ಬೆಳ್ತಂಗಡಿ:ಪಡಂಗಡಿ ನಿವಾಸಿಯೋರ್ವರನ್ನು ಸಾಧುವಿನ ವೇಷದಲ್ಲಿ ಬಂದ ನಾಲ್ವರು ವಂಚಕರು ಮಂಕುಬೂದಿ ಎರಚಿ ಸುಮಾರು 81,000 ಹಣವನ್ನು ದೋಚಿರುವ ಘಟನೆ ನಡೆದಿದೆ.ಪಡಂಗಡಿ ಗ್ರಾ.ಪಂ.ಸದಸ್ಯ ಸಂತೋಷ್ ಕುಮಾರ್ ಜೈನ್ ಸಾಧುಗಳ ವಶೀಕರಣಕ್ಕೆ ಮರುಳಾಗಿ ವಂಚಿತರಾದವರು.
ಸಂತೋಷ್ ಕುಮಾರ್ ಜೈನ್ ರವರು ಮನೆಯಲ್ಲಿರುವ ಸಂದರ್ಭದಲ್ಲಿ ಬೊಲೆರೊ ವಾಹನದಲ್ಲಿ ಸನ್ಯಾಸಿಯ ರೂಪದಲ್ಲಿ ಬಂದ ನಾಲ್ವರು ತಾಲೂಕಿನ ದಾರಿ ಕೇಳುವ ನೆಪದಿಂದ ಮನೆಗೆ ಬಂದಿದ್ದಾರೆ.ಹಿಂದಿ ಭಾಷೆಯಲ್ಲಿ ಮಾತನಾಡುತ್ತಿದ್ದ ಅವರಿಗೆ ಸರಿಯಾದ ವಿವರ ನೀಡಿದ ಸಂತೋಷ್ರವರು ಮಾತನಾಡಿದ ಶೈಲಿಯನ್ನು ಗಮನಿಸಿದ ಸನ್ಯಾಸಿಗಳು ಇವರ ಬಗ್ಗೆ ಇವರ ಮನೆಯ ಬಗ್ಗೆ ವಿಚಾರಿಸಿ, ತಮ್ಮ ಮನೆಗೆ ನಾವು ಬರಬಹುದೇ ಎಂದು ವಿಚಾರಿಸಿದ್ದರು.
ದೈವ, ದೇವರು, ಧಾರ್ಮಿಕತೆಯ ಬಗ್ಗೆ ಅಪಾರ ನಂಬಿಕೆಯಿರುವ ಸಂತೋಷ್ ಕುಮಾರ್ ಜೈನ್ ಅವರು, ಈ ಸನ್ಯಾಸಿಗಳನ್ನೂ ಕೂಡ ಅಷ್ಟೇ ಬೇಗ ನಂಬಿದ್ರು. ಅವರು ಮನೆಯೊಳಗೆ ಬಂದು ಇವರೆದುರು ಕೈ ಉಜ್ಜಿದ ನಂತರ ಸಂತೋಷ್ ನಿನ್ನ ಕೈ ಮೂಸಿ ನೋಡು ಅಂತ ಹೇಳಿದ್ರು. ಈ ವೇಳೆ ಸಂತೋಷ್ ಕುಮಾರ್ ಜೈನ್ರಿಗೆ ಅಗರಬತ್ತಿಯ ವಾಸನೆ ಬಡಿದಿದೆ.
ಇದೇ ವೇಳೆ ಸಂತೋಷ್ ಕುಮಾರ್ಗೆ ಇವರ ಮೇಲೆ ಭಕ್ತಿ ಹೆಚ್ಚಾಗಿ ಆರಂಭದಲ್ಲಿ 5000 ರೂಪಾಯಿ ತಾನಾಗಿಯೇ ನೀಡಿದ್ದಾರೆ.ಇದಾದ ನಂತರ 25 ಸಾವಿರ ಕೊಡು ಎಂದು ಸನ್ಯಾಸಿಗಳು ಕೇಳಿದ್ದಾರೆ. ಅಷ್ಟು ಹೇಳಿದ್ದೇ ತಡ ಸಂತೋಷ್ ಕುಮಾರ್
ಜೈನ್ ಮರು ಮಾತನಾಡದೇ 25000 ನೀಡಿದ್ದಾರೆ. ನಂತರ ಸನ್ಯಾಸಿಗಳು 51000 ಬೇಡಿಕೆ ಇಟ್ಟಿದ್ದು, ಅದನ್ನು ಕೂಡ ಮರು ಮಾತನಾಡದೇ ನೀಡಿದ್ದಾರೆ.
ಈ ವೇಳೆ ಸನ್ಯಾಸಿಗಳು ನಮಗೆ ಹಣ ಕೊಟ್ಟಿರುವುದಕ್ಕೆ ಬೇಸರವಾಗಿದೆಯಾ ಎಂದು ಕೇಳಿದ್ದು, ಸಂತೋಷ್ ಕುಮಾರ್ ಜೈನ್ ನನಗೆ ಯಾವುದೇ ಬೇಸರವಿಲ್ಲ ಎಂದು ಹೇಳಿದ್ದಾರೆ. ಸನ್ಯಾಸಿಗಳಲ್ಲಿ ಇಬ್ಬರು ಮನೆಯ ಹೊರಗೆ ನಿಂತು ಇವರ ಮನೆಗೆ ಬರುವ ಹುಡುಗರನ್ನು ಮಾತನಾಡಿಸಿಕೊಂಡು, ಮನೆಯೊಳಗೆ ಬಾರದಂತೆ ತಡೆಯುತ್ತಿದ್ದರು.
ಸನ್ಯಾಸಿಗಳು 81000 ರೂಪಾಯಿ ಪಡೆದು ಹೋದ 45 ನಿಮಿಷಗಳ ನಂತರ ಸಂತೋಷ್ ಕುಮಾರ್ ಜೈನ್ ಗೆ ಏಕಾಏಕಿ ಚಿಂತೆಯಾಗಿದೆ. ನಾನ್ಯಾಕೆ ಅವರಿಗೆ ಹಣ ಕೊಟ್ಟೆ, ನನಗೇನಾಗಿದೆ ಅನ್ನುವ ಭಾವನೆ ಅವರಲ್ಲಿ ಮೂಡಿದೆ. ನಂತರ ಆ ಸನ್ಯಾಸಿಗಳಿಗೆ ಕರೆ ಮಾಡಿ ಮಾತನಾಡುತ್ತಲೇ ಇದ್ದಾರೆ, ಆದರೆ ಸನ್ಯಾಸಿಗಳ ಇವರಿಗೆ ಒಳ್ಳೆಯದಾಗುತ್ತೆ ಅಂತ ಹೇಳುತ್ತಲೇ ಇದ್ದಾರೆ.
ಸಮಾಜ ಸೇವಕ, ಧಾರ್ಮಿಕ ಮುಂದಾಳು, ಜನಪ್ರತಿನಿಧಿಯೂ ಆಗಿರುವ ಸಂತೋಷ್ ಕುಮಾರ್ ಜೈನ್ ಅವರಿಗೆ ಇಂತಹ ಕಪಟ ಸನ್ಯಾಸಿಗಳು ಮೋಸ ಮಾಡಿದ್ದಾರೆ ಅಂದ್ರೆ, ಸಾಮಾನ್ಯರ ಪಾಡೇನು.ಇಂತಹ ಕಪಟಿಗಳು ನಿಮ್ಮ ಮನೆಗೂ ಬರಬಹುದು. ಜಾಗೃತರಾಗಿರಿ.
















