ಬಂಟ್ವಾಳ: ಬಿ.ಸಿ.ರೋಡ್ ಸಮೀಪದ ಅಜ್ಜಿಬೆಟ್ಟು ಎಂಬಲ್ಲಿ ಹಗಲು ಹೊತ್ತಿನಲ್ಲೇ ಮಹಿಳೆಯೊಬ್ಬರು ಅಂಗಡಿಯಲ್ಲಿದ್ದ ಸಂದರ್ಭ ಗ್ರಾಹಕರ ಸೋಗಿನಲ್ಲಿ ಬೈಕಿನಲ್ಲಿ ಬಂದ ಇಬ್ಬರು ಹೆಲೈಟ್ ಧಾರಿಗಳು ಆಕೆಯ ಕುತ್ತಿಗೆಗೆ ಕೈ ಹಾಕಿ 1.50 ಪವನ್ ತೂಕದ ಚಿನ್ನದ ಸರವನ್ನು ಎಳೆದು ಪರಾರಿಯಾದ ಘಟನೆ ಡಿ. 14ರಂದು ಗುರುವಾರ ಮಧ್ಯಾಹ್ನ ನಡೆದಿದೆ.
ಬಿ ಸಿ ರೋಡ್ ಬಿ ಮೂಡ ದ ಅಜ್ಜಿಬೆಟ್ಟು ನಿವಾಸಿ ಸರೋಜಿನಿ ಅವರ ಕುತ್ತಿಗೆಯಿಂದ ಸರವನ್ನು ಎಳೆದು ಪರಾರಿಯಾಗಿದ್ದಾರೆ. ಸರೋಜಿನಿ ಅವರು ಅಜ್ಜಿಬೆಟ್ಟು ಶಾಲಾ ಮೈದಾನದ ಬಳಿ ಅಂಗಡಿಯೊಂದನ್ನು ಹೊಂದಿದ್ದು, ಕಳೆದ ಕೆಲವು ಸಮಯಗಳಿಂದ ಅಂಗಡಿಯನ್ನು ನವೀನ್ ಕುಲಾಲ್ ಅವರಿಗೆ ಬಾಡಿಗೆಗೆ ನೀಡಿದ್ದರು. ನವೀನ್ ಮಧ್ಯಾಹ್ನ ಊಟಕ್ಕೆ ತೆರಳುವ ಸಂದರ್ಭ ಅಂಗಡಿಯಲ್ಲಿ ಸರೋಜಿನಿ ಅವರೇ ನಿಲ್ಲುತ್ತಿದ್ದರು.
ಗುರುವಾರ ಮಧ್ಯಾಹ್ನ 2.30ರಸುಮಾರಿಗೆ ಸರೋಜಿನಿ ಅಂಗಡಿಯಲ್ಲಿದ್ದ ಸಂದರ್ಭ ಬೈಕಿನಲ್ಲಿ ಬಂದ ಇಬ್ಬರಲ್ಲಿ ಹಿಂಬದಿ ಸವಾರ ವಿಮಲ್ ಹಾಗೂ ಚಾಕಲೇಟ್ ಖರೀದಿಸಿ 40 ರೂ. ನೀಡಿದ. ಅದನ್ನು ಪಡೆದುಕೊಂಡ ಸರೋಜಿನಿ ಚಿಲ್ಲರೆ ನೀಡುವುದಕ್ಕಾಗಿ ಕ್ಯಾಶ್ ಡಾವರ್ಗೆ ಬಗ್ಗಿದಾಗ
ಕುತ್ತಿಗೆಯಲ್ಲಿದ್ದ ಸರವನ್ನು ಎಳೆದು ಪರಾರಿಯಾದನು.
ಚಿನ್ನದ ಸರದ ಮೌಲ್ಯ 75 ಸಾವಿರ ರೂ. ಎಂದು ಅಂದಾಜಿಸಲಾಗಿದೆ. ಮಹಿಳೆ ನೀಡಿದ ದೂರಿನಂತೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಿ.ಸಿ.ರೋಡಿನಲ್ಲಿ ಕೊಂಚಮಟ್ಟಿಗೆ ನಿಯಂತ್ರಣದಲ್ಲಿದ್ದ ಕಳ್ಳತನ ಪ್ರಕರಣಗಳು ಮತ್ತೆ ಮರುಕಳಿಸಲು ಆರಂಭಿಸಿದ್ದು, ಡಿ. 9ರಂದು ರಾತ್ರಿ ಕಳ್ಳನೋರ್ವ ಬಿ.ಸಿ.ರೋಡು ಕೈಕಂಬದ ಸುಮಾರು 12 ಅಂಗಡಿಗಳಿಗೆ ನುಗ್ಗಲು ಯತ್ನಿಸಿ ಒಂದು ಅಂಗಡಿ ಹಾಗೂ ಹೋಟೆಲ್ನಿಂದ ಒಟ್ಟು 65 ಸಾವಿರ ರೂ. ಕಳವು ಮಾಡಿದ್ದನು. ಬಂಟ್ವಾಳ ನಗರ ಠಾಣೆ ಬಿ.ಸಿ.ರೋಡು ಪೇಟೆಯಲ್ಲೇ ಇದ್ದು, ಈ ರೀತಿ ಠಾಣೆಯ ಸುತ್ತಮುತ್ತಲ ಪ್ರದೇಶದಲ್ಲೇ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿರುವುದು ವ್ಯಾಪಾರಿಗಳ ಆತಂಕಕ್ಕೆ ಕಾರಣವಾಗಿದೆ.














