ಉತ್ತರ ಪ್ರದೇಶ: ಇಲ್ಲಿನ ಗಾಜಿಪುರ ಜಿಲ್ಲೆಯ ಗಂಗಾ ನದಿಯಲ್ಲಿ 22 ದಿನದ ಹೆಣ್ಣು ಮಗು ಮರದ ಪೆಟ್ಟಿಗೆಯಲ್ಲಿ ತೇಲಿ ಬಂದ ಘಟನೆ ನಡೆದಿದೆ.
ನದಿ ದಡದಲಿದ್ದ ದೋಣಿ ಸಿಬ್ಬಂದಿಗೆ ದಾದ್ರಿ ಘಾಟ್ ಬಳಿ ಜೋರಾಗಿ ಮಗು ಅಳುತ್ತಿರುವುದು ಕೇಳಿಸಿದೆ. ಕೆಲ ಹೊತ್ತಿನಲ್ಲೇ ಮರದ ಪೆಟ್ಟಿಗೆಯೊಂದು ತೇಲಿ ಬರುತ್ತಿರುವುದನ್ನು ಕಂಡಿದ್ದಾರೆ. ಪೆಟ್ಟಿಗೆಯ ಬಳಿ ತೆರಳಿ ತೆರೆದು ನೋಡಿದರೆ ಅದರಲ್ಲಿ ದುಪಟ್ಟಾದಲ್ಲಿ ಸುತ್ತಲಾಗಿದ್ದ ಹೆಣ್ಣು ಮಗು ಕಾಣಿಸಿದೆ.ಪೆಟ್ಟಿಗೆಯೊಳಗೆ ಮಗುವಿನ ಜಾತಕ ಮತ್ತು ದೇವರ ಪೋಟೋ ಇಡಲಾಗಿದೆ.
ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿ, ಮಗುವನ್ನು
ಆಶಾ ಜ್ಯೋತಿ ಕೇಂದ್ರಕ್ಕೆ ಕರೆದೊಯ್ಯಲಾಗಿದೆ. ಹಾಗೆಯೇ ಆಸ್ಪತ್ರೆಗೆ ಕರೆದೊಯ್ದು ತಪಾಸಣೆ ನಡೆಸಲಾಗಿದೆ. ಈ ಮಗುವಿಗೆ ‘ಗಂಗಾ’ ಎಂದು ಹೆಸರಿಡಲಾಗಿದೆ.
ನವಜಾತ ಶಿಶುವಿನ ಸಂಪೂರ್ಣ ಜವಾಬ್ದಾರಿಯನ್ನು ಉತ್ತರ ಪ್ರದೇಶ ಸರ್ಕಾರ ವಹಿಸಿಕೊಂಡಿದೆ. ಹೆಣ್ಣು ಶಿಶುವನ್ನು ಉಳಿಸಿದ ನಾವಿಕನಿಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಧನ್ಯವಾದ ಸಲ್ಲಿಸಿದ್ದಾರೆ. ಜೊತೆಗೆ ನಾವಿಕನಿಗೆ ವಸತಿ ಸೌಕರ್ಯ ನೀಡಲಿದೆ ಮತ್ತು ಅರ್ಹ ಯೋಜನೆಗಳಿಗೆ ಶಿಫಾರಸು ಮಾಡಿದೆ.














