ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ನಟ ದರ್ಶನ್ ತೂಗುದೀಪ ಅವರು ಬಿಡುವು ಮಾಡಿಕೊಂಡು ಟೆಂಪಲ್ ರನ್ ಮಾಡುತ್ತಿದ್ದಾರೆ. ಜೈಲಿನಿಂದ ಹೊರಬಂದ ಮೇಲೆ ಮೈಸೂರಿನ ಚಾಮುಂಡೇಶ್ವರಿ ದೇವಸ್ಥಾನ ಸೇರಿ ಹಲವು ದೇವಸ್ಥಾನಗಳಿಗೆ ಭೇಟಿ ನೀಡಿದ್ದರು. ಇದೀಗ ಅವರು ಕೇರಳ ಪ್ರಸಿದ್ಧ ದೇವಸ್ಥಾನಕ್ಕೆ ತಮ್ಮ ಕುಟುಂಬ ಸಮೇತ ತೆರಳಿರುವುದು ಅಚ್ಚರಿ ಮೂಡಿಸಿದೆ. ಏಕೆಂದರೆ ಇದು ಶತ್ರು ಸಂಹಾರ ಹೋಮಕ್ಕೆ ಪ್ರಸಿದ್ಧಿ ಪಡೆದಿರುವ ದೇವಸ್ಥಾನ ಎನ್ನಲಾಗಿದ್ದು, ರಾಜಕಾರಣಿಗಳು ಹೆಚ್ಚಾಗಿ ಈ ದೇವಸ್ಥಾನಕ್ಕೆ ತೆರಳಿ ತಮ್ಮ ಶತ್ರುಗಳ ಸಂಹಾರಕ್ಕೆ ವಿಶೇಷ ಹೋಮ ಮಾಡಿಸಿ ಬರುವುದರಿಂದಲೇ ಪ್ರಸಿದ್ಧಿಯಾಗಿದೆ. ಈಗ ದರ್ಶನ್ ಅವರು ಕೂಡ ಇಲ್ಲಿಗೆ ತೆರಳಿರುವುದು ಕುತೂಹಲ ಮೂಡಿಸಿದೆ.
ರೇಣುಕಾಸ್ವಾಮಿ ಕೊಲೆ ಕೇಸ್ನಿಂದ ಸಂಕಷ್ಟಗಳ ಸರಮಾಲೆಯಲ್ಲಿ ಸಿಲುಕಿದ್ದ ನಟ ದರ್ಶನ್ ಅವರು ಹಲವು ತಿಂಗಳ ಕಾಲ ಜೈಲು ವಾಸ, ಅನಾರೋಗ್ಯ ಸೇರಿದಂತೆ ಕುಟುಂಬ ಹಾಗೂ ಚಿತ್ರರಂಗದಿಂದಲೂ ದೂರಾಗಿದ್ದರು. ಬಳಿಕ ಜಾಮೀನು ವಿಚಾರವಾಗಿ ಕೋರ್ಟ್ ಕೇಸ್ ಅಲೆದಾಟ ಈಗಲೂ ಇದೆ. ಇದರ ನಡುವೆ ಆರೋಗ್ಯ ಚೇತರಿಸಿಕೊಂಡು ಸಿನಿಮಾಗಳತ್ತ ಮುಖ ಮಾಡಿರುವ ದರ್ಶನ್ ಅವರ ಇತ್ತೀಚಿನ ನಡೆ ಕುತೂಹಲ ಮೂಡಿಸಿತ್ತು. ತಮ್ಮ ಆಪ್ತ ಬಳಗದವರಿಂದಲೇ ತುಸು ಅಂತರ ಕಾಯ್ದುಕೊಳ್ಳುವ ಮೂಲಕ ಅಚ್ಚರಿಯೂ ಮೂಡಿಸಿದ್ದಾರೆ. ಈಗ ಶತ್ರು ಸಂಹಾರಕ್ಕೆ ಹೆಸರುವಾಸಿಯಾದ ದೇವಸ್ಥಾನಕ್ಕೆ ಕುಟುಂಬದೊಂದಿಗೆ ತೆರಳಿರುವುದು ಹಲವು ಪ್ರಶ್ನೆಗಳನ್ನು ಮುಂದಿಟ್ಟಿದೆ.
