ಕೇಂದ್ರ ಸಚಿವ ಜೆ.ಪಿ. ನಡ್ಡಾಗೆ 3 ಬೇಡಿಕೆ ಸಲ್ಲಿಸಿದ ಸಿಜೆಪಿ ನಾಯಕರು; ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಪಟ್ಟು

Coastal Bulletin
ಕೇಂದ್ರ ಸಚಿವ ಜೆ.ಪಿ. ನಡ್ಡಾಗೆ 3 ಬೇಡಿಕೆ ಸಲ್ಲಿಸಿದ ಸಿಜೆಪಿ ನಾಯಕರು; ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಪಟ್ಟು

ನವದೆಹಲಿ: ಸಂಸತ್ ಭವನದಲ್ಲಿ ಇಂದಿನಿಂದ ಮುಂಗಾರು ಅಧಿವೇಶನ (Parliament Monsoon Session) ಶುರುವಾಗಿದೆ. ಇದೇ ದಿನ ದೆಹಲಿಯಲ್ಲಿ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯನ್ನು (NEET UG Paper Leak) ಖಂಡಿಸಿ ಸಿಜೆಪಿ ನೇತೃತ್ವದಲ್ಲಿ ಚಲೋ ಸಂಸದ್ (Chalo Sansad) ಎಂಬ ಬೃಹತ್ ಪ್ರತಿಭಟನೆ ನಡೆಯುತ್ತಿದೆ. ಸಾವಿರಾರು ಯುವಕ-ಯುವತಿಯರು ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದು, ಜಂತರ್​ಮಂತರ್​​ನಲ್ಲಿ ಬೃಹತ್ ರ್ಯಾಲಿ ಆಯೋಜಿಸಲಾಗಿದೆ. ಈ ಪ್ರತಿಭಟನೆ ತೀವ್ರಗೊಂಡ ಬೆನ್ನಲ್ಲೇ ಒಂದೆಡೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಜೊತೆ ಮೂರೂವರೆ ಗಂಟೆಗಳ ಕಾಲ ಮಹತ್ವದ ಸಭೆ ನಡೆಸಿದ್ದಾರೆ. ಇನ್ನೊಂದೆಡೆ ಕೇಂದ್ರ ಆರೋಗ್ಯ ಸಚಿವ ಜೆ.ಪಿ ನಡ್ಡಾ ಅವರನ್ನು ಭೇಟಿಯಾದ ಸಿಜೆಪಿ ನಾಯಕರು ತಮ್ಮ ಬೇಡಿಕೆಗಳ ಪತ್ರವನ್ನು ಸಲ್ಲಿಸಿದ್ದಾರೆ.

ಕೊನೆಗೂ ಪ್ರತಿಭಟನಾಕಾರರ ಜೊತೆ ಮಾತುಕತೆಗೆ ಒಪ್ಪಿರುವ ಕೇಂದ್ರ ಸರ್ಕಾರ ಸಿಜೆಪಿ ವಕ್ತಾರರು ಸಲ್ಲಿಸಿದ ಮನವಿ ಪತ್ರವನ್ನು ಸ್ವೀಕರಿಸಿದೆ. ಮತ್ತೊಂದೆಡೆ, ನೀಟ್ ಪರೀಕ್ಷೆ ಹಗರಣದ ಮಾನಸಿಕ ಒತ್ತಡಕ್ಕೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿದ್ದ ನೀಟ್ ವಿದ್ಯಾರ್ಥಿಯೊಬ್ಬರ ತಂದೆಯ ವಿಶೇಷ ವಿನಂತಿಯ ಮೇರೆಗೆ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಸ್ಥಾಪಕ ಅಭಿಜೀತ್ ದಿಪ್ಕೆ ಅವರು ತಮ್ಮ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹವನ್ನು ಕೊನೆಗೊಳಿಸಿದ್ದಾರೆ.

