ಬೆಂಗಳೂರು: ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ರಾಜ್ಯಪಾಲರ ಪ್ರಾಸಿಕ್ಯೂಷನ್ಗೆ ತಡೆಯಾಜ್ಞೆ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯ ವಾದ-ವಿವಾದ ಆಲಿಸಿದ ಹೈಕೋರ್ಟ್ ಸೆ.12ಕ್ಕೆ ಮುಂದೂಡಿದ್ದಾರೆ.
ಇಂದು ಸರ್ಕಾರದ ಪರ ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ವಾದ ಮಂಡಿಸಿದರು. 17A ಅಡಿ ಪ್ರಾಸಿಕ್ಯೂಷನ್ಗೆ ಪೊಲೀಸರು ಅನುಮತಿ ಕೇಳಬಹುದು. ಅದಕ್ಕೂ ಮೊದಲು ತನಿಖಾಧಿಕಾರಿ ಪ್ರಾಥಮಿಕ ತನಿಖೆ ನಡೆಸಬೇಕು. ಪ್ರಾಥಮಿಕ ತನಿಖೆಯ ವಿವರವನ್ನು ಸಕ್ಷಮ ಪ್ರಾಧಿಕಾರಕ್ಕೆ ನೀಡಬೇಕು ಎಂದು ಲಲಿತಾ ಕುಮಾರಿ ಪ್ರಕರಣವನ್ನು ಉಲ್ಲೇಖಿಸಿದ್ದರು. ಎಫ್ಐಆರ್ ದಾಖಲಿಸುವ ಮೊದಲು ಪ್ರಾಥಮಿಕ ತನಿಖೆ ಅಗತ್ಯವೆಂದಿದೆ. ಆದರೆ 17ಎ ಅಡಿ ಅನುಮತಿಗೆ ಪ್ರಾಥಮಿಕ ತನಿಖೆ ಆಗಿರಬೇಕಿಂದಿಲ್ಲ. ವಿಚಾರಣೆ, ತನಿಖೆಗೂ ಮುನ್ನ 17 ಎ ಅನುಮತಿ ಬೇಕಲ್ಲವೇ ? ಎಂದು ಅಡ್ವೊಕೆಟ್ ಜನರಲ್ಗೆ ನ್ಯಾ.ಎಂ.ನಾಗಪ್ರಸನ್ನ ಪ್ರಶ್ನೆ ಮಾಡಿದರು. ಯಾವ ಕೇಸ್ನಲ್ಲಿ ಪ್ರಾಥಮಿಕ ತನಿಖೆ ಬೇಕೆಂಬುದನ್ನು ಸುಪ್ರೀಂಕೋರ್ಟ್ ಹೇಳಿದೆ. ಇದು 22 ವರ್ಷಕ್ಕಿಂತ ಹಳೆಯ ಕೇಸ್ ಆಗಿರುವುದರಿಂದ ಪ್ರಾಥಮಿಕ ತನಿಖೆ ಬೇಕು ಎಂದು ಎಜಿ ವಾದಿಸಿದರು.
ಪೊಲೀಸರಿಗೆ ದೂರು ನೀಡಿದ ನಂತರ 15
ದಿನಗಳಿಂದ 6 ವಾರ ಕಾಲಾವಕಾಶ ಇದೆ. ಆದರೆ ಅದಕ್ಕೆ ಕಾಯದೇ ರಾಜ್ಯಪಾಲರಿಗೆ ದೂರು ನೀಡಲಾಗಿದೆ. ಎಲ್ಲ ನಾಗರಿಕರು ಎಲ್ಲರ ವಿರುದ್ಧ ದೂರು ನೀಡಿದರೆ ಸಮಸ್ಯೆ ಆಗಲಿದೆ ಎಂದಾಗ, ಮಧ್ಯಪ್ರವೇಶಿಸಿ ನ್ಯಾಯಾಧೀಶರು, ಹೀಗಾಗಿಯೇ ಡಾ.ಅಶೋಕ್ ಕೇಸ್ನಲ್ಲಿ ಮಾರ್ಗಸೂಚಿ ರೂಪಿಸಲಾಗಿದೆ ಎಂದರು. ರಾಜ್ಯಪಾಲರು ತನಿಖಾಧಿಕಾರಿಯಿಂದ ವರದಿ ಪಡೆಯಬೇಕಿತ್ತು. ಸರ್ಕಾರಕ್ಕೆ ಶೋಕಾಸ್ ನೋಟಿಸ್ ನೀಡುವ ಬದಲು ವರದಿ ಪಡೆಯಬೇಕಿತ್ತು. ವರದಿಯ ಬಲವಿಲ್ಲದೇ ರಾಜ್ಯಪಾಲರು ಅನುಮತಿ ನೀಡಿದ್ದಾರೆ ಎಂದು ಕೇಂದ್ರ ಸರ್ಕಾರದ 17ಎ ಮಾರ್ಗಸೂಚಿ ಆಧರಿಸಿ ಎಜಿ ವಾದ ಮಂಡಿಸಿದ್ದರು. ಸಿಎಂ ಕರ್ತವ್ಯದ ಭಾಗವಾಗಿ ಈ ಕೃತ್ಯ ನಡೆದಿಲ್ಲ. ಇದಕ್ಕೆ ಅವಕಾಶ ಕೊಟ್ಟರೆ ದಿನನಿತ್ಯ ಹಲವು ಖಾಸಗಿ ದೂರು ದಾಖಲಾಗಬಹುದು. ಸಕ್ಷಮ ಪ್ರಾಧಿಕಾರಿಯೇ ಇದನ್ನೆಲ್ಲಾ ವಿಚಾರಣೆ ನಡೆಸಿದರೆ ಸಮಸ್ಯೆ ಆಗಲಿದೆ. ಪೊಲೀಸ್ ಅಧಿಕಾರಿಯ ಮೂಲಕವೇ 17ಎ ಅಡಿ ಅನುಮತಿ ಪಡೆಯಬೇಕು ಎಂದರು.















