ಮಂಗಳೂರು: ಹಿರಿಯ ಕಾಂಗ್ರೆಸ್ ಮುಖಂಡ,ರಾಜ್ಯಸಭಾ ಸದಸ್ಯ ಆಸ್ಕರ್ ಫರ್ನಾಂಡಿಸ್ ಅವರಿಗೆ ಮಂಗಳವಾರ ಮುಂಜಾನೆ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿ ಮಿದುಳಲ್ಲಿ ಹೆಪ್ಪುಗಟ್ಟಿದ್ದ ರಕ್ತವನ್ನು ಹೊರ ತೆಗೆಯುವಲ್ಲಿ ವೈದ್ಯರು ಯಶಸ್ವಿಯಾಗಿದ್ದಾರೆ.
ಖ್ಯಾತ ನ್ಯೂರೊ ಸರ್ಜನ್ ಡಾ.ಸುನಿಲ್ ಶೆಟ್ಟಿ ನೇತೃತ್ವದ ತಂಡ ಸೋಮವಾರ ಮಧ್ಯರಾತ್ರಿ ೧೨.೩೦ರಿಂದಲೇ ಶಸ್ತ್ರಕ್ರಿಯೆ ಪ್ರಾರಂಭಿಸಿದ್ದು ಮಂಗಳವಾರ ಮುಂಜಾನೆ ೪.೪೦ರ ವರೆಗೂ ನಡೆದಿದೆ.
ಮನೆಯಲ್ಲಿ ದೈಹಿಕ ವ್ಯಾಯಾಮ ಮಾಡುವ ವೇಳೆ ಬಿದ್ದಿದ್ದ ಆಸ್ಕರ್ ವೈದ್ಯಕೀಯ ತಪಾಸಣೆ ವೇಳೆ ಮಿದುಳಿನಲ್ಲಿ ರಕ್ತ ಹೆಪ್ಪುಗಟ್ಟಿರುವುದು ಕಂಡುಬಂದಿತ್ತು. ಆ ಬಳಿಕ ಆಸ್ಕರ್ ಅವರು
ಪ್ರಜ್ಞಾಹೀನರಾಗಿದ್ದರು.
ಯೆನಪೊಯ ಆಸ್ಪತ್ರೆಯ ಐಸಿಯುನಲ್ಲಿ ಅವರಿಗೆ ಚಿಕಿತ್ಸೆ ನಡೆದಿದ್ದು, ಪ್ರಜ್ಞೆ ಮರಳಲು ವೈದ್ಯರು ಕಾಯುತ್ತಿದ್ದರು. ಇದುವರೆಗೆ ಪ್ರಜ್ಞೆ ಮರಳದ ಹಿನ್ನೆಲೆಯಲ್ಲಿ ಸೋಮವಾರ ರಾತ್ರಿ ಅವರಿಗೆ ಶಸ್ತ್ರಕ್ರಿಯೆ ಕೈಗೊಳ್ಳಲು ತೀರ್ಮಾನಿಸಲಾಯಿತು. ಶಸ್ತ್ರಕ್ರಿಯೆ ಯಶಸ್ವಿಯಾಗಿ ನಡೆದಿದ್ದು ಇನ್ನೊಂದು ವಾರದಲ್ಲಿ ಆಸ್ಕರ್ ಚೇತರಿಸಿಕೊಳ್ಳುವ ನಿರೀಕ್ಷೆ ಇದೆ ಎಂದು ವೈದ್ಯರು ತಿಳಿಸಿದ್ದಾರೆ ಎಂದು ತಿಳಿದುಬಂದಿದೆ.