ಪರಿಸರ ಕಾರ್ಯಕರ್ತ ಸೋನಮ್ ವಾಂಗ್ಚುಕ್ ಅವರನ್ನು ಸಫ್ದರ್ಜಂಗ್ ಆಸ್ಪತ್ರೆಗೆ ದಾಖಲಿಸಿದ ನಂತರ ಜುಲೈ 18ರಿಂದ ಅಭಿಜೀತ್ ಉಪವಾಸ ಆರಂಭಿಸಿದ್ದರು. ವಾಂಗ್ಚುಕ್ ಅವರ ಮನವಿ ಮತ್ತು ಮೃತ ವಿದ್ಯಾರ್ಥಿಯ ತಂದೆಯ ಮಧ್ಯಸ್ಥಿಕೆಯ ನಂತರ ಅವರು ಸತ್ಯಾಗ್ರಹವನ್ನು ಹಿಂಪಡೆದಿದ್ದಾರೆ. ಆದರೆ, ಶಿಕ್ಷಣ ವ್ಯವಸ್ಥೆಯ ಸುಧಾರಣೆಗಾಗಿ ತಮ್ಮ ಹೋರಾಟ ಮುಂದುವರಿಯಲಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಸಿಜೆಪಿಯ 3 ಬೇಡಿಕೆಗಳೇನು?:

ಸಿಜೆಪಿ (CJP) ವಕ್ತಾರರಾದ ಸೌರವ್ ದಾಸ್ ಮತ್ತು ಮತ್ತೊಬ್ಬ ವಕ್ತಾರರಾದ ಅಶುತೋಷ್ ರಂಕಾ ಅವರು ಸಚಿವ ಜೆ.ಪಿ. ನಡ್ಡಾ ಅವರ ನಿವಾಸದಲ್ಲಿ ಸುಮಾರು 10 ನಿಮಿಷಗಳ ಕಾಲ ಭೇಟಿಯಾಗಿ ಬೇಡಿಕೆಗಳ ಪತ್ರವನ್ನು ಹಸ್ತಾಂತರಿಸಿದ್ದಾರೆ. ಸಿಜೆಪಿಯ 3 ಪ್ರಮುಖ ಬೇಡಿಕೆಗಳೆಂದರೆ,

ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ತಕ್ಷಣ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು.

ಪರಿಸರ ಕಾರ್ಯಕರ್ತ ಸೋನಮ್ ವಾಂಗ್ಚುಕ್ ಅವರಿಗೆ ಆಸ್ಪತ್ರೆಯಿಂದ ಜಂತರ್ ಮಂತರ್ನಲ್ಲಿ ನಡೆಯುತ್ತಿರುವ ಪ್ರತಿಭಟನಾ ರ್ಯಾಲಿಗೆ ಆಗಮಿಸಲು ಅನುಮತಿ ನೀಡಬೇಕು.

ನೀಟ್ ಪರೀಕ್ಷೆ ಹಗರಣ ಹಾಗೂ ಮಾನಸಿಕ ಒತ್ತಡದಿಂದಾಗಿ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳ ಕುಟುಂಬಗಳಿಗೆ ತಲಾ 1 ಕೋಟಿ

ರೂ. ಪರಿಹಾರ ನೀಡಬೇಕು.

ಜೆಪಿ ನಡ್ಡಾ ಹೇಳಿದ್ದೇನು?:

