ಶೃಂಗೇರಿ: ಜಾತಿಯ ಕಾರಣಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರು ಅಯೋಧ್ಯೆಯಲ್ಲಿ ಜ. 22ರಂದು ರಾಮಲಲ್ಲಾ ವಿಗ್ರಹವನ್ನು ಮುಟ್ಟಿ ಅದರ ಪ್ರಾಣ ಪ್ರತಿಷ್ಠಾಪನೆ ಮಾಡಬಹುದೇ ಎಂಬ ವಿಚಾರಕ್ಕೆ ಶೃಂಗೇರಿ ಮಠ ಸ್ಪಷ್ಟನೆ ನೀಡಿದೆ. ಜಾತಿ ಕಾರಣಕ್ಕಾಗಿ ಯಾವುದೇ ವ್ಯಕ್ತಿಯು ದೇವರನ್ನು ಮುಟ್ಟಬಾರದು ಎಂದು ಹೇಳುವುದು ತಪ್ಪು. ಹಾಗೆಯೇ ಮೋದಿಯವರು ಜಾತಿ ಕಾರಣಕ್ಕಾಗಿ ಅಯೋಧ್ಯೆಯ ಬಾಲರಾಮನನ್ನು ಮುಟ್ಟುವುದು ಎಂದು ಹೇಳಲಾಗದು ಎಂದು ಮಠದ ಧರ್ಮಾಧಿಕಾರಿ ದೈವಜ್ಞ ಕೆ.ಎನ್. ಸೋಮಯಾಜಿ ತಿಳಿಸಿದ್ದಾರೆ.
ರಾಮಮಂದಿರದ ಉದ್ಘಾಟನೆ ಸಮಯದಲ್ಲಿ ರಾಮಲಲ್ಲಾ ವಿಗ್ರಹವನ್ನು ಮೋದಿಯವರು ಮುಟ್ಟಬಹುದೇ ಎಂಬ ಚರ್ಚೆಗೆ ಉತ್ತರಿಸಿದ ಸೋಮಯಾಜಿ ಅವರು, ''ನಮ್ಮ ದೇಶದಲ್ಲಿ ಹಲವಾರು ಸಂಪ್ರದಾಯ, ಶಾಸ್ತ್ರ, ಪರಂಪರೆಗಳಿವೆ. ಎಲ್ಲದರ ನಡುವೆಯೂ ಹೊಂದಾಣಿಕೆ ಇರಲೇಬೇಕು ಎಂದೇನಿಲ್ಲ. ಅದು ಸಾಧ್ಯವೂ ಇಲ್ಲ. ಪ್ರಧಾನಿ ನರೇಂದ್ರ ಮೋದಿ ಅವರು ಯಾವ ಸನ್ಯಾಸಿಗೂ ಕಡಿಮೆ ಇಲ್ಲ'' ಎಂದು ಅವರು ಹೇಳಿದ್ದಾರೆ.
"ಈಗ 140 ಕೋಟಿ ಭಾರತೀಯರ ಪ್ರತಿನಿಧಿಯಾಗಿ 11 ದಿನಗಳ ಯಮ-ನಿಯಮಾದಿ ವ್ರತ ಆರಂಭಿಸಿದ್ದಾರೆ. ಹೀಗಾಗಿ ಅವರು ರಾಮಲಲ್ಲಾವಿಗ್ರಹ ಮುಟ್ಟಲು ಸಂಪೂರ್ಣ ಯೋಗ್ಯರು. ನನ್ನ ಪ್ರಕಾರ, ಸನ್ಯಾಸಿಗಳು, ಪುರೋಹಿತರಿಗೆ ಕಡಿಮೆ ಇಲ್ಲದಂತೆ ಕಟ್ಟುನಿಟ್ಟಿನ ಜೀವನವನ್ನು ಮೋದಿ ನಡೆಸುತ್ತಿದ್ದಾರೆ. ಎಷ್ಟೋ ದೇವಾಲಯಗಳಲ್ಲಿ ಕುಂಭಾಭಿಷೇಕಕ್ಕೆ ದೇಣಿಗೆ ಪಡೆದು, ಹಣ ನೀಡಿದವರು ವಿಗ್ರಹ ಮುಟ್ಟಿ ಅಭಿಷೇಕ ಮಾಡಲು ಅವಕಾಶ ನೀಡುತ್ತಾರೆ. ಹೀಗಿರುವಾಗ ಕೇವಲ ಜಾತಿ ಕಾರಣದಿಂದ ಮೋದಿ ಅವರು ರಾಮಲಲ್ಲಾನನ್ನು ಮುಟ್ಟಲು ಯೋಗ್ಯರಲ್ಲ ಎಂದು ಹೇಳುವುದರಲ್ಲಿ ಅರ್ಥವಿಲ್ಲ, ಅದನ್ನು ಒಪ್ಪಲೂ ಸಾಧ್ಯವಿಲ್ಲ'' ಎಂದು ಪ್ರತಿಪಾದಿಸಿದ್ದಾರೆ.
