ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 15ರಿಂದ 18 ವರ್ಷದೊಳಗಿನ 1,01,549 ಮಕ್ಕಳಿಗೆ ಜ. 3ರಿಂದ ಕೋವಿಡ್ ಲಸಿಕೆ ನೀಡಲು ಶಿಬಿರ ಆಯೋಜಿಸುವಂತೆ ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ. ಅವರು ಜಿಲ್ಲಾ ಆರೋಗ್ಯ ಹಾಗೂ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ತಮ್ಮ ಕಚೇರಿಯಲ್ಲಿ ಬುಧವಾರ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮಕ್ಕಳಿಗೆ ಕೋವೀಶೀಲ್ಡ್ ಲಸಿಕೆಯ ಬದಲು, ಕೋವ್ಯಾಕ್ಸಿನ್ ಮಾತ್ರ ನೀಡುವುದು. ಅಲ್ಲದೇ ಆಯಾ ಆಯಾ ಶಾಲೆ-ಕಾಲೇಜುಗಳಲ್ಲಿ ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದ ಲಸಿಕಾ ತಂಡ ರಚಿಸಿ, ನಂತರ ಲಸಿಕೆ ನೀಡಲು ಸಿದ್ಧತೆ ಮಾಡುವಂತೆ ಹೇಳಿದರು.
ಮಕ್ಕಳ ಕೋವಿಡ್ ಲಸಿಕಾಕರಣ ಕುರಿತು ಮಕ್ಕಳ ಪೋಷಕರಿಗೆ ಮಾಹಿತಿಯನ್ನು
ಪೋಷಕ-ಶಿಕ್ಷಕ ಸಮಿತಿಯ ಸಭೆಯಲ್ಲಿ ನೀಡುವಂತೆ ಸೂಚಿಸಿದರು.
ಜಿ.ಪಂ. ಸಿಇಒ ಡಾ| ಕುಮಾರ್, ಅಪರ ಜಿಲ್ಲಾಧಿಕಾರಿ ಚನ್ನಬಸಪ್ಪ, ಡಿಎಚ್ಒ ಡಾ| ಕಿಶೋರ್ ಕುಮಾರ್, ಜಿಲ್ಲಾ ಆರ್ಸಿಎಚ್ ಅಧಿಕಾರಿ ಡಾ| ರಾಜೇಶ್, ಡಿಡಿಪಿಐ ಡಾ| ಮಲ್ಲೇಸ್ವಾಮಿ, ಕೋವಿಡ್ ನೋಡಲ್ ಅಧಿಕಾರಿ ಡಾ| ಅಶೋಕ್, ಮಂಗಳೂರು ತಾಲೂಕು ಆರೋಗ್ಯಾಧಿಕಾರಿ ಡಾ| ಸುಜಯ್, ಪದವಿ ಪೂರ್ವ ಶಿಕ್ಷಣ ಇಲಾಖೆಯ ಅಧಿಕಾರಿಗಳು, ತಾಲೂಕುಗಳ ಕ್ಷೇತ್ರ ಶಿಕ್ಷಣಾಧಿಕಾರಿಗಳು ಸಭೆಯಲ್ಲಿದ್ದರು.














