ಚಿಕ್ಕಮಗಳೂರು: ಹಿಂದು ಯುವತಿಯೊಂದಿಗೆ ಸ್ನೇಹ ಬೆಳೆಸಿದ್ದ ಅನ್ಯಕೋಮಿನ ಯುವಕ ಮತ್ತು ಅವನ ಸ್ನೇಹಿತರನ್ನು ಹಿಂದೂ ಯುವಕರು ಅಟ್ಟಾಡಿಸಿಕೊಂಡು ಹಲ್ಲೆ ನಡೆಸಿದ ಘಟನೆ ಕಾಫಿನಾಡು ಚಿಕ್ಕಮಗಳೂರಿನ ಮೂಡಿಗೆರೆ ಬಸ್ ನಿಲ್ದಾಣದಲ್ಲಿ ನಡೆದಿದೆ. ಮುನೀರ್, ಸಮೀರ್ ಹಲ್ಲೆಗೊಳಗಾದ ಯುವಕರು. ಹಲ್ಲೆಗೊಳಗಾದ ಇಬ್ಬರು ಯುವಕರನ್ನು ಮೂಡಿಗೆರೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಯ ವಿಡಿಯೋ ಬಸ್ ನಿಲ್ದಾಣದ ಸಿಸಿಟಿವಿ ಯಲ್ಲಿ ದಾಖಲಾಗಿದೆ. ಇನ್ನು ಹಲ್ಲೆ ಮಾಡಿದ ನಾಲ್ವರನ್ನು ಬಂಧಿಸಲಾಗಿದ್ದು ನಾಲ್ವರು ಹಿಂದು ಸಂಘಟನೆಯೊಂದರಲ್ಲಿ ಗುರುತಿಸಿಕೊಂಡಿದ್ದಾರೆ.
ಹಿಂದು ಯುವತಿಯೊಂದಿಗೆ ಒಡನಾಟ ಹೊಂದಿದ್ದ ಮುನೀರ್ ಹಾಗೂ ಸಮೀರ್ ಯುವತಿಗೆ ಬಸ್ ಸ್ಟಾಂಡ್ ಬಳಿ ಚಾಕಲೇಟ್ ನೀಡಿದ್ದಾರೆನ್ನಲಾಗುದೆ.ಮಾಹಿತಿ ಪಡೆದ ನಾಲ್ವರು ಹಿಂದೂ ಸಂಘಟನೆಯ ಕಾರ್ಯಕರ್ತರು ಲವ್ ಜಿಹಾದ್ ಶಂಕಿಸಿ ಮೂಡಿಗೆರೆ ಬಸ್ ನಿಲ್ದಾಣಕ್ಕೆ ಕಾರಿನಲ್ಲಿ ಬಂದು ಮುಸ್ಲಿಂ ಯುವಕರ ಮೇಲೆ
ಹಲ್ಲೆ ನಡೆಸಿದ್ದಾರೆ. ತಪ್ಪಿಸಿಕೊಳ್ಳಲು ಯತ್ನಿಸಿದಾಗ ಅಟ್ಟಾಡಿಸಿಕೊಂಡು ಹೊಡೆದಿದ್ದಾರೆ. ಸದ್ಯ ಹಲ್ಲೆ ನಡೆಸಿದ ನಾಲ್ವರು ಆರೋಪಿಗಳನ್ನು ಬಂಧಿಸಿದ್ದು ಪೊಲೀಸರು ವಿಚಾರಣೆ ಮುಂದುವರಿಸಿದ್ದಾರೆ.
ರಾಜ್ಯದಲ್ಲಿ ನೈತಿಕ ಪೊಲೀಸಗಿರಿ ತಡೆಯಲು ಸರ್ಕಾರ ಕಠಿಣ ಕ್ರಮಗಳನ್ನು ಕೈಗೊಂಡಿದ್ದರೂ ಪದೇಪದೆ ನೈತಿಕ ಪೊಲೀಸಗಿರಿ ಪ್ರಕರಣಗಳು ಎರಡು ಕೋಮುಗಳಿಂದಲೂ ಮರುಕಳಿಸುತ್ತಲೇ ಇದೆ.














