ರಾಂಚಿ: ಕೇಂದ್ರ ಸರ್ಕಾರದ 'ಅಗ್ನಿಪಥ್' ಯೋಜನೆ ವಿರೋಧಿಸಿ ಬಿಹಾರದಲ್ಲಿ ಹಿಂಸಾತ್ಮಕ ಪ್ರತಿಭಟನೆ ನಡೆಯುತ್ತಿದ್ದು, ಪರಿಸ್ಥಿತಿಯನ್ನು ಹತ್ತಿಕ್ಕಿವ ಸಲುವಾಗಿ ಸ್ಥಳೀಯ ಪೋಲಿಸರು ಪ್ರತಿಭಟನ ಕಾರರ ಮೇಲೆ ಅಶ್ರುವಾಯು ಸಿಡಿಸಿರುವ ಘಟನೆ ನಡೆದಿದೆ.
ಸೇನಾ ಆಕಾಂಕ್ಷಿಗಳು ಬಿಹಾರದ ಹಲವಾರು ಭಾಗಗಳಲ್ಲಿ ಸತತ ಎರಡನೇ ದಿನವೂ ರೈಲು ಮತ್ತು ರಸ್ತೆ ಸಂಚಾರಕ್ಕೆ ಅಡ್ಡಿಪಡಿಸಿದ್ದಾರೆ. ಬಾಟನ್ ಹಿಡಿದ ಪ್ರತಿಭಟನಾಕಾರರು ಭಭುವಾ ರಸ್ತೆ ರೈಲ್ವೆ ನಿಲ್ದಾಣದಲ್ಲಿ ಇಂಟರ್ಸಿಟಿ ಎಕ್ಸ್ಪ್ರೆಸ್ ರೈಲಿನ ಗಾಜುಗಳನ್ನು ಒಡೆದು ಒಂದು ಬೋಗಿಗೆ ಬೆಂಕಿ ಹಚ್ಚಿದರು. 'ಭಾರತೀಯ ಸೇನಾ ಪ್ರೇಮಿಗಳು' ಎಂಬ ಬ್ಯಾನರ್ ಅನ್ನು ಹಿಡಿದ ಅವರು ಹೊಸ ನೇಮಕಾತಿ
ಯೋಜನೆಯನ್ನು ತಿರಸ್ಕರಿಸಿ ಘೋಷಣೆಗಳನ್ನು ಕೂಗುತ್ತಿರುವುದು ಕಂಡು ಬಂದಿದೆ.
ಅರಾಹ್ ನ ರೈಲ್ವೆ ನಿಲ್ದಾಣದಲ್ಲಿ, ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ ಪ್ರತಿಭಟನಾಕಾರರ ಬೃಹತ್ ಗುಂಪನ್ನು ಚದುರಿಸಲು ಪೊಲೀಸರು ಅಶ್ರುವಾಯು ಶೆಲ್ ದಾಳಿ ನಡೆಸಬೇಕಾಯಿತು. ಪ್ರತಿಭಟನಾಕಾರರು ಪೀಠೋಪಕರಣಗಳನ್ನು ಹಳಿಗಳ ಮೇಲೆ ಎಸೆದು ಬೆಂಕಿ ಹಚ್ಚುವುದರಿಂದ ಉಂಟಾದ ಬೆಂಕಿಯನ್ನು ನಂದಿಸಲು ರೈಲ್ವೆ ಸಿಬ್ಬಂದಿ ಅಗ್ನಿ ಶಾಮಕಗಳನ್ನು ಬಳಕೆ ಮಾಡುತ್ತಿದ್ದಾರೆ.
















