ಬಂಟ್ವಾಳ :ಕಂದಾಯ ಇಲಾಖೆಯ ಅಡಿಯಲ್ಲಿ ಬರುವ ಭೂಮಾಪನ ಇಲಾಖೆಯ ಪರವಾನಿಗೆ ಪಡೆದಿರುವ ಭೂಮಾಪಕರು ಮಾರ್ಚ್ ತಿಂಗಳಿನಿಂದ ನಡೆಸುತ್ತಿರುವ ಮುಷ್ಕರದಿಂದಾಗಿ ಜಮೀನು ಮಾರಾಟ ಮತ್ತು ಖರೀದಿ , ಕುಟುಂಬದ ಒಳಗಿನ ವಿಭಾಗ ಪತ್ರ , 11 ಇ ನಕ್ಷೆ , ತಾತ್ಕಲ್ ಪೋಡಿ ಇನ್ನಿತರ ಅಳತೆ ಸಂಬಂಧಿತ ಕೆಲಸ ಕಾರ್ಯಗಳು ಸಂಪೂರ್ಣ ಸ್ಥಗಿತವಾಗಿದ್ದು, ರೈತರಿಗೆ ಮತ್ತು ಜನಸಾಮಾನ್ಯರಿಗೆ ತುಂಬಾ ತೊಂದರೆಯಾಗುತ್ತಿದೆ .
ಪರವಾನಿಗೆ ಭೂಮಾಪಕರ ಬೇಡಿಕೆಗಳಾದ ಸಮಾನ ಕೆಲಸಕ್ಕೆ ಸಮಾನ ವೇತನ , ಸೇವಾ ಭದ್ರತೆ , ವಿಶೇಷ ನೇಮಕಾತಿಯಲ್ಲಿ ಪರವಾನಿಗೆ ಭೂಮಾಪಕರನ್ನು ಸರಕಾರಿ ಸೇವೆಯಲ್ಲಿ ಸಕ್ರಮಗೊಳಿಸುವುದು ಸೇರಿದಂತೆ ಇವರ ಬೇಡಿಕೆಗಳಿಗೆ ಸರಕಾರ ತಕ್ಷಣವೇ ಸ್ಪಂದಿಸಬೇಕು . ಮುಷ್ಕರದಿಂದಾಗಿ ಕಳೆದ ಎರಡು ತಿಂಗಳಿನಿಂದ ರಾಜ್ಯದಲ್ಲಿ ಲಕ್ಷಾಂತರ ಅರ್ಜಿಗಳು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 15 ಸಾವಿರ ಬಂಟ್ವಾಳ ತಾಲೂಕು ಒಂದರಲ್ಲಿಯೇ 3 ಸಾವಿರಕ್ಕೂ ಮಿಕ್ಕಿ ಹೆಚ್ಚು ಅರ್ಜಿಗಳ ವಿಲೇವಾರಿಯಾಗದೇ ಸಂಬಂಧಪಟ್ಟವರ ಕಷ್ಟ ಹೇಳತ್ತಿರದು
.ಬೆರಳೆಣಿಕೆಯ ಸರ್ಕಾರಿ ಭೂ ಮಾಪಕರಿಂದ ಇಷ್ಟೊಂದು ಅರ್ಜಿಗಳ ವಿಲೇವಾರಿ ಅಸಾಧ್ಯ. ಈ ಎಲ್ಲಾ ತೊಂದರೆಗಳಿಗೆ ಸರಕಾರದ ಉದಾಸೀನತೆಯ ನಿರ್ಧಾರಗಳೇ ಕಾರಣವಾಗಿದ್ದು ಇದಕ್ಕೆಲ್ಲ ಸರಕಾರವೇ ನೇರವಾಗಿ ಹೊಣೆಯಾಗಿದೆ.
ಸರಕಾರದ ಇನ್ನಾದರೂ ಎಚ್ಚೆತ್ತುಕೊಂಡು ಈ ಬಗ್ಗೆ ಸ್ಪಷ್ಟ ನಿರ್ಧಾರ ತೆಗೆದುಕೊಂಡು ಪರವಾನಿಗೆ ಭೂಮಾಪಕರ ಬೇಡಿಕೆಗಳನ್ನು ಈಡೇರಿಸಿ ಜನಸಾಮಾನ್ಯರ ಸಮಸ್ಯೆಗಳಿಗೆ ಪರಿಹಾರ ನೀಡುವಂತೆ ಕರ್ನಾಟಕ ಸರಕಾರದ ಕಂದಾಯ ಸಚಿವರಿಗೆ ಬಂಟ್ವಾಳ ತಾಲೂಕು ಪಂಚಾಯತ್ ಮಾಜಿ ಸದಸ್ಯ ಪ್ರಭಾಕರ ಪ್ರಭು ಸಿದ್ದಕಟ್ಟೆ ಲಿಖಿತ ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ.














