ದರ್ಶನ್‌ಗೆ ಭಾರೀ ಹಿನ್ನಡೆ| ಇನ್ನೂ 1 ವರ್ಷ ಜೈಲು ಫಿಕ್ಸ್‌ – ಕೋರ್ಟ್‌ ಆದೇಶದಲ್ಲಿ ಏನಿದೆ?

Coastal Bulletin
ದರ್ಶನ್‌ಗೆ ಭಾರೀ ಹಿನ್ನಡೆ| ಇನ್ನೂ 1 ವರ್ಷ ಜೈಲು ಫಿಕ್ಸ್‌ – ಕೋರ್ಟ್‌ ಆದೇಶದಲ್ಲಿ ಏನಿದೆ?

ನವದೆಹಲಿ: ಜಾಮೀನು ನಿರೀಕ್ಷೆಯಲ್ಲಿದ್ದ ರೇಣುಕಾಸ್ವಾಮಿ ಕೊಲೆ ಪ್ರಕರಣದ (Renukaswamy Murder Case) ಪ್ರಮುಖ ಆರೋಪಿ ನಟ ದರ್ಶನ್ (Darshan) ಅವರಿಗೆ ಸುಪ್ರೀಂ ಕೋರ್ಟ್‌ನಲ್ಲಿ ಭಾರೀ ಹಿನ್ನಡೆಯಾಗಿದ್ದು ಇನ್ನು ಒಂದು ವರ್ಷ ಜೈಲಿನಲ್ಲಿ ಕಾಲ ಕಳೆಯುವುದು ಅನಿವಾರ್ಯವಾಗಿದೆ.

ಒಂದು ವರ್ಷದೊಳಗೆ ವಿಚಾರಣಾ ಪ್ರಕ್ರಿಯೆಯನ್ನು ಪೂರ್ಣಗೊಳಿಸುವಂತೆ ಸೂಚಿಸಿದ ಕೋರ್ಟ್‌ (Supreme Court) ಅಲ್ಲಿಯವರೆಗೆ ಜಾಮೀನು ನೀಡಲು ನಿರಾಕರಿಸಿದೆ. ಈ ಆದೇಶದಿಂದ ಮುಂದಿನ ವರ್ಷ ಮೇ 15ರವರೆಗೆ ದರ್ಶನ್‌ಗೆ ಜೈಲಿನಲ್ಲಿರುವುದು ಅನಿವಾರ್ಯವಾಗಿದೆ.

ನ್ಯಾ. ಪರ್ದಿವಾಲಾ ಮತ್ತು ನ್ಯಾ. ವಿಜಯ್ ಬಿಷ್ನೋಯಿ ಅವರ ಪೀಠದಲ್ಲಿ ಇಂದು ದರ್ಶನ್‌ ಸಲ್ಲಿಸಿದ ಜಾಮೀನು(Bail) ಅರ್ಜಿಯ ವಿಚಾರಣೆ ನಡೆಯಿತು.

ವಿಚಾರಣೆ ಆರಂಭವಾಗುತ್ತಿದ್ದಂತೆ ದರ್ಶನ್ ಪರ ವಕೀಲರು, “ಜೈಲಿನಲ್ಲಿ ದರ್ಶನ್ ಅವರನ್ನು ಕ್ವಾರಂಟೈನ್ ಸೆಲ್‌ನಲ್ಲಿ ಇರಿಸಲಾಗಿದ್ದು, ಯಾರೊಂದಿಗೂ ಮಾತನಾಡಲು ಅವಕಾಶ ನೀಡುತ್ತಿಲ್ಲ. ಕುಟುಂಬ ಸದಸ್ಯರನ್ನು ಭೇಟಿ ಮಾಡಲು ಕೇವಲ ಗ್ಲಾಸ್ ತಡೆಗೋಡೆ ಮೂಲಕ ಅವಕಾಶ ನೀಡಲಾಗುತ್ತಿದೆ. 9 ತಿಂಗಳಿನಿಂದ ಜೈಲಿನಲ್ಲಿದ್ದಾರೆ” ಎಂದು ವಾದ ಮಂಡಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಧೀಶರು, “ಕ್ವಾರಂಟೈನ್ ಸೆಲ್ ಕೂಡ ಜೈಲಿನ ಒಂದು ಭಾಗವೇ ಆಗಿದೆ. ಸ್ಪೆಷಲ್ ಟ್ರೀಟ್‌ಮೆಂಟ್ ಸಿಗಬಾರದು ಎಂಬ ಉದ್ದೇಶದಿಂದ ಅಲ್ಲಿ ಇರಿಸಿರಬಹುದು. ಜೈಲು ಮ್ಯಾನ್ಯುಯಲ್ ಪ್ರಕಾರ ಅಗತ್ಯ ಸೌಲಭ್ಯಗಳನ್ನು ನೀಡಲು ಸೂಚಿಸುತ್ತೇವೆ” ಎಂದರು.

