ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಗುರುವಾರ ಅನಾರೋಗ್ಯದಿಂದ ನಗರದ ಎನಪೋಯಾ ಖಾಸಗಿ ಆಸ್ಪತ್ರೆಗೆ ದಾಖಲಾಗಿರುವ ಕೇಂದ್ರ ಮಾಜಿ ಸಚಿವ, ಹಿರಿಯ ಕಾಂಗ್ರೆಸ್ ಮುಖಂಡ ಆಸ್ಕರ್ ಫೆರ್ನಾಂಡಿಸ್ ಭೇಟಿ ಮಾಡಿ ಆಸ್ಕರ್ ಆರೋಗ್ಯದ ಬಗ್ಗೆ ಪತ್ನಿ ಬ್ಲಾಸಮ್ ಮತ್ತು ವೈದ್ಯರ ಮಾತುಕತೆ ನಡೆಸಿದರು.
ಈ ವೇಳೆ, ಪ್ರತಿಕ್ರಿಯೆ ನೀಡಿದ ಡಿ.ಕೆ ಶಿವಕುಮಾರ್, ಮಾಧ್ಯಮಗಳಲ್ಲಿ ಬರುತ್ತಿರುವಷ್ಟು ಆರೋಗ್ಯ ಹದಗೆಟ್ಟಿಲ್ಲ. ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ತಜ್ಞ ವೈದ್ಯರು ಅವರಿಗೆ ಚಿಕಿತ್ಸೆ ನೀಡುತ್ತಿದ್ದಾರೆ.ದೆಹಲಿಗೆ ಕರೆದುಕೊಂಡು ಹೋಗಿ ಏಮ್ಸ್ ನಲ್ಲಿ ಚಿಕಿತ್ಸೆ ಕೊಡಿಸಬೇಕೆಂಬ ಅಭಿಪ್ರಾಯಗಳಿದ್ದವು. ಆದರೆ, ಅಂಥಾ ಅಗತ್ಯ ಕಂಡುಬಂದಿಲ್ಲ. ದೇಶದ ವಿವಿಧ ಕಡೆಯಿಂದಲೇ ಮಂಗಳೂರಿನ ಆಸ್ಪತ್ರೆಗೆ ಬರುತ್ತಾರೆ. ಹಾಗಿದ್ದ ಮೇಲೆ ಇಲ್ಲಿಂದ ಕರೆದೊಯ್ಯಬೇಕೆಂಬ ಅವಶ್ಯಕತೆ ಇಲ್ಲ ಎಂದು
ಹೇಳಿದರು.
ಇದೇ ವೇಳೆ, ಸಿದ್ದರಾಮಯ್ಯ ಮಾತನಾಡಿ ಆಸ್ಕರ್ ಫೆರ್ನಾಂಡಿಸ್ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ನುರಿತ ವೈದ್ಯರು ಅವರನ್ನು ನೋಡುತ್ತಿದ್ದಾರೆ. ದೆಹಲಿಗೆ ಕರೆದೊಯ್ಯಬೇಕೇ ಬೇಡವೇ ಎನ್ನುವ ಬಗ್ಗೆ ವೈದ್ಯರು ನಿರ್ಧಾರ ಮಾಡುತ್ತಾರೆ. ನಾವು ಎಕ್ಸ್ಪರ್ಟ್ ಗಳಲ್ಲ. ಆದ್ರಿಂದ ನಾವು ಅದನ್ನು ನಿರ್ಧಾರ ಮಾಡಲು ಆಗಲ್ಲ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಇಲ್ಲಿಗೆ ಬರುವ ಬಗ್ಗೆ ನನಗೇನೂ ಗೊತ್ತಿಲ್ಲ ಎಂದು ಹೇಳಿದರು.