ಪ್ರತಿಭಟನಾಕಾರರು ಮಾತುಕತೆಗೆ ಮುಂದಾದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಮತ್ತು ಸಿಜೆಪಿ (CJP) ನಾಯಕರ ನಡುವಿನ ಸಭೆಯು ಅತ್ಯಂತ ಸೌಹಾರ್ದಯುತ ವಾತಾವರಣದಲ್ಲಿ ನಡೆದಿದೆ ಎಂದು ಕೇಂದ್ರ ಸಚಿವ ಜೆ.ಪಿ. ನಡ್ಡಾ ತಿಳಿಸಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು, “ಇಂದು ಬೆಳಿಗ್ಗೆಯಿಂದಲೇ ಆರಂಭವಾದ ಚರ್ಚೆಯು ಸತತ ಹಲವು ಗಂಟೆಗಳ ಕಾಲ ಮುಂದುವರಿದಿತ್ತು. ಪ್ರತಿಭಟನಾಕಾರರ ಕಡೆಯಿಂದಲೇ ಇಂದು ಬೆಳಿಗ್ಗೆ ಮಾತುಕತೆಗಾಗಿ ಮೊದಲ ಪ್ರಸ್ತಾವನೆ ಬಂದಿತ್ತು. ಇಂದು ಬೆಳಿಗ್ಗೆ 11.50ಕ್ಕೆ ಆರಂಭಿಕ ಮೌಖಿಕ ಚರ್ಚೆಯೊಂದಿಗೆ ಮಾತುಕತೆ ಶುರುವಾಯಿತು. ನಂತರ ಪ್ರತಿಭಟನಾಕಾರರ ನಿಯೋಗದೊಂದಿಗೆ ಸುದೀರ್ಘ ಸಭೆ ನಡೆಯಿತು. ಇಂದು ಸಂಜೆ 4 ಗಂಟೆಗೆ ಪ್ರತಿಭಟನಾಕಾರರು ತಮ್ಮ ಬೇಡಿಕೆಗಳನ್ನೊಳಗೊಂಡ ಅಧಿಕೃತ ಲಿಖಿತ ಮನವಿ ಪತ್ರವನ್ನು ನನಗೆ ನೀಡಿದ್ದಾರೆ.” ಎಂದು ನಡ್ಡಾ ಹೇಳಿದ್ದಾರೆ.

ಸಂಸತ್ತಿನ ಮುಂಗಾರು ಅಧಿವೇಶನದ ಮೊದಲ ದಿನವಾದ ಇಂದು ಸಾವಿರಾರು ವಿದ್ಯಾರ್ಥಿಗಳು, ಯುವ ಸಂಘಟನೆಗಳು ಮತ್ತು ಬೆಂಬಲಿಗರು ಜಂತರ್ ಮಂತರ್‌ನಲ್ಲಿ ಒಟ್ಟಾಗಿ ಸೇರಿ ಸಂಸತ್ತಿನತ್ತ ‘ಚಲೋ ಸಂಸದ್’ ಮೆರವಣಿಗೆ ನಡೆಸಿದ್ದರಿಂದ ಇಡೀ ದೆಹಲಿಯಲ್ಲಿ ಬಿಗಿ ಪೊಲೀಸ್ ಭದ್ರತೆಯನ್ನು ಏರ್ಪಡಿಸಲಾಗಿತ್ತು.

ಏನಿದು ಕಾಕ್ರೋಚ್ ಜನತಾ ಪಾರ್ಟಿ (CJP)?:

ಸಾಮಾಜಿಕ ಜಾಲತಾಣಗಳಲ್ಲಿ ಕೇವಲ ಒಂದು ರಾಜಕೀಯ ವ್ಯಂಗ್ಯಚಿತ್ರ ಅಥವಾ ವಿಡಂಬನೆಯಾಗಿ ಸೃಷ್ಟಿಯಾಗಿದ್ದ ಈ ಗುಂಪನ್ನು ಬೋಸ್ಟನ್ ವಿಶ್ವವಿದ್ಯಾಲಯದ ಪಬ್ಲಿಕ್ ರಿಲೇಶನ್ಸ್ ಪದವೀಧರರಾದ ಅಭಿಜೀತ್ ದಿಪ್ಕೆ ಅವರು ಸ್ಥಾಪಿಸಿದ್ದಾರೆ. ಇವರು ಈ ಹಿಂದೆ ಆಮ್ ಆದ್ಮಿ ಪಾರ್ಟಿಯ (AAP) ಸೋಷಿಯಲ್ ಮೀಡಿಯಾ ತಂಡದಲ್ಲೂ ಕೆಲಸ ಮಾಡಿದ್ದರು ಎಂಬುದು ಗಮನಾರ್ಹ.

Leave a Comment