ಕವಿತೆ : ವಿಶ್ವನಾಥ ಕುಲಾಲ್ ಮಿತ್ತೂರು
ಗಿಡದ ತುದಿಯಲಾರು ಹೀಗೆ
ಹಚ್ಚಿರುವರು ಹಣತೆ?
ದಶ ದಿಕ್ಕುಗಳಿಗೆ ಕಿರಣ ಚಾಚಿ
ಬೆಳಗುತಿಹಳು ಶ್ರೀಲತೆ!
ನೀರು ಕುಡಿದ ಬೇರಿನಲ್ಲಿ
ನಡೆಯಿತೇನೋ ಮಂಥನ!
ಲೋಕಮುಖಕೆ ತೆರೆದುಕೊಂಡ
ಹೊಸ ಚಿಗುರು ಚಿಂತನ!
ಅದರಾಚೆಗೆ
ಮೊಗ್ಗು ಮರಿ
ನಿದ್ದೆಯಿಂದ ಎದ್ದಿತು!
ನಗುವನೆರೆದು ಭೃಂಗ ಕರೆದು
ಜಗದ ಹೃದಯ ಗೆದ್ದಿತು!
ಪ್ರಕೃತಿ ತಾಯಿ ತೊಟ್ಟಿಲಲ್ಲಿ
ಇಂತಹ ವಿಸ್ಮಯಗಳು ಸಾವಿರ!
ಒಳಗಣ್ಣಿನ ಅರಳು ನೋಟಕೆ
ತೆರೆದುಕೊಳುವುದು ಸಾಗರ!!










