✒ಸತೀಶ್ ಕುಲಾಲ್ ನೆತ್ತರಕೆರೆ, ದುಬೈ
ಇಷ್ಟು ದಿನ ಕಂಡು ಕೇಳದ
ಮುಗ್ಧ ಜೀವಿಗಳ ಆಕ್ರಂದನ
ಇಂದು ತಟ್ಟಿದೆ,
ಹಾಕಿಕೊಂಡಿದ್ದಾನೆ ಮನುಜ
ತಾನೇ ಸುತ್ತಲೂ ದಿಗ್ಬಂಧನ.
****
ಈ ಭೂಮಿಗೊಬ್ಬನೇ ಒಡೆಯ
ಅಂದುಕೊಂಡಿದ್ದು ಸುಳ್ಳು
ಸದ್ಯ ಕಂಡಾಗ ಅನಿಸಿದ್ದು
ಬದುಕುವ ಹಕ್ಕಿದೆ
ಎಲ್ಲ ಜೀವರಾಶಿಗೆ ಇಲ್ಲೂ.
***
ಹೊರಗೆ ಹೊರಟಾಗ ಕಂಡಿದ್ದು
ದೌಲತ್ತು ಸಂಪತ್ತು
ಕುರುಡು ಕಾಂಚಾಣ ಒಂದೇ
ಬರುವಾಗ ಸಾವನ್ನೂ ಕಟ್ಟಿ
ಕೊಂಡಿದ್ದು ಬೆನ್ನ ಹಿಂದೆ.
***
ಎಷ್ಟೊಂದು ಹಿಂಸೆ ಯಾತನೆ
ಏಕಾಂತ ಒಂಟಿತನದ ಬದುಕು
ಹೆಜ್ಜೆಯಿಟ್ಟರೆ ಸಾಕು
ಹಿಂಬಾಲಿಸುತ್ತಿದೆ ಸಾವು
ಕಾಲಿನ ಬುಡಕೂ..
***
ನಮ್ಮವರೇ ಇಂದು
ಕಂಡಾಗ ಸರಿವರು
ಮಾರು ದೂರ
ಎಲ್ಲರಿಗೂ ಬೇಕು ಅಂತರ
ಹೇಗಿದೆ ನೋಡಿ...!?
ಸೃಷ್ಟಿಯ ಮುಂದೆ
ಎಲ್ಲರೊಂದೆ
ಅಸ್ಪ್ರಶ್ಯರು ಒಂಥರಾ...!!
****
ಸತ್ತು ಮಲಗಿದೆ
ನಿರ್ಜೀವ
ರಸ್ತೆ
ಅಲ್ಲಿ ಗಿಜಿಗುಡುವ ಸದ್ದಿಲ್ಲ!
ನೆನಪಿಸಿದಂತಿದೆ..
ಹೊರಬರಬೇಡಿ ಯಾರೂ
ರೋಗಕ್ಕೆ ಮದ್ದಿಲ್ಲ!!
****
ಲೋಕದ ಭಾರ
ತಮ್ಮದೇ ತಲೆಯ
ಮೇಲೆ ಹೊತ್ತಂತೆ
ನಮ್ಮಿಂದಲೇ ದಿನ ಬೆಳಗು
ಎಂಬಂತೆ
ತಿರುಗುತ್ತಿದ್ದವರಿಗೆ ಈಗ
ತಿಂದುಂಡು ಹೊರಳಾಡಿ
ದಿನ ಕಳೆಯುವುದು
ಹೇಗೆಂಬ ಚಿಂತೆ !!
****
ಕಂಡಾಗ ಅನಿಸಿದ್ದು ..
ಯಾವಾಗಲೂ
ಮಾನವೀಯತೆಯೇ
ಮಿಗಿಲು
ನಮ್ಮ ಹೊಟ್ಟೆ
ಕೂಡಾ ತುಂಬುವುದು
ಇನ್ನೊಬ್ಬರ ಹಸಿವು ನೀಗಲು
****
ಎಲ್ಲ ಕಾಲಕ್ಕೆ
ಅನಿವಾರ್ಯವಲ್ಲ
ಕೂಡಿಟ್ಟ ಗಳಿಕೆ ಸಂಪತ್ತು
ನಿಜವಾದ
ನೆಮ್ಮದಿಯ ಗುಟ್ಟು
ಒಂದಿಷ್ಟು ಪುರುಸೊತ್ತು
ಮತ್ತು
ನಮ್ಮವರೊಡನೆ ಕಳೆದ ಹೊತ್ತು
****
ದೂರ ತೀರ ಸೆಳೆತಕೆ
ಮಾರು ಹೋಗಿ
ನಮ್ಮತನವ ಮಾರಿ,
ಮರಳಿ ಬರುವಾಗ
ಬಿಟ್ಟಿ ಬಂದಿದ್ದು ಈ ಮಾರಿ..!!
****
ಮೊದಲು ಎಲ್ಲೆಡೆ
ಮಲಿನವಾಗಿತ್ತು
ಮೂಗು ಮುಚ್ಚಿಕೊಳ್ಳಬೇಕಿತ್ತು
ಆದರೆ
ಈಗ ಸುತ್ತ ಸ್ವಚ್ಛವಾಗಿದೆ
ಮನುಷ್ಯ
ಮುಖ ತೋರಿಸದಂತಾಗಿದೆ!!
****
✒ಸತೀಶ್ ಕುಲಾಲ್ ನೆತ್ತರಕೆರೆ, ದುಬೈ















