ಬಂಟ್ವಾಳ :ನವನೀತ ಬಾಲಗೋಕುಲ ನೆತ್ತರಕೆರೆ ಇದರ 19ನೇ ವರ್ಷದ ಗೋಕುಲಾಷ್ಟಮಿ ಕಾರ್ಯಕ್ರಮವು ಭವ್ಯ ಶೋಭಾಯಾತ್ರೆಯೊಂದಿಗೆ ಅತ್ಯಂತ ಸಂಭ್ರಮದಿಂದ ಸೆ. 4ರಂದು ಸಂಪನ್ನಗೊಂಡಿತು.
ಭಾರತ ಮಾತೆ ಹಾಗೂ ಶ್ರೀ ಕೃಷ್ಣ ಪರಮಾತ್ಮನ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು.
ಬಂಟ್ವಾಳ ತಾಲೂಕು ಟೋಳಿ ಸದಸ್ಯೆ ಭಗಿನಿ ಕೀರ್ತಿ ಮಾತಾಜಿ ಅಷ್ಟಮಿಯ ಮಹತ್ವ ಹಾಗೂ ಸಂಸ್ಕಾರದ ಕುರಿತು ದಿಕ್ಸೂಚಿ ಭಾಷಣ ಮಾಡಿದರು. ಬಂಟ್ವಾಳ ತಾಲೂಕು ಮಾತೃಶಕ್ತಿ ಪ್ರಮುಖ್ ಸೌಮ್ಯ ರಾಣಿಯವರು ಪ್ರೇರಣಾದಾಯಿ ಮಾತುಗಳನ್ನಾಡಿ ಶುಭ ಹಾರೈಸಿದರು.
ವೇದಿಕೆಯಲ್ಲಿ ಮೋಹನ್ ಕುಲಾಲ್ ಬಾಲಗೋಕುಲ ಸಮಿತಿ ಅಧ್ಯಕ್ಷರು, ಸಂತೋಷ್ ನೆತ್ತರಕೆರೆ ಗ್ರಾಮ ವಿಕಾಸ ಸಂಯೋಜಕರು, ಮೋಹನ್ ಆಚಾರ್ಯ ಬಾಲಗೋಕುಲ ಸಮಿತಿ ಸಂಚಾಲಕರು ಉಪಸ್ಥಿತರಿದ್ದರು.
ಈ ಶುಭ ಸಂದರ್ಭದಲ್ಲಿ ಸಂಘದ ಹಿರಿಯರು, ಮಾತೃಮಂಡಳಿಯ ಸದಸ್ಯರು,
ಬಾಲಗೋಕುಲದ ಪೋಷಕರು, ಮಾತಾಜಿಗಳು, ಊರಿನ ಬಂಧುಗಳು ಹಾಗೂ ಬಾಲಗೋಕುಲದ ಶಿಕ್ಷಾರ್ಥಿಗಳು ಉಪಸ್ಥಿತರಿದ್ದರು.
ಬಾಲಗೋಕುಲದ ಎಲ್ಲಾ ಶಿಕ್ಷಾರ್ಥಿಗಳು ಕೃಷ್ಣ ಹಾಗೂ ರಾಧೆಯ ಆಕರ್ಷಕ ವೇಷ ಧರಿಸಿ ಸಂಭ್ರಮಿಸಿದರು.ಮಕ್ಕಳಿಗಾಗಿ ವಿವಿಧ ಆಟೋಟ ಹಾಗೂ ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು, ಸ್ಪರ್ಧಾ ವಿಜೇತರಿಗೆ, ಭಾಗವಹಿಸಿದ ಶಿಕ್ಷಾರ್ಥಿಗಳಿಗೆ ಮತ್ತು ಕೃಷ್ಣ-ರಾಧಾ ವೇಷಧಾರಿಗಳಿಗೆ ಬಹುಮಾನ ವಿತರಿಸಲಾಯಿತು.
ಬಾಲಗೋಕುಲದ ಶಿಕ್ಷಾರ್ಥಿಗಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಹಳೇ ಶಿಕ್ಷಾರ್ಥಿಗಳಾದ ಮನ್ವಿತ್ ಮತ್ತು ಗೀತೇಶ್ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ಆರಾಧ್ಯ ಸ್ವಾಗತಿಸಿ ಸಮೃದ್ಧ್ ಧನ್ಯವಾದವಿತ್ತರು, ಶೈಲೇಶ್ ಮತ್ತು ಹನ್ಸಿಕಾ ನಿರೂಪಿಸಿದರು.
ನವನೀತ ಬಾಲಗೋಕುಲ ಮಾತಾಜಿಗಳಾದ ಲಿಖಿತಾ, ವರ್ಷ,ಶ್ರಾವ್ಯ, ನಿವೇದಿತಾ, ಸಿಂಧು ಸಹಕರಿಸಿದರು.















