ಕ್ಯಾಲಿಫೋರ್ನಿಯಾ: ಕ್ಯಾಲಿಫೋರ್ನಿಯಾದಲ್ಲಿ ಹಿಂದೂ ದೇವಾಲಯದ ಮೇಲೆ ಭಾರತ ವಿರೋಧಿ ಬರಹ ಬರೆದಿದ್ದಷ್ಟೇ ಅಲ್ಲದೆ ಕಿಡಿಗೇಡಿಗಳು ದೇವಸ್ಥಾನ ಧ್ವಂಸಗೊಳಿಸಿರುವ ಘಟನೆ ನಡೆದಿದೆ. ಕ್ಯಾಲಿಫೋರ್ನಿಯಾದ ಚಿನೋ ಹಿಲ್ಸ್ನಲ್ಲಿರುವ ಅತಿದೊಡ್ಡ ಹಿಂದೂ ದೇವಾಲಯಗಳಲ್ಲಿ ಒಂದಾದ ಬಿಎಪಿಎಸ್ ಶ್ರೀ ಸ್ವಾಮಿನಾರಾಯಣ ಮಂದಿರವನ್ನು ಭಾನುವಾರ ಭಾರತ ವಿರೋಧಿ ಸಂದೇಶಗಳಿಂದ ಅಪವಿತ್ರಗೊಳಿಸಲಾಗಿದೆ.
ಬಿಎಪಿಎಸ್ ಈ ಕುರಿತು ಪೋಸ್ಟ್ ಮಾಡಿದ್ದು, ಇದು ಹಿಂದೂ ಸಮುದಾಯದ ವಿರುದ್ಧದ ಮತ್ತೊಂದು ದ್ವೇಷದ ಪ್ರದರ್ಶನವಾಗಿದೆ. ಸಮುದಾಯವು ದ್ವೇಷವನ್ನು ಎಂದಿಗೂ ಬೇರೂರಲು ಬಿಡುವುದಿಲ್ಲ ಮತ್ತು ಶಾಂತಿ ಮತ್ತು ಸಹಾನುಭೂತಿ ಮೇಲುಗೈ ಸಾಧಿಸುತ್ತದೆ ಎಂದು ಅದು ಹೇಳಿದೆ. ಚಿನೋ ಹಿಲ್ಸ್ ಪೊಲೀಸ್ ಇಲಾಖೆ ಈ ಘಟನೆಯ ಬಗ್ಗೆ ಇನ್ನೂ ಅಧಿಕೃತ ಹೇಳಿಕೆ ನೀಡಿಲ್ಲ.
ಉತ್ತರ ಅಮೆರಿಕಾದ ಹಿಂದೂಗಳ ಒಕ್ಕೂಟ (CoHNA) ಕೂಡ ಎಕ್ಸ್ನಲ್ಲಿ ಘಟನೆಯ ವಿವರಗಳನ್ನು ಹಂಚಿಕೊಂಡಿದ್ದು, ಕ್ಯಾಲಿಫೋರ್ನಿಯಾದ ಐಕಾನಿಕ್ ಬಿಎಪಿಎಸ್ ದೇವಾಲಯದ ಅಪವಿತ್ರಗೊಳಿಸುವಿಕೆಯು ಲಾಸ್ ಏಂಜಲೀಸ್ನಲ್ಲಿ ಖಲಿಸ್ತಾನ್ ಜನಾಭಿಪ್ರಾಯ ಸಂಗ್ರಹಕ್ಕೂ ಮುಂಚಿತವಾಗಿ ನಡೆದಿದೆ ಎಂದು ಹೇಳಿದೆ. ಆ ಪೋಸ್ಟ್ನಲ್ಲಿ 2022 ರಿಂದ ದೇವಾಲಯಗಳ ಮೇಲೆ
ನಡೆದ ಧ್ವಂಸ ಕೃತ್ಯದ ಇತರ ಇತ್ತೀಚಿನ ಪ್ರಕರಣಗಳನ್ನು ಪಟ್ಟಿ ಮಾಡಲಾಗಿದ್ದು, ಈ ವಿಷಯದ ಬಗ್ಗೆ ತನಿಖೆಗೆ ಕರೆ ನೀಡಲಾಗಿದೆ.
ಕಳೆದ ವರ್ಷವೂ ದೇವಾಲಯ ಧ್ವಂಸ ಪ್ರಕರಣಗಳು ನಡೆದಿವೆ, ಕ್ಯಾಲಿಫೋರ್ನಿಯಾದ ಸ್ಯಾಕ್ರಮೆಂಟೋದಲ್ಲಿರುವ ಬಿಎಪಿಎಸ್ ಶ್ರೀ ಸ್ವಾಮಿನಾರಾಯಣ ಮಂದಿರವನ್ನು ಸೆಪ್ಟೆಂಬರ್ 25 ರ ರಾತ್ರಿ ಧ್ವಂಸಗೊಳಿಸಲಾಯಿತು. ನ್ಯೂಯಾರ್ಕ್ನ ಬಿಎಪಿಎಸ್ ಮಂದಿರದ ಮೇಲೆ ಇದೇ ರೀತಿಯ ದಾಳಿ ನಡೆದ 10 ದಿನಗಳ ಒಳಗೆ ಈ ಘಟನೆ ನಡೆದಿದೆ.
ಹಿಂದೂಗಳು ಹಿಂದಿರುಗಿ ಎಂಬಂತಹ ಬರಹಗಳು ಸೇರಿದಂತೆ ಹಿಂದೂ ವಿರೋಧಿ ಸಂದೇಶಗಳು ಸ್ಥಳೀಯ ಹಿಂದೂ ಸಮುದಾಯವನ್ನು ಗಾಬರಿಗೊಳಿಸಿವೆ. ಇದಕ್ಕೆ ಪ್ರತಿಕ್ರಿಯೆಯಾಗಿ, ಸಮುದಾಯವು ಇಂತಹ ದ್ವೇಷದ ಕೃತ್ಯಗಳ ವಿರುದ್ಧ ಒಗ್ಗಟ್ಟಿನಿಂದ ನಿಲ್ಲುವ ತನ್ನ ಬದ್ಧತೆಯನ್ನು ಪುನರುಚ್ಚರಿಸಿತು.














