ಸಿಎಂ ಬದಲಾವಣೆ ಪ್ರಶ್ನೆ ಬಿಜೆಪಿಯಲ್ಲಿಲ್ಲ, ಯಡಿಯೂರಪ್ಪನವರೇ ಮುಖ್ಯಮಂತ್ರಿಗಳು; ನಳಿನ್ ಸ್ಪಷ್ಟನೆ
ಮಂಗಳೂರು: ಸಿಎಂ ಬದಲಾವಣೆ ಪ್ರಶ್ನೆ ಬಿಜೆಪಿಯಲ್ಲಿಲ್ಲ, ಯಡಿಯೂರಪ್ಪನವರೇ ಮುಖ್ಯಮಂತ್ರಿಗಳು; ನಳಿನ್ ಸ್ಪಷ್ಟನೆ
ಮಂಗಳೂರು: ಬಿಜೆಪಿ ಪಕ್ಷದಲ್ಲಿ ಸಿಎಂ ಬದಲಾವಣೆ ಬಗ್ಗೆ ಯಾವುದೇ ಚರ್ಚೆ, ಗೊಂದಲ, ಅಪಸ್ವರಗಳಿಲ್ಲ. ನಮ್ಮೆಲ್ಲರ ಸರ್ವಸಮ್ಮತಿಯ ನಾಯಕ ಯಡಿಯೂರಪ್ಪನವರೇ ಮುಖ್ಯಮಂತ್ರಿಗಳು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಅವರು ಸ್ಪಷ್ಟಪಡಿಸಿದರು.
ಸಿಎಂ ಬದಲಾವಣೆ ಬಗ್ಗೆ ಮೌನ ಮುರಿದು ಹೈಕಮಾಂಡ್ ನಿರ್ಧಾರಕ್ಕೆ ಬದ್ಧ ಎಂದು ಹೇಳಿರುವ ಯಡಿಯೂರಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿರುವ ಅವರು, ಸಿಎಂ ಅವರು ಪಕ್ಷದ ರಾಷ್ಟ್ರದ ನಾಯಕರು ಹೇಳಿದ್ದಲ್ಲಿ, ಹೈಕಮಾಂಡ್ ಸೂಚನೆ ನೀಡಿದರೆ ಅದಕ್ಕೆ ಸರಿಯಾಗಿ ನಡೆದುಕೊಳ್ಳುತ್ತೇನೆ ಎಂದು ಹೇಳಿದ್ದಾರೆ. ಇದು ಬಿಜೆಪಿ ವಿಶೇಷತೆಯಾಗಿದ್ದು,
ಇಲ್ಲಿ ಯಾರೂ ಅಧಿಕಾರಕ್ಕೆ ಅಂಟಿ ಕುಳಿತವರಿಲ್ಲ. ಇದು ನಮ್ಮ ಆದರ್ಶ ಎಂದು ಹೇಳಿದರು.
ಚುನಾವಣೆ ಬಳಿಕ ವಿರೋಧ ಪಕ್ಷಗಳ ಟೀಕೆ, ಅಪವಾದ, ಬೇರೆ ಬೇರೆ ಕಾರಣಗಳನ್ನಿಟ್ಟುಕೊಂಡು ಮಾಡುತ್ತಿರುವ, ರಾಜಕೀಯ ತಂತ್ರಗಾರಿಕೆ ಬಗ್ಗೆ ಯಡಿಯೂರಪ್ಪನವರಿಗೆ ಸಹಜವಾಗಿಯೇ ನೋವು ಇದ್ದೇ ಇರುತ್ತದೆ. ಆದರೂ ಕಾರ್ಯಕರ್ತನೋರ್ವ ಹೈಕಮಾಂಡ್ ಹೇಳಿದ್ದನ್ನು ಕೇಳಬೇಕು ಎಂಬ ಸ್ಪಷ್ಟ ಸಂದೇಶವನ್ನು ಯಡಿಯೂರಪ್ಪ ನೀಡಿದ್ದಾರೆ. ಆದರೆ ಪಕ್ಷದ ಮುಂದೆ ಮಾತ್ರ ಸಿಎಂ ಬದಲಾವಣೆ ಬಗ್ಗೆ ಯಾವುದೇ ಪ್ರಶ್ನೆಗಳಿಲ್ಲ. ಪಕ್ಷದೊಳಗೂ ಯಾರಿಗೂ ಭಿನ್ನಾಭಿಪ್ರಾಯಗಳಿಲ್ಲ. ಹಾಗೇನಾದರೂ ಯಾರಿಗಾದರೂ ನೋವು ಇದ್ದಲ್ಲಿ. ನಮ್ಮಲ್ಲಿ ಬಂದು ಮಾತನಾಡಬಹುದು ಎಂದು ನಳಿನ್ ಕುಮಾರ್ ಕಟೀಲು ಹೇಳಿದರು.