ಬೆಂಗಳೂರು : ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಗುರುವಾರ ಮುಂಗಾರಿನ ಅಬ್ಬರ ಹಂತ ಹಂತವಾಗಿ ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ ವರದಿಮಾಡಿದೆ.
ಉಡುಪಿ, ಉತ್ತರ ಮತ್ತು ದಕ್ಷಿಣ ಕನ್ನಡ ಜಿಲ್ಲೆಗೆ ಜೂ.12ರವರೆಗೆ 'ಎಲ್ಲೋ ಅಲರ್ಟ್', ಜೂ.13ರಂದು 'ಆರೆಂಜ್ ಅಲರ್ಟ್' ನಂತರ ಜೂ.14ಕ್ಕೆ 'ರೆಡ್ ಅಲರ್ಟ್' ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಸದ್ಯ ಉತ್ತರ ಒಳನಾಡಿನಲ್ಲಿ ಅಷ್ಟಾಗಿ ಮಳೆ ನಿರೀಕ್ಷೆ ಇಲ್ಲದಿದ್ದರೂ ಕೆಲವು ಕಡೆಗಳಲ್ಲಿ ಚದುರಿದಂತೆ ಅಲ್ಲಲ್ಲಿ ಮಳೆ ಆಗಬಹುದು.
ನಂತರ ಇದೇ ಭಾಗದಲ್ಲಿ ಮಳೆ ಹೆಚ್ಚಾಗುವ ಕಾರಣಕ್ಕೆ ಜೂ.13 ಮತ್ತು 14ರಂದು ಬೆಳಗಾವಿ, ಬೀದರ್, ಧಾರವಾಡ. ಹಾವೇರಿ, ಕಲಬುರಗಿ, ರಾಯಚೂರು, ಯಾದಗಿರಿ, ಚಿತ್ರದುರ್ಗ ಜಿಲ್ಲೆಗಳಿಗೆ 'ಎಲ್ಲೋ ಅಲರ್ಟ್', ಹಾಗೂ ಚಿಕ್ಕಮಗಳೂರು, ಹಾಸನ, ಕೊಡಗು ಮತ್ತು ಶಿವಮೊಗ್ಗ ಜಿಲ್ಲೆಗಳಿಗೆ 'ಆರೆಂಜ್ ಅಲರ್ಟ್' ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.















