ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲಾ ಗ್ಯಾರೇಜು ಮಾಲಕರ ಸಂಘ ಮಂಗಳೂರು ಇದರ ಬಂಟ್ವಾಳ ವಲಯದ ವಾರ್ಷಿಕ ಮಹಾಸಭೆ ತುಂಬೆ ರಾಮಲ್ಕಟ್ಟೆಯ ವೈದ್ಯನಾಥ ರೆಸಿಡೆನ್ಸಿ ಸಭಾಂಗಣದಲ್ಲಿ ಭಾನುವಾರ ಸಂಜೆ ನಡೆಯಿತು.
ದ.ಕ. ಜಿಲ್ಲಾ ಗ್ಯಾರೇಜು ಮಾಲಕರ ಸಂಘದ ಚೆಯರ್ಮ್ಯಾನ್ ಪುಂಡಲೀಕ ಸುವರ್ಣ ಕಾರ್ಯಕ್ರಮ ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಸಂಘದ ಜಿಲ್ಲಾಧ್ಯಕ್ಷ ದಿನೇಶ್ ಕುಮಾರ್ ಮಾತನಾಡಿ ಬಂಟ್ವಾಳ ವಲಯ ಗ್ಯಾರೇಜು ಮಾಲಕರ ಸಂಘ ತನ್ನ ವಿಶಿಷ್ಠ ಹಾಗೂ ವಿಭಿನ್ನ ಕಾರ್ಯಕ್ರಮಗಳ ಮೂಲಕ ಎಲ್ಲರ ಮೆಚ್ಚುಗೆ ಪಡೆದಿದೆ. ಇಡೀ ಜಿಲ್ಲೆಯಲ್ಲಿಯೇ ಮಾದರಿ ಕಾರ್ಯಕ್ರಮಗಳನ್ನು ಬಂಟ್ವಾಳ ವಲಯ ಸಂಘಟಿಸುತ್ತಿದೆ ಎಂದರು.
ಬಂಟ್ವಾಳ ವಲಯ ಗ್ಯಾರೇಜು ಮಾಲಕರ ಸಂಘದ ಅಧ್ಯಕ್ಷ ಅಣ್ಣು ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿ ಓಂ ಪ್ರಸಾದ್ ಬಿ. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಕಾರ್ಯದರ್ಶಿ ಸುರೇಶ್ ಕುಲಾಲ್,
ಸಂಘಟನಾ ಕಾರ್ಯದರ್ಶಿ ಗಣೇಶ್ ಸುವರ್ಣ, ಕೋಶಾಧಿಕಾರಿ ರಾಜೇಶ್ ಕುಲಾಲ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಹಿರಿಯ ಗ್ಯಾರೇಜು ಮಾಲಕರಾದ ಕಿಶೋರ್ ಕುಮಾರ್, ಸಂಜೀವ ಬಂಜನ್, ಧರ್ಮರಾಜ್ ಬಿ.ಡಿ. ಅವರನ್ನು ಸನ್ಮಾನಿಸಲಾಯಿತು, ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಹರ್ಷಿತ್ ಹಾಗೂ ಚಂದ್ರಶೇಖರ್ ಅವರಿಗೆ ಆರ್ಥಿಕ ನೆರವು ನೀಡಲಾಯಿತು. ಲಕ್ಕಿಡಿಪ್ ವಿಜೇತರಿಗೆ ಬಹುಮಾನ ನೀಡಲಾಯಿತು.
ಸಂಘಟನಾ ಕಾರ್ಯದರ್ಶಿ ಜಗದೀಶ್ ರೈ ಸ್ವಾಗತಿಸಿದರು, ಗೌರವ ಸಲಹೆಗಾರ ಪ್ರಶಾಂತ್ ಭಂಡಾರ್ ಕಾರ್ ವಂದಿಸಿದರು. ಶಿಕ್ಷಕ ಸಂತೋಷ್ ಕುಮಾರ್ ತುಂಬೆ ಕಾರ್ಯಕ್ರಮ ನಿರೂಪಿಸಿದರು. ಬಳಿಕ ವಾರ್ಷಿಕ ಮಹಾಸಭೆ ನಡೆದು ನೂತನ ಪದಾಧಿಕಾರಿಗಳನ್ನು ಆಯ್ಕೆಗೊಳಿಸಲಾಯಿತು.














