ್ದು ಈ ಮಾರಿ..!!

****

ಮೊದಲು ಎಲ್ಲೆಡೆ

ಮಲಿನವಾಗಿತ್ತು

ಮೂಗು ಮುಚ್ಚಿಕೊಳ್ಳಬೇಕಿತ್ತು

ಆದರೆ 

ಈಗ ಸುತ್ತ ಸ್ವಚ್ಛವಾಗಿದೆ

ಮನುಷ್ಯ

ಮುಖ ತೋರಿಸದಂತಾಗಿದೆ!!

****

✒ಸತೀಶ್ ಕುಲಾಲ್ ನೆತ್ತರಕೆರೆ, ದುಬೈ

Leave a Comment