ಬೆಂಗಳೂರು: ಕೊರೋನಾ ಸಾಂಕ್ರಾಮಿಕ ನಿಯಂತ್ರಣಕ್ಕೆ ನಾವು ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದ್ದು, ಈ ಬಗ್ಗೆ ಯಾರೊಬ್ಬರೂ ಆತಂಕಪಡಬೇಕಾದ ಅಗತ್ಯ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ. ಕೋವಿಡ್ ಪರಿಸ್ಥಿತಿ ಕುರಿತು ಉನ್ನತ ಮಟ್ಟದ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ. ಜನಸಂದಣಿ ಇರುವ ಪ್ರದೇಶಗಳಲ್ಲಿ ಮಾಸ್ಕ್ ಧರಿಸಬೇಕು. ಮಾರ್ಗಸೂಚಿ ಬಗ್ಗೆ ಸಚಿವ ಸಂಪುಟ ಉಪ ಸಮಿತಿಯಲ್ಲಿ ಚರ್ಚಿಸಲಾಗಿದೆ. ಕ್ರಿಸ್ಮಸ್ ಹಾಗೂ ಹೊಸ ವರ್ಷಾಚರಣೆಗೆ ಯಾವುದೇ ಹೊಸ ಮಾರ್ಗಸೂಚಿ ಬಿಡುಗಡೆ ಮಾಡುವುದಿಲ್ಲ ಎಂದರು.
ಕ್ರಿಸ್ಮಸ್ ಹಾಗೂ ಹೊಸ ವರ್ಷಾಚರಣೆಗೆ ಯಾವುದೇ ನಿರ್ಬಂಧಗಳಿರುವುದಿಲ್ಲ. ಗುಂಪು ಸೇರುವ ಸಂದರ್ಭದಲ್ಲಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ಸಿಎಂ ಸಿದ್ದರಾಮಯ್ಯ ಅವರು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.ಕೊರೋನಾ ಸೋಂಕಿನ ಬಗ್ಗೆ ಭಯ ಬೇಡ. ಜಾಗೃತಿ ಇರಲಿ. ಕ್ರಿಸ್ಮಸ್ ಹಾಗೂ ಹೊಸ ವರ್ಷಾಚರಣೆಗೆ ರಾಜ್ಯ ಸರ್ಕಾರ ಯಾವುದೇ ನಿರ್ಬಂಧಗಳನ್ನು ವಿಧಿಸುವುದಿಲ್ಲ ಎಂದು ಸಿಎಂ ಸ್ಪಷ್ಡಪಡಿಸಿದ್ದಾರೆ.
ಶನಿವಾರದಿಂದ ಪ್ರತಿದಿನ 5 ಸಾವಿರ ಟೆಸ್ಟ್ ಪ್ರಾರಂಭ ಮಾಡ್ತೀವಿ. ಕ್ಯಾಬಿನೆಟ್ (Cabinet) ಸಬ್ ಕಮಿಟಿ ರಚನೆ ಮಾಡ್ತೀವಿ. ಯಾರು ಹೆಡ್ ಅಂತ ಕ್ಯಾಬಿನೆಟ್ ನಲ್ಲಿ ನಿರ್ಧಾರ ಮಾಡ್ತೀವಿ. ಕ್ಯಾಬಿನೆಟ್ ಸಬ್ ಕಮಿಟಿ ನಿರಂತರವಾಗಿ ಕೆಲಸ ಮಾಡಬೇಕು. ತಜ್ಞರ ಜೊತೆ ಸಂಯೋಜನೆಯಾಗಿ ಕೆಲಸ ಮಾಡಬೇಕು. TAC ಯಾವುದೇ ಶಿಫಾರಸು ಮಾಡಿದರು ಅದನ್ನ ಜಾರಿ ಮಾಡಬೇಕು. ಗಡಿ ಜಿಲ್ಲೆಯಲ್ಲಿ ಹೆಚ್ಚು ಟೆಸ್ಟ್ ಮಾಡಬೇಕು. ಜನಸಂದಣಿ ಇರುವಲ್ಲಿ ಮಾಸ್ಕ್ ಹಾಕಬೇಕು. 60 ವರ್ಷ ಮೇಲ್ಪಟ್ಟವರು ಕಡ್ಡಾಯವಾಗಿ ಮಾಸ್ಕ್ ಹಾಕಬೇಕು ಎಂದರು.
ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಯಲ್ಲಿ ಪ್ರತ್ಯೇಕ ವ್ಯವಸ್ಥೆ ಮಾಡಲು ಸೂಚನೆ ನೀಡಲಾಗಿದೆ. ಆಕ್ಸಿಜನ್, ವೆಂಟಿಲೇಟರ್, ಬೆಡ್, ಔಷಧಿ ಎಲ್ಲಾ ಖರೀದಿ ಮಾಡಬೇಕು. ಯಾವೆಲ್ಲ ವಸ್ತು ಬೇಕೋ ಅದನ್ನ ಖರೀದಿ ಮಾಡಿ ಒದಗಿಸಿಕೊಳ್ಳಲು ಸೂಚನೆ ನೀಡಿದ್ದೇವೆ. ಅಗತ್ಯ ಇದ್ದರೆ ಲಸಿಕೆ ಖರೀದಿ ಮಾಡ್ತೀವಿ. ಕೇಂದ್ರ ಕೊಡೋ ಮುನ್ನ ನಿವೇ ಖರೀದಿ ಮಾಡಿ ಅಂತ ಹೇಳಿದ್ದೇನೆ ಎಂದು ತಿಳಿಸಿದರು.
ಖಾಸಗಿ ಶಾಲೆಗಳು ಮಾಸ್ಕ್ ಕಡ್ಡಾಯ ಮಾಡಿರುವುದು ಒಳ್ಳೆಯದು. ಮುಂದೆ ನಾವು ತಜ್ಞರ ಜತೆ ಚರ್ಚೆ ಮಾಡಿ ಮುಂದಿನ ತೀರ್ಮಾನ ಮಾಡ್ತೀವಿ. ಸದ್ಯಕ್ಕೆ ಮಾಸ್ಕ್ ಕಡ್ಡಾಯ ಬೇಡ ಅಂತ ತಾಂತ್ರಿಕ ಸಲಹಾ ಸಮಿತಿ (TAC) ಹೇಳಿದೆ. ಮುಂದೆ TAC ಕೊಡೋ ಸಲಹೆಗಳನ್ನ ಅನುಷ್ಠಾನ ಮಾಡ್ತೀವಿ. ಕೊರೊನಾಗೆ ಡೆಡಿಕೇಟ್ ಆಸ್ಪತ್ರೆಗಳನ್ನ ಸಿದ್ದತೆ ಮಾಡಿಕೊಳ್ಳಲು ಸಲಹೆ ಬಂದಿದೆ. ಕೊರೊನಾಗೆ ಸಪರೇಟ್ ವಾರ್ಡ್ ಇದ್ದರೆ ಚಿಕಿತ್ಸೆಗೆ ಅನುಕೂಲ ಆಗಲಿದೆ. ಈ ನಿಟ್ಟಿನಲ್ಲಿ ಕ್ರಮವಹಿಸಲಾಗುತ್ತದೆ ಎಂದು ಹೇಳಿದರು.