ಇತ್ತೀಚೆಗೆ ತಾವು ಎದುರಿಸುತ್ತಿರುವ ಸಂಕಷ್ಟಗಳಿಂದ ಪಾರು ಮಾಡುವಂತೆ ದೇವರ ಮೊರೆ ಹೋಗಿರುವ ದರ್ಶನ್ ಅವರು ಸಮಯ ಸಿಕ್ಕಾಗಗೆಲ್ಲ ಟೆಂಪಲ್ ರನ್ ಮಾಡುತ್ತಲೇ ಇದ್ದಾರೆ. ಇದೀಗ ತಮ್ಮ ಶತ್ರುಗಳ ವಿನಾಶಕ್ಕೆ ಕೇರಳದ ಈ ವಿಶೇಷ ದೇವಾಲಯದ ಮೊರೆ ಹೋಗಿದ್ದಾರೆ ಎಂದು ಹೇಳಲಾಗುತ್ತಿದೆ. ಕೇರಳದ ಕಣ್ಣೂರಿನಲ್ಲಿರುವ ಪ್ರಸಿದ್ಧ ಶ್ರೀಮಡಾಯಿ ಕಾವು ಭಗವತಿ ದೇವಸ್ಥಾನಕ್ಕೆ ದರ್ಶನ್ ಭೇಟಿ ನೀಡಿ ದೇವರ ದರ್ಶನ ಪಡೆದಿದ್ದಾರೆ. ಕುಟುಂಬದೊಂದಿಗೆ ದರ್ಶನ್
ಅವರು ದೇವಸ್ಥಾನಕ್ಕೆ ತೆರಳಿರುವ ವಿಡಿಯೋ ಕೂಡ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ನಟ ದರ್ಶನ್ ಅವರೊಂದಿಗೆ ಪತ್ನಿ ವಿಜಯಲಕ್ಷ್ಮಿ, ಮಗ ವಿನೀಶ್, ನಟ ಧನ್ವೀರ್ ಗೌಡ ಕೂಡ ಕೇರಳದ ದೇವಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ. ರಾಜಕಾರಣಿಗಳು ಹಾಗೂ ಉದ್ಯಮಿಗಳು ಶತ್ರು ಸಂಹಾರದ ಧಾರ್ಮಿಕ ನಂಬಿಕೆ ಮೇರೆಗೆ ಇಲ್ಲಿಗೆ ಬಂದು ಹೋಮದಲ್ಲಿ ಪಾಲ್ಗೊಳ್ಳುವುದು ವಾಡಿಕೆ. ಹಾಗಾಗಿ ದರ್ಶನ್ ಅವರು ಕೂಡ ಇಲ್ಲಿ ಶತ್ರು ಸಂಹಾರ ಹೋಮ ಮಾಡಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಈ ವಿಶೇಷ ಪೂಜೆಯನ್ನು ಕೆಲವರು ಗೌಪ್ಯವಾಗಿ ಮಾಡಿಸುತ್ತಾರೆ ಎಂದೂ ತಿಳಿದುಬಂದಿದೆ.
ಒಂದು ವೇಳೆ ಶತ್ರು ಸಂಹಾರ ಪೂಜೆ ಮಾಡಿಸಿದ್ದರೂ ಎಂದರೂ ದರ್ಶನ್ ಅವರಿಗೆ ಸದ್ಯ ಶತ್ರುಗಳು ಯಾರಿದ್ದಾರೆ? ಅವರಿಗೆ ಆ ಪೂಜೆಯ ಅಗತ್ಯವಾದರೂ ಏನು? ಎಂಬ ಪ್ರಶ್ನೆ ಕೂಡ ಎದುರಾಗಿದೆ. ದರ್ಸನ್ ಪತ್ನಿ ವಿಜಯಲಕ್ಷ್ಮಿ ಅವರು ಕೂಡ ದೇವರನ್ನು ಹೆಚ್ಚಾಗಿ ನಂಬುತ್ತಾರೆ. ದರ್ಶನ್ ಅವರು ಜೈಲಿನಲ್ಲಿದ್ದಾಗಲೂ ಅವರು ವಿವಿಧ ದೇವಸ್ಥಾನಗಳಿಗೆ ಭೇಟಿ ನೀಡಿ ಹರಕೆಯೂ ಹೊತ್ತಿದ್ದರು. ಈಗ ಕೇರಳದ ಪ್ರಸಿದ್ಧ ದೇವಸ್ಥಾನಕ್ಕೆ ಭೇಟಿ ನೀಡಿರುವುದು ಸಾಮಾನ್ಯ ಪೂಜೆಗಂತೂ ಅಲ್ಲ ಎಂದೇ ಹೇಳಲಾಗುತ್ತಿದೆ.














