ನೆಲ್ಯಾಡಿ : ರಾಜ್ಯ ರಾಜಧಾನಿ ಬೆಂಗಳೂರು ಮತ್ತು ಬಂದರು ನಗರಿ ಮಂಗಳೂರನ್ನು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಬರುವ ಶಿರಾಡಿ ಘಾಟ್ ರಸ್ತೆಯಲ್ಲಿ ಉಂಟಾಗಿದ್ದ ಭೂಕುಸಿತ ತೆರವು ಕಾಮಗಾರಿ ಯಶಸ್ವಿಯಾಗಿ ಮುಗಿದಿದ್ದು ಗುರುವಾರ ಮಧ್ಯಾಹ್ನ ವೇಳೆ ವಾಹನ ಸಂಚಾರ ಪುನಾರಂಭಗೊಂಡಿದೆ. ಈ ಮೂಲಕ ಮಂಗಳೂರು- ಬೆಂಗಳೂರು ನಡುವಿನ ಎಲ್ಲಾ ಪ್ರಮುಖ ಸಂಪರ್ಕ ರಸ್ತೆಗಳೂ ಸಂಚಾರಕ್ಕೆ ಮುಕ್ತಗೊಂಡಂತಾಗಿದೆ.
ಶಿರಾಡಿ ಘಾಟಿಯ ಮೇಲ್ಬಾಗ ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಮಾರನಹಳ್ಳಿ ಸಮೀಪ ಜುಲೈ 30ರಂದು ಮಧ್ಯಾಹ್ನ ಸುಮಾರಿಗೆ ಭಾರೀ ಪ್ರಮಾಣದಲ್ಲಿ ಭೂ ಕುಸಿತವಾಗಿತ್ತು. ರಸ್ತೆ ಬದಿಯ ದೊಡ್ಡ ಗುಡ್ಡ ಕುಸಿದು ಕೆಳಗೆ ಬಿದ್ದ ಪರಿಣಾಮ ಲಾರಿ ಯೊಂದು ಪಲ್ಟಿ ಆಗಿತ್ತು. ಅದರ ಸಮೀಪವೇ ಮಂಗಳೂರಿಗೆ ಹೋಗುತ್ತಿದ್ದ 2 ಕಾರು ಮತ್ತು ಒಂದು ಬೃಹತ್ ಟ್ಯಾಂಕರ್ ಸಿಲುಕಿದ್ದವು. ಈ ಸಂದರ್ಭದಲ್ಲಿ ರಾಷ್ಟ್ರೀಯ ಈ ಘಾಟ್ ರಸ್ತೆಯಲ್ಲಿ ವಾಹನ
ಸಂಚಾರ ಸ್ಥಗಿತಗೊಳಿಸಿ ರಕ್ಷಣಾ ಕಾರ್ಯಚರಣೆ ಚುರುಕುಗೊಳಿಸಲಾಗಿತ್ತು.
ಇದೀಗ 2 ದಿನಗಳ ಸತತ ಕಾರ್ಯಾಚರಣೆ ಬಳಿಕ ಆಗಸ್ಟ್ 1 ಮಧ್ಯಾಹ್ನದ ವೇಳೆ ಶಿರಾಡಿ ಘಾಟ್ ನಲ್ಲಿ ವಾಹನಗಳ ಸಂಚಾರ ಪುನಾರಂಭಗೊಂಡಿದೆ. ರಸ್ತೆಗೆ ಬಿದ್ದ ಮಣ್ಣು ತೆರವುಗೊಳಿಸಲಾಗಿದೆ. ಕೆಸರು ಮಣ್ಣಿನಲ್ಲಿ ಸಿಲುಕಿಕೊಂಡಿದ್ದ 2 ಕಂಟೈನರ್ ಹಾಗೂ 1 ಡಾಂಬರು ಸಾಗಾಟದ ಟ್ಯಾಂಕರ್ ತೆರವುಗೊಳಿಸಲಾಗಿದ್ದು ಮಧ್ಯಾಹ್ನದ ಬಳಿಕ ಸಂಚಾರ ಪುನರಾರಂಭಗೊಂಡಿದೆ. ಆದರೂ ಮಣ್ಣು ಕುಸಿಯುತ್ತಲೇ ಇದ್ದು ವಾಹನ ಸವಾರರು ಎಚ್ಚರಿಕೆಯಿಂದ ಸಂಚಾರ ಮಾಡಬೇಕಾಗಿದೆ.















