ಬಂಟ್ವಾಳ : ವಿಶ್ವ ಜಲ ದಿನದ ಪ್ರಯುಕ್ತ ಕಲ್ಲಡ್ಕ ಶ್ರೀರಾಮ ಪ್ರಾಥಮಿಕ ಶಾಲೆಯ ವೇದವ್ಯಾಸ ಧ್ಯಾನಮಂದಿರದಲ್ಲಿ ಅಗೋಚರ ಅಂತರ್ಜಲವನ್ನು ಗೋಚರಿಸುವಂತೆ ಮಾಡುವುದು ಎನ್ನುವ ಘೋಷಣೆಯೊಂದಿಗೆ “ಅಟಲ್ ಭೂ ಜಲ ಜಾಗೃತಿ ಸಪ್ತಾಹ”ಕ್ಕೆ ಚಾಲನೆಯನ್ನು ನೀಡಲಾಯಿತು.
ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ಅಧ್ಯಾಪಕ ಸುಮಂತ್ ಆಳ್ವ ಎಮ್, ‘ಸುಸ್ಥಿರ ಅಂತರ್ಜಲ ನಿರ್ವಹಣೆಯಲ್ಲಿ ಸಮುದಾಯದ ಸಹಭಾಗಿತ್ವ’ ಎನ್ನುವ ವಿಷಯವನ್ನು ಮಂಡಿಸಿ “ನೀರಿನ ಸಂರಕ್ಷಣೆ, ಶುದ್ಧನೀರಿನ ಸಾರ್ವತ್ರಿಕ ಲಭ್ಯತೆಗೆ ವಿದ್ಯಾರ್ಥಿ ದೆಸೆಯಿಂದಲೇ ಭಗೀರಥ ಪ್ರಯತ್ನ ಆಗಬೇಕು. ನೀರಿನ ಕೊರತೆಯನ್ನು ಪ್ರಾಕೃತಿಕವಾಗಿ ಎದುರಿಸಿ ಗೆದ್ದ ಅನೇಕ ದೇಶಗಳಲ್ಲಿ ಇಸ್ರೇಲ್, ಸಿಂಗಾಪುರ್, ದಕ್ಷಿಣ ಕೊರಿಯಾ, ಸೌದಿ ಅರೇಬಿಯಾ ನಮಗೆ ಮಾದರಿ. ನಮ್ಮ ನೀರಿನ ಕುರಿತ ಕಳಕಳಿ ಕೇವಲ ವಿಶ್ವ ಜಲ ದಿನಕ್ಕೆ ಸೀಮಿತವಾಗಿರದೆ, ಬಳಸುವಾಗ ಯೋಚಿಸಬೇಕು ಎಂದರು. ಚೆನೈ ಮಾದರಿಯ ಜಲ ಸಂರಕ್ಷಣೆ ನಮ್ಮ ರಾಜ್ಯದಲ್ಲಿಯೂ ಅಳವಡಿಸುವುದರ ಮೂಲಕ ಜಲ ಸಾಕ್ಷರತೆಯ ಅಭಿಯಾನ ಮಾಡಬಹುದು ಎಂದ ಅವರು
ವಿದ್ಯಾರ್ಥಿಗಳು ಮನೆಯಲ್ಲಿಯೂ ಮಳೆನೀರು ಕೊಯ್ಲು, ಅಂತರ್ಜಲ ಮರುಪೂರಣಕ್ಕೆ ನರೇಗಾದ ಮೂಲಕ ಸಿಗುವ ಅನುದಾನ ಪಢಯುವ ಮೂಲಕ ಮಳೆ ನೀರು ಸಂರಕ್ಷಣೆಯನ್ನು ಮಾಡುವಂತೆ ಅವರು ಕರೆ ನೀಡಿದರು.
ಭಗೀರಥ ಗಂಗೆಯನ್ನು ಭೂಮಿಗೆ
ಹರಿಸಿದ ಪುರಾಣ ಕಥೆಯನ್ನು ಮುಖ್ಯೋಪಾಧ್ಯಾಯ ರವಿರಾಜ್ ಕಣಂತೂರು ತಿಳಿಸಿದರು. ವಿದ್ಯಾರ್ಥಿ ನಾಯಕ ಪ್ರಣಾಮ್ ವಾಟರ್ ಬೆಲ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವಿಜ್ಞಾನ ಅಧ್ಯಾಪಕರಾದ ರಮ್ಯ ಜೆ.ಅವರು ಗಡಸು ಹಾಗೂ ಕುಡಿಯಲು ಯೋಗ್ಯವಾದ ನೀರಿನ ಕುರಿತು ಪ್ರಾತ್ಯಕ್ಷಿಕೆಯನ್ನು ತೋರಿಸಿಕೊಟ್ಟರು. ೬ನೇ ತರಗತಿಯ ವಿದ್ಯಾರ್ಥಿಗಳು ನೀರಿನ ಕುರಿತು ಹಾಡು ಹಾಡಿದರು. ವಿಜ್ಞಾನ ಪ್ರಯೋಗಾಲಯದಲ್ಲಿ ವಿದ್ಯಾರ್ಥಿಗಳಿಂದ ನೀರಿನ ಬಗ್ಗೆ ವಿವಿಧ ಪ್ರಯೋಗಗಳನ್ನು ತೋರಿಸಿಕೊಟ್ಟರು.
ಇದರೊಂದಿಗೆ ಒಂದು ವಾರಗಳ ಕಾಲ ವಾಟರ್ ಬೆಲ್, ನೀರಿನ ಜಾಗೃತಿಯ ಕುರಿತು ಕಿರು ನಾಟಕ ಪ್ರದರ್ಶನ ನಡೆಯಲಿದೆ. ನೀರಿನ ಸಂರಕ್ಷಣೆಯ ಕುರಿತು ಚಿತ್ರಕಲಾ ಸ್ಪರ್ಧೆ, ರಂಗೋಲಿ ಸ್ಪರ್ಧೆ, ಮನೆಯಲ್ಲಿ ನೀರಿನ ಸಧ್ಭಳಕೆಯ ಭಾವಚಿತ್ರ ಸಂಗ್ರಹ ಇತ್ಯಾದಿ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.
ವೇದಿಕೆಯಲ್ಲಿ ವಿಜ್ಞಾನ ಅಧ್ಯಾಪಕರಾದ ರಾಜೇಶ್ವರಿ, ರಮ್ಯ, ಜ್ಯೋತಿಶ್ರೀ ಸಿ. ಎಮ್, ದಿವ್ಯ, ನಿವೇದಿತಾ, ಗುಣಶ್ರೀ ಹಾಗೂ ಸಂಸ್ಕೃತ ಅಧ್ಯಾಪಕರಾದ ಅನ್ನಪೂರ್ಣ ಎನ್ ಭಟ್ ಉಪಸ್ಥಿತರಿದ್ದರು. .ಕಾರ್ಯಕ್ರಮವನ್ನು ಅಧ್ಯಾಪಕರಾದ ಬಾಲಕೃಷ್ಣ ನಿರೂಪಿಸಿದರು.














