ಕಾಸರಗೋಡು: ನಳಿನ್ ಕುಮಾರ್ ಕಟೀಲ್ಗೆ (Nalin Kumar Kateel) ಮತ್ತೆ ರಾಜಕೀಯ ಸ್ಥಾನಮಾನ ಸಿಗಲಿ ಎಂದು ನಾನು ಪ್ರಾರ್ಥಿಸುತ್ತೇನೆ ಎಂದು ಮಧೂರು ದೇವಸ್ಥಾನದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ (DK Shivakumar) ಪ್ರಾರ್ಥಿಸಿದ್ದಾರೆ.
ಕಾಸರಗೋಡು ಜಿಲ್ಲೆ ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದ (Madhur Temple) ಬ್ರಹ್ಮಕಲಶೋತ್ಸವದ ಹಿನ್ನೆಲೆ ಡಿಕೆ ಶಿವಕುಮಾರ್ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ನಳಿನ್ ಕುಮಾರ್ ಕಟೀಲ್ ಹಾಗೂ ಡಿಕೆ ಶಿವಕುಮಾರ್ ಒಂದೇ ವೇದಿಕೆಯಲ್ಲಿ ಜೊತೆಯಾಗಿದ್ದರು. ಈ ವೇಳೆ ನಳಿನ್ ಕುಮಾರ್ ಪರ ಡಿಕೆಶಿ ಬ್ಯಾಟಿಂಗ್ ಮಾಡಿದ್ದಾರೆ.
ಧಾರ್ಮಿಕ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಡಿಕೆಶಿ, ನನ್ನ ಮಿತ್ರ, ಮಾಜಿ ಲೋಕಸಭಾ ಸದಸ್ಯ ನಳಿನ್
ಕುಮಾರ್ ಕಟೀಲ್ ಇದ್ದಾರೆ. ಅವರು ಮಾಜಿ ಅಂದುಕೊಳ್ಳೋದು ಬೇಡ, ರಾಜಕಾರಣದಲ್ಲಿ ಯಾವುದೂ ಶಾಶ್ವತ ಅಲ್ಲ. ಹೀರೋ ಝೀರೋ ಆಗುತ್ತಾನೆ, ಝೀರೋ ಹೀರೋ ಆಗುತ್ತಾನೆ. ನಾನು ಮತ್ತು ನೀವು ಒಂದೇ ವೇದಿಕೆಯಲ್ಲಿ ದೇವರನ್ನ ಪ್ರಾರ್ಥನೆ ಮಾಡಿದ್ದೇವೆ. ಭಗವಂತ ನಿಮ್ಮ ಎಲ್ಲಾ ವಿಘ್ನ ನಿವಾರಣೆ ಮಾಡಿ ಮತ್ತೆ ಈ ರಾಜ್ಯದಲ್ಲಿ ಸೇವೆ ಮಾಡುವ ಅವಕಾಶ ಕೊಡಲಿ. ಮತ್ತೆ ನಿಮಗೆ ಅವಕಾಶ ಸಿಗಲಿ ಅಂತ ನಾನೂ ಕೂಡ ಪ್ರಾರ್ಥನೆ ಮಾಡುತ್ತೇನೆ ಎಂದರು.














