ಬಂಟ್ವಾಳ: ಇಲ್ಲಿನ ಬಿ.ಸಿ.ರೋಡು ರಾಷ್ಟ್ರೀಯ ಹೆದ್ದಾರಿ ಸಮೀಪದ 'ಬಂಟವಾಳ ರೈಲು ನಿಲ್ದಾಣ'ವು ಕಳೆದ 20 ವರ್ಷಗಳಿಂದ ಹೊಸ ಕಾಯಕಲ್ಪಕ್ಕೆ ನಾಗರಿಕರಿಂದ ಕೇಳಿ ಬಂದಿದ್ದ ಬೇಡಿಕೆ ಕೊನೆಗೂ ಈಡೇರಿದಂತೆ ಕಂಡು ಬಂದಿದೆ. 2024ರಲ್ಲಿ ಬಂಟ್ವಾಳ ರೈಲ್ವೆ ನಿಲ್ದಾಣ ಸಹಿತ ದೇಶದ ಹಲವು ರೈಲ್ವೆ ನಿಲ್ದಾಣದ ಅಭಿವೃದ್ಧಿ ಕಾಮಗಾರಿಯ ಶಂಕುಸ್ಥಾಪನೆಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ವರ್ಚುವಲ್ ಪ್ರಕ್ರಿಯೆ ಮೂಲಕ ನೆರವೇರಿಸಿದ್ದರು, ಇದೀಗ ಒಟ್ಟು ರೂ.26.18 ಕೋಟಿ ವೆಚ್ಚದಲ್ಲಿ ಕೇಂದ್ರ ಸರ್ಕಾರದ 'ಅಮೃತ ಭಾರತ್ ಸ್ಟೇಷನ್' ಯೋಜನೆಯಡಿ ಅಭಿವೃದ್ಧಿಗೊಂಡು ಹೈಟೆಕ್ ರೂಪ ಪಡೆದು ಇದೀಗ ಜು 17ರಂದು ಉದ್ಘಾಟನೆಗೆ ಸಿದ್ಧಗೊಂಡಿದೆ ಎಂದು ಮೈಸೂರು ವಿಭಾಗದ ಸಾರ್ವಜನಿಕ ಸಂಪರ್ಕ ಅಧಿಕಾರಿ ಗಿರೀಶ್ ಧರ್ಮರಾಜ್ ಕಲಗೊಂಡ ಇವರು ಮಾಹಿತಿ ನೀಡಿದ್ದಾರೆ.
ರಾಜ್ಯದಲ್ಲಿ ನೈರುತ್ಯ ವಲಯದ ಒಟ್ಟು 4 ರೈಲು ನಿಲ್ದಾಣಗಳ ಪೈಕಿ, ಮೈಸೂರು ವಿಭಾಗದಲ್ಲಿ ಏಕೈಕ ರೈಲು ನಿಲ್ದಾಣವಾಗಿ ಬಂಟ್ವಾಳ ಗುರುತಿಸಿಕೊಂಡಿದೆ. ಉಳಿದಂತೆ ರೂ 17.2 ಕೋಟಿ ವೆಚ್ಚದಲ್ಲಿ ಹುಬ್ಬಳ್ಳಿ ವಿಭಾಗದ ಅಳ್ಳಾವರ ರೈಲು ನಿಲ್ದಾಣ, ರೂ 15.1 ಕೋಟಿ ವೆಚ್ಚದಲ್ಲಿ ಬಾದಾಮಿ ರೈಲು ನಿಲ್ದಾಣ, ರೂ 21.14 ಕೋಟಿ ವೆಚ್ಚದಲ್ಲಿ ಕೊಪ್ಪಳ ಹೀಗೆ ಬ್ರಿಟಿಷರ ಆಳ್ವಿಕೆಯ ಕಾಲದ ಹಳೆ ರೈಲು ನಿಲ್ದಾಣಗಳು ಈಗ ಆಧುನಿಕ ಸ್ಪರ್ಶದಲ್ಲಿ ಅಭಿವೃದ್ಧಿಗೊಂಡಿದೆ.
ಕೇಂದ್ರ ಸರ್ಕಾರ ದೇಶಾದ್ಯಂತ 'ಅಮೃತ ಭಾರತ್ ಸ್ಟೇಶನ್' ಯೋಜನೆಯಡಿ ಒಟ್ಟು 1300 ರೈಲು ನಿಲ್ದಾಣಗಳನ್ನು ಅಭಿವೃದ್ಧಿಗೊಳಿಸಲು ನಿರ್ಧರಿಸಿದ್ದು, ನೈಋತ್ಯ ರೈಲ್ವೆ ವ್ಯಾಪ್ತಿಯಲ್ಲಿ ಒಟ್ಟು 61 ರೈಲು ನಿಲ್ದಾಣಗಳ ಪೈಕಿ ಈಗಾಗಲೇ ಕೆಲವೊಂದು ಕಾಮಗಾರಿ ಪೂರ್ಣಗೊಂಡಿದೆ. ಉಳಿದಂತೆ ಒಟ್ಟು 52 ರೈಲು ನಿಲ್ದಾಣಗಳ ಅಭಿವೃದ್ಧಿ ಕಾಮಗಾರಿ ಭರದಿಂದ ನಡೆಯುತ್ತಿವೆ.