'ರಾಮ ಶೈವನೋ, ವೈಷ್ಣವನೋ ಎನ್ನುವ ಚರ್ಚೆಯೇ ಅನಗತ್ಯ. ರಾಮ ಯಾವುದೇ ಒಂದು ಪಂಥಕ್ಕೆ ಸೇರಿದವನಲ್ಲ. ಆತ ಇಡೀ ವಿಶ್ವಕ್ಕೆ ಸೇರಿದವನು. ಯಾವುದೇ ಪೂಜೆಯಲ್ಲಿಸಂಕಲ್ಪ ಮಾಡುವಾಗ 'ಶ್ರೀರಾಮ ಕ್ಷೇತ್ರೆ' ಎಂಬುದಾಗಿ ಹೇಳುತ್ತೇವೆ. ಎಲ್ಲಸಮುದಾಯದವರು, ಹಿಂದೂ ಅಲ್ಲದವರೂ ರಾಮನನ್ನು ಪೂಜಿಸಬಹುದು. ಅಷ್ಟಕ್ಕೂ ತಿರುಪತಿ ವೆಂಕಟೇಶ್ವರ ದೇಗುಲದಲ್ಲಿ ವೈಷ್ಣವ ಪಂಥದಂತೆ ಆಚರಣೆಗಳು ನಡೆಯುತ್ತಿದ್ದರೂ, ಹೆಚ್ಚಿನ ಭಕ್ತರು ವೈಷ್ಣವೇತರರೇ ಆಗಿದ್ದಾರೆ. ಈ ಹಿನ್ನೆಲೆಯಿಂದ ನೋಡಿದಾಗ ರಾಮ ಶೈವನಲ್ಲ. ಹೀಗಾಗಿ, ಶಂಕರ ಪೀಠಗಳು ಪ್ರಾಣ ಪ್ರತಿಷ್ಠೆ ಕಾರ್ಯಕ್ರಮದಲ್ಲಿ ಭಾಗವಹಿಸುವುದು ಸರಿಯಲ್ಲ ಎನ್ನುವುದು ಅರ್ಥಹೀನ,'' ಎಂದು ದೈವಜ್ಞ ಕೆ.ಎನ್. ಸೋಮಯಾಜಿ ಅವರು ಹೇಳಿದ್ದಾರೆ.
ಜ.22ರಂದು ನಡೆಯಲಿರುವ ಅಯೋಧ್ಯೆ ಶ್ರೀರಾಮ ಮಂದಿರ ಉದ್ಘಾಟನೆ ಮತ್ತು ರಾಮಲಲ್ಲಾ ವಿಗ್ರಹದ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ನಡೆಯುತ್ತಿರುವ ಹಿನ್ನೆಲೆಯಲ್ಲಿ ಆ ದಿನ ರಾಮತಾರಕ ಜಪ ಮತ್ತು ವಿಶೇಷ ಪೂಜೆ ನಡೆಸುವಂತೆ ಶೃಂಗೇರಿ ಮಠದ ಜಗದ್ಗುರು ಭಾರತೀತೀರ್ಥ ಸ್ವಾಮೀಜಿ ಹಾಗೂ
ಅವರ ಉತ್ತರಾಧಿಕಾರಿಯಾಗಿರುವ ವಿಧುಶೇಖರ ಭಾರತೀ ಸ್ವಾಮೀಜಿ ಮಠದ ಭಕ್ತರಿಗೆ ಕರೆ ನೀಡಿದ್ದಾರೆ. ಈ ವಿಷಯವನ್ನು ಶೃಂಗೇರಿ ಮಠದ ಧರ್ಮಾಧಿಕಾರಿ ದೈವಜ್ಞ ಕೆ.ಎನ್. ಸೋಮಯಾಜಿ ತಿಳಿಸಿದ್ದಾರೆ.
