ಕೋಲ್ಕತ್ತ : ಪಶ್ಚಿಮ ಬಂಗಾಳದಲ್ಲಿ ಇತ್ತೀಚೆಗೆ ಇಡಿ ಅಧಿಕಾರಿಗಳ ತಂಡದ ಮೇಲೆ ನೂರಾರು ಜನರ ಉದ್ರಿಕ್ತ ಗುಂಪು ದಾಳಿ ನಡೆಸಿತ್ತು. ಟಿಎಂಸಿ ನಾಯಕನ ವಿರುದ್ಧ ಇಡಿ ರೇಡ್ ನಡೆಸಲು ಅವರ ಮನೆಗೆ ಆಗಮಿಸಿದ ವೇಳೆ ಜನರು ದಾಳಿ ನಡೆಸಿದ್ದರು ಹಾಗೂ ಅವರ ಮೇಲೆ ಹಲ್ಲೆಯಾಗಿತ್ತು. ಈಗ ತೃಣಮೂಲ ಕಾಂಗ್ರೆಸ್ (ಟಿಎಂಸಿ) ನಾಯಕ ಸತ್ಯನ್ ಚೌಧರಿ ಅವರನ್ನು ಭಾನುವಾರ ಹಾಡಹಗಲೇ ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಪಶ್ಚಿಮ ಬಂಗಾಳದ ಬಹರಂಪುರದಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ. ಮುರ್ಷಿದಾಬಾದ್ನ ಪಕ್ಷದ ಪ್ರಧಾನ ಕಾರ್ಯದರ್ಶಿಯೂ ಆಗಿದ್ದ ಇವರನ್ನು ಮುರ್ಷಿದಾಬಾದ್ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಆ ವೇಳೆಗೆ ಅವರು ಮೃತಪಟ್ಟಿದ್ದರು ಎಂದು ವರದಿಯಾಗಿದೆ.
ಬೈಕ್ಗಳಲ್ಲಿ ಆಗಮಿಸಿದ ದುಷ್ಕರ್ಮಿಗಳ ಗುಂಪು ಸತ್ಯನ್ ಚೌಧರಿ ಅವರ ಮೇಲೆ ಅತ್ಯಂತ ಸಮೀಪದಿಂದ ಗುಂಡು ಹಾರಿಸಿದ್ದರು. ಬಳಿಕ ಸತ್ಯನ್ ಚೌಧರಿ ಕುಸಿದು ಬಿದ್ದಿದ್ದರು ಎಂದು ಸ್ಥಳೀಯ ಟಿಎಂಸಿ ನಾಯಕ ಹೇಳಿದ್ದಾರೆ. ಈ ಮಧ್ಯೆ, ಟಿಎಂಸಿ ನಾಯಕ ಸತ್ಯನ್ ಚೌಧರಿ ಕೊಲೆ ಕೇಸ್ ಸಂಬಂಧ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಮೂಲಗಳ ಪ್ರಕಾರ, ಸತ್ಯನ್ ಚೌಧರಿ ಅವರು ಈ ಹಿಂದೆ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಅವರಿಗೆ ನಿಕಟವಾಗಿದ್ದರು. ಆದರೆ, ನಂತರ ಟಿಎಂಸಿ ನಾಯಕರಾದ ಮುಕುಲ್ ರಾಯ್ ಜತೆ ಸೇರಿಕೊಂಡು ಆಡಳಿತಾರೂಢ ಟಿಎಂಸಿಗೆ ಸೇರ್ಪಡೆಯಾಗಿದ್ದರು. ಮತ್ತು ಆ ಪ್ರದೇಶದಲ್ಲಿ ಪ್ರಮುಖ ನಾಯಕರಾಗಿ ಗುರುತಿಸಿಕೊಂಡರು.
ಪ್ರತ್ಯಕ್ಷದರ್ಶಿಗಳ ಪ್ರಕಾರ, ಭರತ್ಪುರದ ನಿರ್ಮಾಣ ಹಂತದ ಕಟ್ಟಡವೊಂದರಲ್ಲಿ ಚೌಧರಿ ತನ್ನ ಆಪ್ತರೊಂದಿಗೆ
ಕುಳಿತಿದ್ದಾಗ ಮೂವರು ಶಸ್ತ್ರಸಜ್ಜಿತ ದುಷ್ಕರ್ಮಿಗಳು ಮೋಟಾರ್ಬೈಕ್ನಲ್ಲಿ ಬಂದು ಗುಂಡು ಹಾರಿಸಿದ್ದಾರೆ. ಕೊಲೆ ಪ್ರಕರಣ ಬೆಳಕಿಗೆ ಬಂದ ಕೂಡಲೇ ರಾಜಕೀಯ ಕೆಸರೆರಚಾಟ ನಡೆದಿದೆ. ಸಿಪಿಐಎಂ ಪಕ್ಷದವರು ಚೌಧರಿರನ್ನು ಕೊಂದಿದ್ದಾರೆ ಎಂದು ಬೆರ್ಹಾಂಪುರ ಪುರಸಭೆಯ ಅಧ್ಯಕ್ಷ ಮುಖೋಪಾಧ್ಯಾಯ ಆರೋಪಿಸಿದ್ದಾರೆ.
ಆದರೆ, ಟಿಎಂಸಿ ಆಂತರಿಕ ಜಗಳದಿಂದ ಹೀಗಾಗಿದೆ ಎಂದು ಸಿಪಿಐ (ಎಂ) ನ ಮುರ್ಷಿದಾಬಾದ್ ಜಿಲ್ಲಾ ಕಾರ್ಯದರ್ಶಿ ಝಮೀರ್ ಮೊಲ್ಲಾ ಹೇಳಿದ್ದಾರೆ. ರಿಯಲ್ ಎಸ್ಟೇಟ್ ವ್ಯವಹಾರದಿಂದಾಗಿ ಚೌಧರಿ ರನ್ನು ಕೊಲೆ ಮಾಡಲಾಗಿದೆ. ಹತ್ಯೆಗೂ ನಮಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದರು. ಇನ್ನೊಂದೆಡೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೂರ್ಯ ಪ್ರತಾಪ್ ಯಾದವ್ ಮಾತನಾಡಿ, ತನಿಖೆ ಆರಂಭಿಸಲಾಗಿದ್ದು, ಸಿಸಿಟಿವಿ ದೃಶ್ಯಾವಳಿಗಳ ಸಹಾಯದಿಂದ ದುಷ್ಕರ್ಮಿಗಳನ್ನು ಪತ್ತೆಹಚ್ಚಲು ಪೊಲೀಸರು ಪ್ರಯತ್ನಿಸುತ್ತಿರುವುದಾಗಿ ಮಾಹಿತಿ ನೀಡಿದ್ದಾರೆ.














