ಮಂಗಳೂರು: ಉಜಿರೆ ಕಾಲೇಜು ವಿದ್ಯಾರ್ಥಿನಿ ಸೌಜನ್ಯ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನೈಜ ಆರೋಪಿಯನ್ನು ಪತ್ತೆಹಚ್ಚಿ ಶಿಕ್ಷಿಸುವ ಕುರಿತ ಹಕ್ಕೊತ್ತಾಯ ವನ್ನು ಮಂಡಿಸುವುದು ಹಾಗೂ ಪ್ರಕರಣವನ್ನು ಮುಂದಿಟ್ಟು ಧರ್ಮಸ್ಥಳ ಕ್ಷೇತ್ರದ ಮೇಲೆ ಹಾಗೂ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ ಅವರ ಮೇಲೆ ಆರೋಪ,ಅವಹೇಳನವನ್ನು ಖಂಡಿಸಿ ಉಜಿರೆಯಲ್ಲಿ ಶುಕ್ರವಾರ ಶ್ರೀ ಕ್ಷೇತ್ರ ಧರ್ಮಸ್ಥಳದ ಭಕ್ತಾಭಿಮಾನಿಗಳ ಪ್ರತಿಭಟನೆ ನಡೆಯಿತು.ಸಮಾವೇಶದಲ್ಲಿ ಕ್ಷೇತ್ರದ ಭಕ್ತರು,ರಾಜಕೀಯ ಮುಖಂಡರು ಭಾಗಿಯಾದ್ದರು.
ಈ ಸಂದರ್ಭ ಸ್ಥಳಕ್ಕಾಗಮಿಸಿದ ಸೌಜನ್ಯ ತಾಯಿ ಕುಸುಮಾವತಿ ವೇದಿಕೆಗೆ ಏರಲು ಯತ್ನಿಸಿದ ಘಟನೆಯೂ ನಡೆದಿದ್ದು, ಈ ಸಂದರ್ಭ ಅವರನ್ನು ವೇದಿಕೆಗೆ ಏರುವುದನ್ನು ತಡೆಯಲಾಯಿತು. ‘ಜಸ್ಟಿಸ್ ಫಾರ್ ಸೌಜನ್ಯಾ’ ಭಿತ್ತಿಪತ್ರ ಹಿಡಿದು ಸ್ಥಳಕ್ಕೆ ಬಂದಿದ್ದ ಸೌಜನ್ಯಾ ತಾಯಿ, ಸಹೋದರಿ ಮತ್ತು ಇತರ ಮಹಿಳೆಯರು ನಾವು ಕೂಡ ನ್ಯಾಯದ ಪರ ಹೋರಾಡಲು ಬಂದಿದ್ದೇವೆ ನಮ್ಮನ್ನೇಕೆ ತಡೆಯುತ್ತಿದ್ದೀರಿ ಎಂದು ಬೇಸರ,ಆಕ್ರೋಶ
ವ್ಯಕ್ತಪಡಿಸಿದ್ದಾರೆ.
ಈ ಸಂದರ್ಭ ಮಾಧ್ಯಮಗಳೊಂದಿಗೆ ಮಾತನಾಡಿದ ಕುಸುಮಾವತಿ, ಇಷ್ಟೊಂದು ಜನರಲ್ಲಿ ನನ್ನ ಮಗಳ ಸಾವಿನ ಕುರಿತು ನ್ಯಾಯ ಕೇಳುತ್ತಿದ್ದೇನೆ ಎಂದು ಅಳಲು ತೋಡಿಕೊಂಡರು.
ನನ್ನ ಕುಟುಂಬ ಧರ್ಮಸ್ಥಳದ ವಿರುದ್ಧ ಇಲ್ಲ. ಸೌಜನ್ಯ ಹತ್ಯೆಗೈದ ಆರೋಪಿಗಳನ್ನು ಬಂಧಿಸಬೇಕು. ನನ್ನ ಮಗಳ ಸಾವಿಗೆ ನ್ಯಾಯ ಸಿಗಬೇಕು. ಇಂದಿನ ಈ ಸಮಾವೇಶ ಸೌಜನ್ಯಗೆ ನ್ಯಾಯ ಸಿಗುವ ಬಗ್ಗೆ ಆಗಬೇಕಿತ್ತು. ಆದರೆ ಅದಾಗಲಿಲ್ಲ ಎಂದಿದ್ದಾರೆ.