ಕಳೆದ ಎರಡು ವರ್ಷಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರು ಕಾನ್ಫರೆನ್ಸ್ ಮೂಲಕ ಏಕ ಕಾಲದಲ್ಲಿ 75 ನಿಲ್ದಾಣಗಳ ಪುನರ್ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಿದ್ದರು. ಈ ಪೈಕಿ ಎರಡನೇ ಹಂತದಲ್ಲಿ ಬಂಟ್ವಾಳ
ಸೇರಿದಂತೆ ನೈರುತ್ಯ ವಲಯದ ನಾಲ್ಕು ರೈಲು ನಿಲ್ದಾಣಗಳು ಉದ್ಘಾಟನೆಗೆ ಸನ್ನದ್ಧಗೊಂಡಿದೆ ಎಂದು ಮಾಹಿತಿ ನೀಡಿದರು.
ವಿಶೇಷ ಸೌಲಭ್ಯಗಳು:
ರೈಲು ನಿಲ್ದಾಣಗಳಿಗೆ ಆಕರ್ಷಕ ಪ್ರವೇಶ ದ್ವಾರ ಮತ್ತು ನಿರ್ಗಮನ ದ್ವಾರ, ವಿಶಾಲವಾದ ಪ್ಲ್ಯಾಟ್ ಫಾರ್ಮ್ , ಮೇಲ್ಛಾವಣೆ (ರೂಫ್ ಪ್ಲಾಜಾ), ಅತ್ಯಾಧುನಿಕ ಶೈಲಿಯ ವಿಶ್ರಾಂತಿ ಕೊಠಡಿ, ಅಂಗವಿಕಲರಿಗಾಗಿ ವಿಶೇಷ ಶೌಚಗೃಹ, 12 ಮೀಟರ್ ಅಗಲದ ಪಾದಚಾರಿ ಮೇಲ್ಸೇತುವೆ, ರೈಲ್ವೆ ಭದ್ರತಾ ದಳ ಮತ್ತು ರಾಜ್ಯ ಪೊಲೀಸರ ಪ್ರತ್ಯೇಕ ವಿಶ್ರಾಂತಿ ಕೊಠಡಿ ನಿಮರ್ಾಣಗೊಂಡಿದೆ. ಮೇಲ್ಸೇತುವೆ ಏರಲು ಎರಡೂ ಬದಿ ಲಿಫ್ಟ್ ಅಳವಡಿಕೆ ನಡೆಯುತ್ತಿದೆ. ಉಳಿದಂತೆ ಕುಡಿಯುವ ನೀರು, ಗಾರ್ಡನ್, ಶೌಚಾಲಯ, ಉಪಹಾರಗೃಹ, ರೈಲು ನಿಲ್ದಾಣದ ಹೊರಗೆ ಪಾಕಿರ್ಂಗ್ ವ್ಯವಸ್ಥೆ. ದ್ವಿಚಕ್ರ ಮತ್ತು ಕಾರುಗಳಿಗೆ ಪ್ರತ್ಯೇಕ ಮಾರ್ಗ, ಪ್ರಯಾಣಿಕರಿಗೆ ಮಾಹಿತಿ ನೀಡಲು ಡಿಜಿಟಲ್ ಫಲಕ, ಉಚಿತ ವೈ-ಫೈ ಸೌಲಭ್ಯ ಒದಗಿಸುತ್ತಿರುವುದು ಇಲ್ಲಿನ ವಿಶೇಷತೆ.
ಬಂಟ್ವಾಳ ರೈಲು ನಿಲ್ದಾಣದಲ್ಲಿ ದಿನಕ್ಕೆ ಸುಮಾರು 15ಕ್ಕೂ ಮಿಕ್ಕಿ ರೈಲು ಸಂಚರಿಸುತ್ತಿದ್ದು, ತುಳುನಾಡಿನ ಸಂಸ್ಕೃತಿ ಬಿಂಬಿಸುವ ಚಿತ್ತಾರಗಳು ಎದುರು ಗೋಡೆಯಲ್ಲಿ ರಾರಾಜಿಸುತ್ತಿದೆ.ಹಿರಿಯ ಪ್ರಚಾರ ನಿರೀಕ್ಷಕ ಎಚ್.ಶಿವಕುಮಾರ್ ಮತ್ತು ಮನು ಎಚ್.ಆರ್. ಜತೆಗಿದ್ದರು.















