ಪಶ್ಚಿಮ ಬಂಗಾಳದಲ್ಲಿ ಸಾಧುಗಳ ಮೇಲೆ ಮಾರಣಾಂತಿಕವಾಗಿ ಹಲ್ಲೆ

Coastal Bulletin
ಪಶ್ಚಿಮ ಬಂಗಾಳದಲ್ಲಿ ಸಾಧುಗಳ ಮೇಲೆ ಮಾರಣಾಂತಿಕವಾಗಿ ಹಲ್ಲೆ

ಕೋಲ್ಕತಾ: ಅಪಹರಣಕಾರರು ಎಂಬ ಅನುಮಾನದ ಮೇಲೆ ಗುಂಪೊಂದು ಮೂವರು ಸಾಧುಗಳನ್ನು ನಗ್ನಗೊಳಿಸಿ ಭೀಕರವಾಗಿ ಹಲ್ಲೆ ನಡೆಸಿದ ಘಟನೆ ಪಶ್ಚಿಮ ಬಂಗಾಳದ ಪುರುಲಿಯಾ ಜಿಲ್ಲೆಯಲ್ಲಿ ನಡೆದಿದೆ. ಪೊಲೀಸರು ಮಧ್ಯಪ್ರವೇಶಿಸಿ ಸಾಧುಗಳನ್ನು ಕಾಪಾಡಿದ್ದು, ಈ ಘಟನೆಗೆ ಸಂಬಂಧಿಸಿದಂತೆ 12 ಜನರನ್ನು ಬಂಧಿಸಿದ್ದಾರೆ. ಉತ್ತರ ಪ್ರದೇಶದಿಂದ ಪಶ್ಚಿಮ ಬಂಗಾಳದ ಗಂಗಾಸಾಗರ್‌ಗೆ ಪ್ರಯಾಣಿಸುತ್ತಿದ್ದ ಮೂವರು ಸಾಧುಗಳು ಪುರುಲಿಯಾ ಜಿಲ್ಲೆಯ ಬಳಿ ಬಾಲಕಿಯರನ್ನು ವಿಳಾಸ ಕೇಳಿದ್ದಾರೆ. ಮುಖಕ್ಕೆಲ್ಲಾ ಭಸ್ಮ ಹಚ್ಚಿಕೊಂಡಿದ್ದ ಹಾಗೂ ಬೇರೆ ಭಾಷೆಯಲ್ಲಿ ಮಾತನಾಡುತ್ತಿದ್ದ ಇವರನ್ನು ನೋಡಿ ಬಾಲಕಿಯರು ಓಡಿ ಹೋಗಿದ್ದಾರೆ. ತಕ್ಷಣವೇ ಮೂವರು ಸಾಧುಗಳನ್ನು ಅಡ್ಡಗಟ್ಟಿದ ಜನರ ಗುಂಪು ಅವರನ್ನು ಭೀಕರವಾಗಿ ಥಳಿಸಿದೆ. ಮಧ್ಯಪ್ರವೇಶಿಸಿದ ಪೊಲೀಸರು ಗುಂಪಿನಿಂದ ಸಾಧುಗಳನ್ನು ರಕ್ಷಿಸಿ, ಅವರನ್ನು ಗಂಗಾನಗರಕ್ಕೆ ಕಳುಹಿಸಿದ್ದಾರೆ.

ಇತ್ತೀಚೆಗಷ್ಟೇ ಪಶ್ಚಿಮ ಬಂಗಾಳದಲ್ಲಿ ಇ.ಡಿ. ಅಧಿಕಾರಿಗಳ ಮೇಲಿನ ದಾಳಿಯನ್ನು ಉಲ್ಲೇಖಿಸಿರುವ ಬಿಜೆಪಿ, ರಾಜ್ಯದಲ್ಲಿ ಆಡಳಿತ ಯಂತ್ರ ಸಂಪೂರ್ಣವಾಗಿ ಹದಗೆಟ್ಟಿದೆ. ಜನರು ಸಾಧುಗಳ ಮೇಲೆ ಹಲ್ಲೆ ನಡೆಸಿದರೂ ಸಹ ಇದನ್ನು

ತಡೆಯುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ವಾಗ್ದಾಳಿ ನಡೆಸಿದೆ. 2020ರಲ್ಲಿ ಮಕ್ಕಳ ಕಳ್ಳರು ಎಂಬ ಅನುಮಾನದ ಮೇಲೆ ಮಹಾರಾಷ್ಟ್ರದ ಪಾಲ್ಘಾರ್‌ನಲ್ಲಿ ಗುಂಪೊಂದು ಇಬ್ಬರು ಸಾಧುಗಳ ಮೇಲೆ ಹಲ್ಲೆ ನಡೆಸಿ ಹತ್ಯೆ ಮಾಡಿತ್ತು.

Leave a Comment