ಬೆಳಗಾವಿ : ಮಹಿಳೆಯನ್ನ ಬೆತ್ತಲೆಗೊಳಿಸಿ ಕಂಬಕ್ಕೆ ಕಟ್ಟಿ ಹಾಕಿ ಮಾರಣಾಂತಿಕವಾಗಿ ಹಲ್ಲೆ ಮಾಡಿರುವ ಘಟನೆ ಬೆಳಗಾವಿ ತಾಲೂಕಿನ ವಂಟಮೂರಿ ಗ್ರಾಮದಲ್ಲಿ ನಡೆದಿದೆ. ಯುವಕನೊಬ್ಬ ಪ್ರೀತಿಸಿದ ಯುವತಿ ಜತೆಗೆ ಓಡಿ ಹೋಗಿದ್ದ. ಇದರಿಂದ ಆಕ್ರೋಶಗೊಂಡು ಯುವಕನ ತಾಯಿಯನ್ನು ಬೆತ್ತಲೆಗೊಳಿಸಿ ಕಟ್ಟಿ ಹಾಕಿ ಅವರ ಮೇಲೆ ಅಮಾನವೀಯ ವರ್ತನೆ ತೋರಲಾಗಿದೆ.
ವಂಟಮೂರಿ ಗ್ರಾಮದ ನಿವಾಸಿ ದುಂಡಪ್ಪ ಅಶೋಕ ನಾಯಕ್ ಟ್ರಕ್ ಡೈವರ್ ಆಗಿದ್ದಾನೆ. ಈತನ ತಾಯಿ ಕಮಲವ್ವ ಅವರ ಮೇಲೆ ಹಲ್ಲೆ ಮಾಡಲಾಗಿದೆ. ಕಮಲವ್ವ ಮಗ ದುಂಡಪ್ಪ ಪ್ರಿಯಾಂಕಾ ಬಸಪ್ಪ ನಾಯಕ್ ಎಂಬಾಕೆಯನ್ನು ಪ್ರೀತಿಸಿದ್ದ, ಕಳೆದ ಎರಡು ವರ್ಷದಿಂದ ಒಬ್ಬರಿಗೊಬ್ಬರು ಪ್ರಿತಿ ಮಾಡುತ್ತಿದ್ದರು.ಪ್ರಿಯಾಂಕಾ ಕುಟುಂಬಸ್ಥರು ಬೇರೆ ಯುವಕನೊಂದಿಗೆ ನಿಶ್ಚಿತಾರ್ಥ ಮಾಡಲು ನಿರ್ಧರಿಸಿದ್ದರು.
ಈ ವಿಚಾರ ತಿಳಿದ ಪ್ರೇಮಿಗಳು ಓಡಿ ಹೋಗಲು ನಿರ್ಧರಿಸಿದ್ದರು. ಮಧ್ಯರಾತ್ರಿ ಪ್ರಿಯಾಂಕಾ ಕರೆದುಕೊಂಡು ದುಂಡಪ್ಪ ಓಡಿ ಹೋಗಿದ್ದಾನೆ. ಇದರಿಂದ ಆಕ್ರೋಶಗೊಂಡ ಯುವತಿ ಮನೆಯವರು
ದುಂಡಪ್ಪನ ಮನೆಗೆ ಬಂದು, ಮನೆಯ ಬಾಗಿಲು ಒಡೆದು ಒಳ ಪ್ರವೇಶಿಸಿ ತಾಯಿಯ ಮೇಲೆ ಮೃಗೀಯ ವರ್ತನೆ ತೋರಿರುವುದು ಮಾತ್ರವಲ್ಲ ಮನೆಯಲ್ಲಿದ್ದ ವಸ್ತುಗಳನ್ನು ಹಾಳು ಮಾಡಿ ಹೋಗಿದ್ದಾರೆ.
ಮಹಿಳೆಯನ್ನು ಬೆತ್ತಲೆಗೊಳಿಸಿ ಕಂಬಕ್ಕೆ ಕಟ್ಟಿ ಹಾಕಿ ಹಲ್ಲೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕಮಲವ್ವ ಅವರನ್ನು ದಾಖಲು ಮಾಡಲಾಗಿರುವ ಬೆಳಗಾವಿಯ ಜಿಲ್ಲಾಸ್ಪತ್ರೆಗೆ ಗೃಹಸಚಿವ ಡಾ. ಜಿ. ಪರಮೇಶ್ವರ್, ಲಕ್ಷ್ಮೀ ಹೆಬ್ಬಾಲ್ಕರ್ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು. ಹಲ್ಲೆಗೆ ಸಂಬಂಧಿಸಿದಂತೆ ಈ ವರೆಗೆ 7 ಮಂದಿಯ ಬಂಧನವಾಗಿದೆ ಎಂದು ವರದಿಯಾಗಿದೆ.














