ಬೆಂಗಳೂರು : ಮಂಗಳೂರು-ಯಶವಂತಪುರ ವಿಶೇಷ ರೈಲಿಗೆ ಆಕರ್ಷಕ ಗಾಜಿನ ಛಾವಣಿಯನ್ನು ಹೊಂದಿರುವ ಬೋಗಿಗಳನ್ನು ಸೇರ್ಪಡೆಗೊಳಿಸುವ ಮೂಲಕ ಪ್ರಯಾಣಿಕರು ವಿಸ್ಟಾಡೋಮ್ ಕೋಚ್ನಲ್ಲಿ ಕುಳಿತು ಪಶ್ಚಿಮಘಟ್ಟದ ಪ್ರಕೃತಿ ಸೌಂದರ್ಯ ಕಣ್ತುಂಬಿಕೊಳ್ಳುವ ಅವಕಾಶ ರೈಲ್ವೇ ಇಲಾಖೆ ಒದಗಿಸಿಕೊಟ್ಟಿದೆ.
ವಾರಕ್ಕೆ 3 ಬಾರಿ ಚಲಿಸುವ ಯಶವಂತಪುರ- ಕಾರವಾರ ವಿಶೇಷ ರೈಲು (ರೈಲ್ವೆ ನಂ. 06211 /06212), ವಾರಕ್ಕೆ 3 ಬಾರಿ ಚಲಿಸುವ ಯಶವಂತಪುರ- ಮಂಗಳೂರು ಜಂಕ್ಷನ್ ವಿಶೇಷ ರೈಲು (ರೈಲ್ವೆ ನಂ. 06575/06576), ಯಶವಂತಪುರ -ಮಂಗಳೂರು (ರೈಲ್ವೆ ನಂ. 06539) ಹಾಗೂ ಮಂಗಳೂರು ಜಂಕ್ಷನ್-ಯಶವಂತಪುರ ಎಕ್ಸ್ಪ್ರೆಸ್ನಲ್ಲಿ (ರೈಲ್ವೆ ನಂ. 06540 ) ವಿಸ್ಟಾಡೋಮ್ ಬೋಗಿ ಸೇರ್ಪಡೆಯಾಗಲಿವೆ.
ಯಶವಂತಪುರದಿಂದ ಮಂಗಳೂರಿಗೆ 1,470 ರೂ. ದರ
ನಿಗದಿಪಡಿಸಲಾಗಿರುವ ಈ ವಿಶೇಷ ರೈಲಿಗೆ ಉದ್ದೇಶಿತ ಗಾಜಿನ ಛಾವಣಿಯನ್ನು ಹೊಂದಿರುವ ಆಕರ್ಷಕ ವಿಸ್ಟಾಡೋಮ್ ಬೋಗಿಗಳು ಜು. 7ರಿಂದ ಸೇರ್ಪಡೆಗೊಳ್ಳಲಿದ್ದು, ಶನಿವಾರದಿಂದ(ಜು.3) ಬುಕಿಂಗ್ ಆರಂಭವಾಗಲಿದೆ.
ಬೆಂಗಳೂರು-ಮಂಗಳೂರು ರೈಲ್ವೆ ಮಾರ್ಗ ಮದ್ಯ ಪಶ್ಚಿಮ ಘಟ್ಟವನ್ನು ಸೀಳಿಕೊಂಡು ಹೋಗುವ 55 ಕಿ.ಮೀ. ವ್ಯಾಪ್ತಿ ಹಸಿರುಮಯ ಅರಣ್ಯ, ಜಲಪಾತಗಳು, ಸೇತುವೆಗಳ ವಿಹಂಗಮ ನೋಟ,ಶಿರಾಡಿ ಘಾಟಿಯ ಸೌಂದರ್ಯವನ್ನು ರೈಲಿನೊಳಗೆ ಕುಳಿತು ಸವಿಯುವ ಭಾಗ್ಯ ಸಿಗಲಿದೆ.ಸದ್ಯ ಮಳೆಗಾಲ ಕೂಡ ಆರಂಭವಾಗಿರುವುದರಿಂದ ಪ್ರಯಾಣ ಅಹ್ಲಾದವನ್ನು ಉಂಟುಮಾಡುವುದರಲ್ಲಿ ಯಾವುದೇ ಸಂಶಯವಿಲ್ಲ.