ಖಾಸಗಿ ಮಾಧ್ಯಮವೊಂದರ ಜತೆ ಮಾತನಾಡಿದ ಸೋಮಯಾಜಿ ಅವರು, ''ರಾಮಮಂದಿರ ಉದ್ಘಾಟನೆ ಮತ್ತು ವಿಗ್ರಹ ಪ್ರಾಣ ಪ್ರತಿಷ್ಠೆಯ ಪುಣ್ಯ ದಿನವಾದ ಜ.22ರಂದು ರಾಮ ತಾರಕ ಮಂತ್ರ ಜಪಿಸಬೇಕು. ಜೊತೆಗೆ ವಿಶೇಷ ಪೂಜೆಗಳನ್ನು ಮಾಡಬೇಕು ಎಂದು ಶ್ರೀಗಳು ಸೂಚಿಸಿದ್ದಾರೆ'' ಎಂದು ಹೇಳಿದ್ದಾರೆ. ಇದೇ ವೇಳೆ, "ರಾಮಮಂದಿರ ಪೂರ್ಣಗೊಳ್ಳುವುದಕ್ಕೂ ಮುನ್ನವೇ ಅಲ್ಲಿ ದೇವರ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ನೆರವೇರಿಸುತ್ತಿರುವುದಕ್ಕೆ ಶೃಂಗೇರಿ ಶಂಕರಾಚಾರ್ಯರ ವಿರೋಧವಿಲ್ಲ'' ಎಂದು ಕೆ.ಎನ್. ಸೋಮಯಾಜಿ ಸ್ಪಷ್ಟಪಡಿಸಿದ್ದಾರೆ.ಉತ್ತರಾಖಂಡದ ಜೋಶಿಮಠ ಮತ್ತು ಒಡಿಶಾದ ಪುರಿ ಶಂಕರಾಚಾರ್ಯರು, ರಾಮಮಂದಿರ ಉದ್ಘಾಟನೆಯನ್ನು ದೇಶದ ಶಂಕರ ಪೀಠಗಳು ವಿರೋಧಿಸುತ್ತವೆ ಎಂದು ನೀಡಿರುವ ಹೇಳಿಕೆಗೆ ಸೋಮಯಾಜಿ ಅವರು ಈ ಸ್ಪಷ್ಟನೆ ನೀಡಿದ್ದಾರೆ.ಇನ್ನು,ಶೃಂಗೇರಿ ಶಂಕರಾಚಾರ್ಯರು ಪ್ರಯಾಣದ ಸಮಸ್ಯೆ ಕಾರಣ ರಾಮಮಂದಿರ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿಲ್ಲ. ಅವರ ಪ್ರತಿನಿಧಿಯಾಗಿ ನಾನು ಪಾಲ್ಗೊಳ್ಳುತ್ತಿದ್ದೇನೆ'' ಎಂದು ವಿವರಿಸಿದ್ದಾರೆ.
''ಅಪೂರ್ಣ ಮಂದಿರ ಉದ್ಘಾಟನೆ ಸಲ್ಲದು, ಶಾಸ್ತ್ರದ ಪ್ರಕಾರ ನರೇಂದ್ರ ಮೋದಿ ಅವರು ಉದ್ಘಾಟಿಸುವುದು ಸರಿಯಲ್ಲಮತ್ತು ಶ್ರೀರಾಮ ವೈಷ್ಣವನೇ ಹೊರತು ಶೈವ ಸಂಪ್ರದಾಯಕ್ಕೆ ಸೇರಿಲ್ಲಎಂದು ತಮ್ಮ ವಿರೋಧಕ್ಕೆ ಜೋಶಿಮಠ ಮತ್ತು ಪುರಿ ಶಂಕರಾಚಾರ್ಯರು ಮೂರು ಕಾರಣಗಳನ್ನು ನೀಡಿದ್ದಾರೆ. ಅವು ಒಪ್ಪತಕ್ಕಂತಹದ್ದಲ್ಲ. ಈ ಕಾರಣಗಳಿಗೆ ಯಾವುದೇ ಸಮರ್ಥನೆಯೂ ಇಲ್ಲ,'' ಎಂದು ಸೋಮಯಾಜಿ ತಿಳಿಸಿದ್ದಾರೆ.
''ದೇವಾಲಯ ಇರಲಿ ಅಥವಾ ಮನುಷ್ಯಾಲಯ (ಮನೆ) ಇರಲಿ, ಯಾವ ಕಾಮಗಾರಿಯೂ ಪರಿಪೂರ್ಣ ಎಂದು ಹೇಳಲು ಸಾಧ್ಯವಿಲ್ಲ. ದೇವಾಲಯಗಳಲ್ಲಿಮೊದಲು ಗರ್ಭಗುಡಿ, ನಂತರ ಯಾಗಶಾಲೆ, ಸಭಾಭವನ, ಭೋಜನ ಗೃಹ... ಹೀಗೆ ಹಂತಹಂತವಾಗಿ ಕೆಲಸಗಳು ನಡೆಯುತ್ತವೆ. ದೇಶದಲ್ಲಿರಾಜ-ಮಹಾರಾಜರ ಕಾಲದಲ್ಲಿಎಷ್ಟೋ ದೇವಸ್ಥಾನಗಳ ನಿರ್ಮಾಣ ಕಾರ್ಯ ತಲೆತಲಾಂತರಗಳಿಂದಲೂ ನಡೆದಿರುವ, ತಾತ ಆರಂಭಿಸಿದ ದೇವಸ್ಥಾನವನ್ನು ಮೊಮ್ಮಗ ಪೂರ್ಣಗೊಳಿಸಿದ ಉದಾಹರಣೆಗಳಿವೆ. ಅಯೋಧ್ಯೆಯಲ್ಲಿಗರ್ಭಗುಡಿ ಪೂರ್ಣಗೊಂಡಿದೆ. ಹೀಗಾಗಿ ಆಗಮ ಶಾಸ್ತ್ರದ ಪ್ರಕಾರ ನೋಡಿದರೂ ಉದ್ಘಾಟನೆಯ ನಿರಾಕರಣೆಯನ್ನು ಒಪ್ಪತಕ್ಕದ್ದಲ್ಲ,'' ಎಂದು ವಿವರಿಸಿದ್ದಾರೆ.














