ಬಂಟ್ವಾಳ :ತಾಲೂಕಿನ ಕೊಡ್ಮಾಣ್-ಪುದು ಗ್ರಾಮದ ಕಾಪಿಕಾಡ್ ನವಜ್ಯೋತಿ ಮಿತ್ರ ವೃಂದ ಇದರ ಮುಂದಿನ ವರುಷ ನಡೆಯುವ ದಶಮಾನೋತ್ಸವ ಸಂಭ್ರಮದ ಅಂಗವಾಗಿ ವಿವಿಧ ಪೂರಕ ಕಾರ್ಯಕ್ರಮಳಿಗೆ ಆ 30ರಂದು ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಸಂಘದ ಲಾಂಛನ ಅನಾವರಣ, 'ನವಜ್ಯೋತಿ ಸಹಾಯಹಸ್ತ ಯೋಜನೆ-3'ರ ಹಸ್ತಾಂತರ ಹಾಗೂ 'ಪರಿಸರ ಸಂರಕ್ಷಣಾ ಮಾಹಿತಿ ಕಾರ್ಯಾಗಾರ' ನಡೆಯಿತು.
ಸಂಘದ ಲಾಂಛನ ಹಾಗೂ ಧ್ಯೇಯ ವಾಕ್ಯವನ್ನು ಫರಂಗಿಪೇಟೆ ಶ್ರೀರಾಮ ಶಾಲೆಯ ನಿವೃತ್ತ ಮುಖ್ಯ ಶಿಕ್ಷಕ ದೇವದಾಸ್ ಕೆ.ಆರ್. ಕೊಡ್ಮಾಣ್ ಅನಾವರಣಗೊಳಿಸಿ ಮಾತನಾಡಿ, 'ಏಕತೆಯೇ ನಮ್ಮ ಶಕ್ತಿ, ಸೇವೆಯೇ ನಮ್ಮ ಧ್ಯೇಯ' ಎಂಬ ಧ್ಯೇಯ ವಾಕ್ಯದಂತೆ ಸದಸ್ಯರೆಲ್ಲರೂ ಒಗ್ಗಟ್ಟಿನಿಂದ ಸಮಾಜಮುಖಿ ಕಾರ್ಯಗಳಲ್ಲಿ ನಿರಂತರವಾಗಿ ತೊಡಗಿಸಿಕೊಳ್ಳಿ ಎಂದು ಶುಭಹಾರೈಸಿದರು.
ಸಂಸ್ಕಾರ ಭಾರತೀ ಜಿಲ್ಲಾಧ್ಯಕ್ಷ ತಾರಾನಾಥ ಕೊಟ್ಟಾರಿ ತೇವು ಪರಿಸರ ಸಂರಕ್ಷಣೆ ಬಗ್ಗೆ ಮಾತನಾಡಿ ಪುರಾಣ ಕಾಲದಿಂದಲೂ ಪ್ರಕೃತಿಯನ್ನು ಪೂಜಿಸಿಕೊಂಡು ಬಂದ ಸಂಸ್ಕೃತಿ ನಮ್ಮದು. ಅಂತಹ ಪ್ರಕೃತಿಯಲ್ಲಿ ನಾವು ಎಂದಿಗೂ ವಿಕೃತಿಯನ್ನು
ಮೆರೆಯಬಾರದು. ಪರಿಸರವನ್ನು ರಕ್ಷಿಸಿ ಮುಂದಿನ ಪೀಳಿಗೆಗೆ ಸುರಕ್ಷಿತವಾಗಿ ನೀಡುವುದು ಪ್ರತಿಯೊಬ್ಬರ ಆಧ್ಯ ಕರ್ತವ್ಯವಾಗಿದೆ ಎಂದರು.
ನವಜ್ಯೋತಿ ಸಹಾಯಹಸ್ತ ಯೋಜನೆ-3'ರ ಅಡಿಯಲ್ಲಿ ಕೊಡ್ಮಣ್ ಸರ್ಕಾರಿ ಶಾಲೆಗೆ ಮಕ್ಕಳ ಶಿಕ್ಷಣದ ಪೂರಕ ಚಟುವಟಿಕೆಗಳಿಗಾಗಿ ಸುಮಾರು 40,000 ರೂಪಾಯಿ ಮೌಲ್ಯದ ಧ್ವನಿವರ್ಧಕ ಉಪಕರಣಗಳನ್ನು ಹಸ್ತಾಂತರಿಸಲಾಯಿತು ಹಾಗೂ ಸಾರ್ವಜನಿಕರಿಗೆ ಮನೆಗೊಂದು ಉಚಿತ ಸಸಿ ಮತ್ತು ಬಟ್ಟೆ ಕೈಚೀಲಗಳನ್ನು ವಿತರಿಸಲಾಯಿತು.
ವೇದಿಕೆಯಲ್ಲಿ ನವಜ್ಯೋತಿ ಮಿತ್ರ ವೃಂದದ ಅಧ್ಯಕ್ಷ ಪುರುಷೋತ್ತಮ ಕುಲಾಲ್, ಕೊಡ್ಮಾಣ್ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕಿ ಪ್ರೇಮ ಎಂ, ಅನ್ನಪೂರ್ಣೇಶ್ವರಿ ಮಿತ್ರ ಮಂಡಳಿ ಅಧ್ಯಕ್ಷ ಉಮೇಶ್ ಪೂಜಾರಿ ಕಬೇಲ ಹಾಗೂ ಆಶಾ ಕಾರ್ಯಕರ್ತೆ ಮಾಧವಿ ಕೊಡ್ಮಾಣ್ ಉಪಸ್ಥಿತರಿದ್ದರು.
ರತ್ನಕರ ಕುಲಾಲ್ ಸ್ವಾಗತಿಸಿ, ನಿರಂಜನ್ ಕುಲಾಲ್ ಧನ್ಯವಾದವಿತ್ತು,ಶಿವರಾಜ್ ಕುಲಾಲ್ ಕಾರ್ಯಕ್ರಮ ನಿರೂಪಿಸಿದರು.
















