ಮಹಿಳೆ ವೇಲ್ ಎಳೆದಿದ್ದ ಕೇಸ್​: ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಕಾರ್ಯಕರ್ತ ದೂರು

Coastal Bulletin
ಮಹಿಳೆ ವೇಲ್ ಎಳೆದಿದ್ದ ಕೇಸ್​: ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಕಾರ್ಯಕರ್ತ ದೂರು

ಮಂಡ್ಯ: ಬಿಜೆಪಿ ಎಂಎಲ್​ಸಿ ಸಿಟಿ ರವಿ ವಿಧಾನ ಪರಿಷತ್ ಕಲಾಪದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್​ಗೆ ಅಶ್ಲೀಲ ಶಬ್ದದಲ್ಲಿ ನಿಂದಿಸಿದ್ದಾರೆ ಎಂಬ ಆರೋಪ ರಾಜ್ಯ ರಾಜಕೀಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಇದೇ ವಿಚಾರವಾಗಿ ಸಿಟಿ ರವಿ ಜೈಲಿಗೂ ಹೋಗಿ ಬಂದರು. ಸಿಟಿ ರವಿ ವಿರುದ್ಧ ರಾಷ್ಟ್ರಪತಿಗೆ ಪತ್ರ ಬರೆಯುವುದಾಗಿ ಹೆಬ್ಬಾಳ್ಕರ್ ಹೇಳಿದ್ದಾರೆ. ಇದೆಲ್ಲದರ ಮಧ್ಯೆ ಇದೀಗ ಸಿಎಂ ಸಿದ್ದರಾಮಯ್ಯ (Siddaramaiah) ಮಹಿಳೆ ವೇಲ್ ಎಳೆದು ಅಪಮಾನಿಸಿದ್ದಾರೆ ಎನ್ನಲಾದ 6 ವರ್ಷದ ಹಿಂದಿನ ಘಟನೆಗೆ ಸಂಬಂಧಿಸಿದಂತೆ ರಾಜ್ಯ ಮಹಿಳಾ ಆಯೋಗಕ್ಕೆ ಆನ್​ಲೈನ್ ಮೂಲಕ ಬಿಜೆಪಿ ಕಾರ್ಯಕರ್ತ ದೂರು ನೀಡಿದ್ದಾರೆ.

ಸಿದ್ದರಾಮಯ್ಯ ಮೊದಲ ಬಾರಿ ಸಿಎಂ ಆಗಿದ್ದಾಗ ಅಂದರೆ 6 ವರ್ಷದ ಹಿಂದೆ, ಮೈಕ್ ಕಿತ್ತುಕೊಳ್ಳಲು ಹೋಗಿ ಮಹಿಳೆ ವೇಲ್ ಎಳೆದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ವಿರುದ್ಧ ಮಂಡ್ಯ ಜಿಲ್ಲಾ ಬಿಜೆಪಿ ವಕ್ತಾರ ಸಿ‌.ಟಿ.ಮಂಜುನಾಥ್​​ರಿಂದ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿಗೆ ದೂರು ನೀಡಿದ್ದಾರೆ.

ಸಿ.ಟಿ.ರವಿ ಅಶ್ಲೀಲ ಪದ ಬಳಸಿದ್ದಾರೆಂದು ಮಹಿಳಾ ಆಯೋಗ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದೆ. ಈ ಹಿಂದೆ ಸಿದ್ದರಾಮಯ್ಯ ಮಹಿಳೆ ವೇಲ್ ಎಳೆದು ಅಪಮಾನಿಸಿದ್ದರು. ಆ ಮಹಿಳೆ ದೂರು ದಾಖಲಿಸಿದ್ದಾರೋ ಇಲ್ಲವೋ ಗೊತ್ತಿಲ್ಲ. ಅಲ್ಲದೇ ದೂರು ಸಲ್ಲಿಸದಂತೆ

ಮಹಿಳೆಗೆ ಬೆದರಿಕೆ ಹಾಕಿರಬಹುದು.

ಸೀರೆ ಎಳೆದು ಅವಮಾನಿಸಿರುವ ವಿಡಿಯೋ ಸಹ ವೈರಲ್​ ಆಗಿತ್ತು. ಕೂಡಲೇ ಸಿಎಂ ವಿರುದ್ಧ ಸ್ವಯಂಪ್ರೇರಿತ ಕೇಸ್ ದಾಖಲಿಸಬೇಕು. ತನಿಖೆ ಮಾಡಿ ಮಹಿಳೆಗೆ ನ್ಯಾಯ ದೊರಕಿಸಿಕೊಡುವಂತೆ ದೂರಿನ ಮೂಲಕ  ಒತ್ತಾಯಿಸಲಾಗಿದೆ.

ಅಂದು ಮೈಸೂರಿನಲ್ಲಿ ನಡೆದಿದ್ದ ಜನತಾ ದರ್ಶನ ಕಾರ್ಯಕ್ರಮದಲ್ಲಿ ಸಾರ್ವಜನಿಕವಾಗಿ ಕಷ್ಟ ಹೇಳಿಕೊಳ್ಳಲು ಓರ್ವ ಮಹಿಳೆ ಬಂದಿದ್ದರು. ತಮ್ಮ ಸಮಸ್ಯೆ ಹೇಳುತ್ತಿದ್ದ ಮಹಿಳೆಯ ಮೇಲೆ ಸಿಎಂ ಸಿದ್ದರಾಮಯ್ಯ ಗರಂ ಆಗಿದ್ದರು. ಈ ವೇಳೆ ಮಹಿಳೆ ಬಳಿಯಿದ್ದ ಮೈಕ್​ ಅನ್ನು ಕಸಿದುಕೊಳ್ಳುವಾಗ ವೇಲ್​ ಎಳೆದು ಅವಮಾನಿಸಿದ್ದಾರೆ ಎಂದು ಆರೋಪ ಮಾಡಲಾಗಿತ್ತು.

Leave a Comment