ಪ್ರಕರಣದಲ್ಲಿ ಒಟ್ಟು 272 ಸಾಕ್ಷಿಗಳಿದ್ದು, ಈವರೆಗೆ ಕೇವಲ 10 ಸಾಕ್ಷಿಗಳ ವಿಚಾರಣೆ ಮಾತ್ರ ನಡೆದಿದೆ ಎಂದು ತಿಳಿದ ನ್ಯಾಯಪೀಠವು ವಿಚಾರಣೆ ವಿಳಂಬವಾಗುತ್ತಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿತು. ಪ್ರಾಸಿಕ್ಯೂಷನ್ ವಾದ ಮಂಡಿಸಿದ ಹಿರಿಯ ವಕೀಲ ಸಿದ್ದಾರ್ಥ ಲೂತ್ರಾ, “17 ಆರೋಪಿಗಳ ಪರ ವಕೀಲರು ಪಾಟಿಸವಾಲು (Cross-examination)

ಮಾಡುವಾಗ ಒಂದೊಂದು ಸಾಕ್ಷಿಗೆ 5-6 ದಿನ ತೆಗೆದುಕೊಳ್ಳುತ್ತಿದ್ದಾರೆ. ಇದರಿಂದ ವಿಳಂಬವಾಗುತ್ತಿದೆ ಎಂದ ಉತ್ತರಿಸಿದರು.

ಇನ್ನೂ 172ಕ್ಕೂ ಹೆಚ್ಚು ಸಾಕ್ಷಿಗಳ ವಿಚಾರಣೆ ಬಾಕಿ ಇರುವಾಗ ಇಷ್ಟು ಬೇಗ ಜಾಮೀನು ತೀರ್ಮಾನಕ್ಕೆ ಬರಲು ಹೇಗೆ ಸಾಧ್ಯ? ಟ್ರಯಲ್ ನಿಧಾನವಾಗಿರುವುದು ಸತ್ಯ ಎಂದು ಅಭಿಪ್ರಾಯಪಟ್ಟರು.

ದರ್ಶನ್ ಪರ ವಕೀಲ ಮುಕುಲ್ ರೊಹಟಗಿ ಅವರ ವಾದ ಮತ್ತು ಸರ್ಕಾರದ ಪರ ವಾದಗಳನ್ನು ಆಲಿಸಿದ ನ್ಯಾಯಾಲಯ ಸದ್ಯಕ್ಕೆ ಅರ್ಹತೆ ಆಧಾರದ ಮೇಲೆ ಜಾಮೀನು ನೀಡಲು ಸಾಧ್ಯವಿಲ್ಲ ಎಂದು ಹೇಳಿ ಕೆಲ ಮಹತ್ವದ ಆದೇಶ ನೀಡಿ ಜಾಮೀನು ಅರ್ಜಿಯನ್ನು ಇತ್ಯರ್ಥ ಮಾಡಿತು.

ಸುಪ್ರೀಂ ಆದೇಶದಲ್ಲಿ ಏನಿದೆ?

ಇಂದಿನಿಂದ (ಮೇ 15) ಒಂದು ವರ್ಷದೊಳಗೆ ವಿಚಾರಣಾ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು. ಸಾಧ್ಯವಾದರೆ ದಿನಂಪ್ರತಿ ವಿಚಾರಣೆ ನಡೆಸಿ ಪ್ರಕ್ರಿಯೆಯನ್ನು ವೇಗಗೊಳಿಸಬೇಕು.

ಒಂದು ವೇಳೆ ಒಂದು ವರ್ಷದ ಅವಧಿಯಲ್ಲಿ ವಿಚಾರಣೆ ಮುಗಿಯದಿದ್ದರೆ ಅಥವಾ ಟ್ರಯಲ್‌ನಲ್ಲಿ ಯಾವುದೇ ಪ್ರಗತಿ ಕಾಣದಿದ್ದರೆ, ಅರ್ಜಿದಾರರು ಮತ್ತೆ ಜಾಮೀನಿಗಾಗಿ ಅರ್ಜಿ ಸಲ್ಲಿಸಬಹುದು.

ಇನ್-ಚಾರ್ಜ್ ಕೋರ್ಟ್‌ನಲ್ಲಿ ವಿಚಾರಣೆ ತಡವಾಗುತ್ತಿರುವ ಹಿನ್ನೆಲೆಯಲ್ಲಿ, ಸೆಷನ್ಸ್ ಕೋರ್ಟ್‌ಗೆ ಹೊಸ ನ್ಯಾಯಾಧೀಶರನ್ನು ನಿಯೋಜಿಸಲು ಹೈಕೋರ್ಟ್‌ಗೆ ಸೂಚನೆ ನೀಡಲಾಗಿದೆ.

ಚಾರ್ಜ್ ಶೀಟ್‌ನಲ್ಲಿರುವ 272 ಸಾಕ್ಷಿಗಳ ಪೈಕಿ ಅತಿ ಪ್ರಮುಖವಾದ 60 ಸಾಕ್ಷಿಗಳ ವಿಚಾರಣೆಯನ್ನು ಮೊದಲು ಪೂರ್ಣಗೊಳಿಸಬೇಕು. ಜೈಲು ಮ್ಯಾನ್ಯುಯಲ್ ಪ್ರಕಾರ ದರ್ಶನ್ ಅವರಿಗೆ ಅಗತ್ಯವಿರುವ ಸೌಲಭ್ಯಗಳನ್ನು ಜೈಲು ಸೂಪರಿಂಟೆಂಡೆಂಟ್ ಒದಗಿಸಬೇಕು.

Leave a Comment