ಬೆಂಗಳೂರು: ವಾಲ್ಮೀಕಿ ನಿಗಮ ಹಗರಣ ಸಂಬಂಧ ಕೊನೆಗೂ ಸಚಿವ ಬಿ. ನಾಗೇಂದ್ರ ತಲೆದಂಡವಾಗಿದೆ. ಹೈಕಮಾಂಡ್ ಭೇಟಿಯಾಗಿ ಬೆಂಗಳೂರಿಗೆ ವಾಪಸಾಗಿರುವ ಬೆನ್ನಲ್ಲೇ ಈ ಬಗ್ಗೆ ನಾಗೇಂದ್ರ ಮಹತ್ವದ ಘೋಷಣೆ ಮಾಡಿದ್ದಾರೆ. ಹಗರಣ ಸಂಬಂಧ ರಾಜೀನಾಮೆಗೆ ಆಗ್ರಹಿಸಿ ವಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ಮಳೆಗಾದ ವಿಧಾನ ಮಂಡಲ ಅಧಿವೇಶನದ ವೇಳೆ ತೀವ್ರ ಹೋರಾಟ ನಡೆಸಿತ್ತು. ಆ ಬೆನ್ನಲ್ಲೇ ಪಾದಯಾತ್ರೆ ಕೂಡ ಘೋಷಿಸಿತ್ತು. ಈ ನಡುವೆಯೇ ಮಂತ್ರಿಗಿರಿ ತೊರೆಯೋದಾಗಿ ನಾಗೇಂದ್ರ ತಿಳಿಸಿದ್ದಾರೆ.
ಒಂದೇ ಹಗರಣ ಸಂಬಂಧ ಎರಡನೇ ಬಾರಿ ರಾಜೀನಾಮೆ
ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಹಗರಣ ಸಂಬಂಧ ಈ ಹಿಂದೆ ಸಿಎಂ ಸಿದ್ದರಾಮಯ್ಯ ಸಚಿವ ಸಂಪುಟದಲ್ಲಿ ಸಚಿವರಾಗಿದ್ದ ನಾಗೇಂದ್ರ ಜೂನ್ 6, 2024ರಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆ ಬಳಿಕ ಸಿಎಂ ಡಿಕೆ ಶಿವಕುಮಾರ್ ಅವರ ಸಚಿವ ಸಂಪುಟದಲ್ಲಿ ಮತ್ತೆ ಮಂತ್ರಿಯಾಗಿ ಆಗಸ್ಟ್ 3, 2026ರಂದು ಪ್ರಮಾಣವಚನ ಸ್ವೀಕರಿಸಿದ್ದರು. ಆದರೆ ಇದಕ್ಕೆ ವಿಪಕ್ಷಗಳಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆ ಕೊನೆಗೂ ನಾಗೇಂದ್ರ ಹುದ್ದೆ ತೊರೆದಿದ್ದಾರೆ. ಆ ಮೂಲಕ ಒಂದೇ ಹಗರಣ ಸಂಬಂಧ ಅವರು ಎರಡು ಬಾರಿ ಸಚಿವ ಸ್ಥಾನ ಕಳೆದುಕೊಂಡಂತಾಗಿದೆ.
ಏನಿದು ವಾಲ್ಮೀಕಿ ನಿಗಮದ
ಹಗರಣ?
ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಹಗರಣವು ರಾಜ್ಯದ ಪರಿಶಿಷ್ಟ ಪಂಗಡಗಳ (ST) ಕಲ್ಯಾಣಕ್ಕಾಗಿ ಮೀಸಲಿಟ್ಟಿದ್ದ ಕೋಟ್ಯಂತರ ರೂಪಾಯಿ ಸಾರ್ವಜನಿಕ ಹಣವನ್ನು ಕಾನೂನುಬಾಹಿರವಾಗಿ ದುರ್ಬಳಕೆ ಮಾಡಿಕೊಂಡಿರುವ ಭಾರಿ ಆರ್ಥಿಕ ವಂಚನೆ ಪ್ರಕರಣವಾಗಿದೆ. ನಿಗಮದ ಲೆಕ್ಕ ಅಧೀಕ್ಷಕರಾಗಿದ್ದ ಚಂದ್ರಶೇಖರನ್ ಪಿ. ಅವರು ಮೇ 2024ರಲ್ಲಿ ಶಿವಮೊಗ್ಗದ ತಮ್ಮ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಾಗ ಈ ಹಗರಣ ಅಧಿಕೃತವಾಗಿ ಬಯಲಾಗಿತ್ತು. ನಿಗಮದ ಒಟ್ಟು 187 ಕೋಟಿ ರೂ. ಅನುದಾನದಲ್ಲಿ ಸುಮಾರು 88 ರಿಂದ 89.6 ಕೋಟಿ ರೂಪಾಯಿಗಳನ್ನು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಎಂ.ಜಿ. ರಸ್ತೆ ಶಾಖೆಯಿಂದ ನಕಲಿ ದಾಖಲೆಗಳು ಮತ್ತು ಸಹಿಗಳನ್ನು ಬಳಸಿ ಅನಧಿಕೃತ ಖಾತೆಗಳಿಗೆ ವರ್ಗಾಯಿಸಿರೋದು ಪತ್ತೆಯಾಗಿತ್ತು.















