ಬಾಗಲಕೋಟೆ: ರಾಜ್ಯದಲ್ಲಿ ಹೃದಯಾಘಾತ (Heart Attack) ಪ್ರಕರಣಗಳು ಹೆಚ್ಚಾದಂತೆ ಕೆಲವೊಂದು ಶಾಕಿಂಗ್ ಸುದ್ದಿಗಳು ಈಗ ಪ್ರಕಟವಾಗುತ್ತಿವೆ. ಮುಧೋಳ (Mudhol) ತಾಲೂಕಿನ ಲೋಕಾಪುರ ಪಟ್ಟಣದ ಬಳಿಯ ಚೌಡಾಪುರ ಗ್ರಾಮದ ಒಂದೇ ಕುಟುಂಬದಲ್ಲಿ 7 ಮಂದಿ ಹೃದಯಾಘಾತಕ್ಕೆ ಮೃತಪಟ್ಟಿದ್ದಾರೆ.
ಹೌದು. 15 ವರ್ಷದಲ್ಲಿ 7 ಮಂದಿಗೆ ಹೃದಯಾಘಾತಕ್ಕೆ ಬಲಿಯಾದರೆ ನಾಲ್ಕು ಮಂದಿ ಯುವ ವಯಸ್ಸಿನ ಮೊಮ್ಮಕ್ಕಳು ಬೈಪಾಸ್ ಸರ್ಜರಿ (Bypass Surgery) ಮಾಡಿಸಿಕೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ.
ತೋಟದ ವಸತಿ ಪ್ರದೇಶದಲ್ಲಿರುವ ಯಲ್ಲಪ್ಪ ಹಾಗೂ ಯಮನವ್ವ ದಂಪತಿ ಕುಟುಂಬ ಹೃದಯಬೇನೆ ಎಂಬ ಮಹಾಮಾರಿಗೆ ನರಳಿ ಹೋಗಿದೆ. ಯಲ್ಲಪ್ಪ ಯಮನವ್ವ ದಂಪತಿಗೆ ದುರಗಪ್ಪ, ಸಂತಪ್ಪ, ರಾಮಪ್ಪ, ರಾಮಣ್ಣ, ಸಂತವ್ವ, ನೀಲವ್ವ, ಹನುಮವ್ವ ಜನಿಸಿದ್ದರು.
ತಾಯಿ ಯಮನವ್ವ ಮಲಗಿದಲ್ಲೇ ಮೃತಪಟ್ಟಿದ್ದರು. ನಂತರ ವೈದ್ಯರು
ಪರಿಶೀಲಿಸಿದಾಗ ಹೃದಯಾಘಾತದಿಂದ ಮೃತಪಟ್ಟ ವಿಚಾರ ಗೊತ್ತಾಗಿತ್ತು. ನಂತರ ಸಂತಪ್ಪ, ರಾಮಪ್ಪ, ರಾಣಪ್ಪ, ಸಂತವ್ವ, ಸಂತಪ್ಪನ ಮಗಳು ಪಾರವ್ವ, ಸಂತವ್ವನ ಮಗ ಕಾಶಪ್ಪ ಎಲ್ಲರೂ ಹೃದಯ ಬೇನೆಯಿಂದಲೇ ಸಾವನ್ನಪ್ಪಿದ್ದಾರೆ.
ನೀಲವ್ವ ಮತ್ತು ಅವರ ಹಿರಿಮಗ ಈರಣ್ಣ, ಮೊಮ್ಮಗ ರಾಜು, ದುರಗಪ್ಪನ ಮೊಮ್ಮಗ ಯಲ್ಲಪ್ಪ, ಹನುಮವ್ವನ ಮೊಮ್ಮಗ ಸಂಗಮೇಶ್ ಈಗ ಬೈಪಾಸ್ ಸರ್ಜರಿ ಮಾಡಿಸಿಕೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ.
ಮೊಮ್ಮಕಳ ಚಿಕಿತ್ಸೆಗಾಗಿ ಇದ್ದ ಒಂದೂವರೆ ಎಕರೆ ಹೊಲವನ್ನೂ ಮಾರಾಟ ಮಾಡಿ ಕುಟುಂಬ ಈಗ ಸಂಕಷ್ಟದಿಂದ ಬದುಕು ಸಾಗಿಸುತ್ತಿದೆ.