ಉತ್ತರಾಖಂಡ್ ಹಾಲಿ ಮುಖ್ಯಮಂತ್ರಿ ತೀರತ್ ಸಿಂಗ್ ರಾವತ್ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಪುಷ್ಕರ್ ಸಿಂಗ್ ಧಮಿ ಆಯ್ಕೆಯಾಗಿದ್ದಾರೆ. ಇಂದು ನಡೆದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಅವರನ್ನು ನೂತನ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಲಾಯಿತು.
ಖತೀಮ್ ಕ್ಷೇತ್ರದ ಹಾಲಿ ಶಾಸಕರಾಗಿರುವ ಪುಷ್ಕರ್ ಉತ್ತರಾಖಂಡ್ನ 11ನೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಹಾಲಿ ಮುಖ್ಯಮಂತ್ರಿ ತೀರತ್ ಸಿಂಗ್ ರಾವತ್ ನಿನ್ನೆ ಅಂದರೆ ಶುಕ್ರವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದರು. ಹುದ್ದೆ ವಹಿಸಿಕೊಂಡ ನಾಲ್ಕೇ ತಿಂಗಳಿಗೆ ಅವರು ಸಿಎಂ ಕುರ್ಚಿ ತೊರೆದಿದ್ದರು.
ಶಾಸಕರಲ್ಲದೆ ಸಿಎಂ ಸ್ಥಾನಕ್ಕೇರಿದ್ದ ರಾವತ್ ಅವರು ಹುದ್ದೆ ಉಳಿಸಿಕೊಳ್ಳಬೇಕಿದ್ದರೆ ಆರು ತಿಂಗಳ ಒಳಗೆ ವಿಧಾನಸಭೆಗೆ ಆಯ್ಕೆಯಾಗಬೇಕಿತ್ತು.ಕೊರೋನಾ ಪರಿಸ್ಥಿತಿಯಲ್ಲಿ ಉಪಚುನಾವಣೆ ನಡೆಸಲು ಚುನಾವಣಾ ಆಯೋಗ ಅವಕಾಶ ಕಲ್ಪಿಸಿಕೊಡುವುದು ಅನುಮಾನವೇ ಅಗಿದ್ದರಿಂದ ಸೆಪ್ಟೆಂಬರ್ 10ರ ಒಳಗೆ ಶಾಸಕರಾಗುವ ಸಾಧ್ಯತೆಯೇ ಇಲ್ಲದ ಕಾರಣಕ್ಕೆ ಅವರು ಅನಿವಾರ್ಯವಾಗಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಗಿ ಬಂತು.
ಉತ್ತರಾಖಂಡದ 10ನೇ ಮುಖ್ಯಮಂತ್ರಿಯಾಗಿ
ಅಧಿಕಾರ ಸ್ವೀಕರಿಸುತ್ತಿರುವ ಪುಷ್ಕರ್ ಸಿಂಗ್ ಧಮಿಯವರು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಆಪ್ತ.ಖತಿಮಾ ಕ್ಷೇತ್ರದಿಂದ ಎರಡು ಬಾರಿ ಗೆದ್ದು ಶಾಸಕರಾಗಿದ್ದಾರೆ. ಹಾಗೇ, ಭಗತ್ ಸಿಂಗ್ ಕೊಶಿಯಾರಿ ಮುಖ್ಯಮಂತ್ರಿಯಾಗಿದ್ದಾಗ ಇವರು ವಿಶೇಷ ಕರ್ತವ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದರು.
ಉತ್ತರಾಖಂಡ್ನಲ್ಲಿ ಬಿಜೆಪಿ ಪದೇಪದೆ ಮುಖ್ಯಮಂತ್ರಿ ಬದಲಾವಣೆಯಾಗುತ್ತಿರುವುದನ್ನು ಕಾಂಗ್ರೆಸ್ ತೀವ್ರವಾಗಿ ಟೀಕಿಸಿದೆ.ಉತ್ತರಾಖಂಡ್ ನಲ್ಲಿ ಬಿಜೆಪಿ ಅಭಿವೃದ್ಧಿ ಕಾರ್ಯಗಳನ್ನು ನಡೆಸುವುದು ಬಿಟ್ಟು ರಾಜ್ಯದಲ್ಲಿ ರಾಜಕೀಯ ಅಸ್ಥಿರತೆ ಹುಟ್ಟುಹಾಕಿದೆ. ಪದೇಪದೆ ಮುಖ್ಯಮಂತ್ರಿಯನ್ನು ಬದಲಾವಣೆ ಮಾಡುವ ಮೂಲಕ ಜನರಿಗೆ ದ್ರೋಹ ಎಸಗುತ್ತಿದೆ. ಉತ್ತರಾಖಂಡ್ ದೇವಭೂಮಿಯಾಗಿದ್ದು, ಈ ನೆಲಕ್ಕೆ ಬಿಜೆಪಿ ಅವಮಾನ ಮಾಡುತ್ತಿದೆ ಎಂದು ಕಾಂಗ್ರೆಸ್ ನಾಯಕರು ವಾಗ್ದಾಳಿ ನಡೆಸಿದ್ದಾರೆ.















