ಬೆಂಗಳೂರು: ಆಗಸ್ಟ್ 15ರಿಂದ ರಾಜ್ಯದ ಮುಜರಾಯಿ ಇಲಾಖೆ ವ್ಯಾಪ್ತಿಯ ದೇವಾಲಯಗಳಲ್ಲಿ (Muzrai Department) ನೀರಿನ ಬಾಟಲ್ ಸೇರಿದಂತೆ ಎಲ್ಲಾ ಬಗೆಯ ಪ್ಲಾಸ್ಟಿಕ್ (Plastic) ಬಳಕೆಯನ್ನು ನಿಷೇಧ ಮಾಡಲಾಗುತ್ತದೆ ಎಂದು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ (Ramalinga Reddy)ಘೋಷಣೆ ಮಾಡಿದ್ದಾರೆ. ವಿಕಾಸಸೌಧದಲ್ಲಿ ಮುಜರಾಯಿ ಇಲಾಖೆ ಪ್ರಗತಿ ಪರಿಶೀಲನಾ ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಆಗಸ್ಟ್ 15 ರಿಂದ ಪ್ಲಾಸ್ಟಿಕ್ ಮುಕ್ತ ದೇವಾಲಯ (Plastic Free Temple) ಪ್ರಾರಂಭ ಮಾಡುತ್ತಿದ್ದೇವೆ. ದೇವಾಲಯಗಳಲ್ಲಿ ಯಾವುದೇ ಕಾರಣಕ್ಕೂ ಪ್ಲಾಸ್ಟಿಕ್ ಬಳಕೆ ಮಾಡಬಾರದು ಎಂದು ಸೂಚಿಸಿದರು.
ಈ ಆದೇಶ ಜಾರಿಗೆ 2 ತಿಂಗಳು ಸಮಯ ಕೊಡಲಾಗಿದ್ದು, ಈಗಾಗಲೇ ಪ್ಲಾಸ್ಟಿಕ್ ಪದಾರ್ಥಗಳು ತೆಗೆದುಕೊಂಡಿದ್ದರೆ ಅದನ್ನು ಬಳಕೆ ಮಾಡಬಹುದು. ಆಗಸ್ಟ್ 15 ರಿಂದ ದೇವಾಲಯಗಳಲ್ಲಿ ಪ್ಲಾಸ್ಟಿಕ್ ಬಳಕೆಗೆ ಅವಕಾಶ ಇರುವುದಿಲ್ಲ ಎಂದು ಹೇಳಿದರು.
ಅಲ್ಲದೇ ಬಹುಮುಖ್ಯವಾಗಿ ಬೇರೆ ರಾಜ್ಯದಲ್ಲಿ ಇರುವ ಭವನಗಳ ರೂಮ್ ಬುಕ್ಕಿಂಗ್ ಅನ್ನು ಆನ್ಲೈನ್ ಮೂಲಕ ಜಾರಿ ಮಾಡಲು ವ್ಯವಸ್ಥೆ ರೂಪಿಸಲು ರಾಮಲಿಂಗರೆಡ್ಡಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಇದು ಜಾರಿಗೆ ಬಂದರೆ, ಬೇರೆ ರಾಜ್ಯಗಳಲ್ಲಿರುವ ಕರ್ನಾಟಕದ ಭವನಗಳನ್ನು ಆನ್ ಲೈನ್ ಮೂಲಕವೇ ಬುಕ್ಕಿಂಗ್ ಮಾಡಿಕೊಂಡು ಹೋಗಬಹುದು.
ಸಭೆಯ ಮುಖ್ಯಾಂಶಗಳು
ಮುಜರಾಯಿ ವ್ಯಾಪ್ತಿಯ ದೇವಾಲಯಗಳ ಮಾಹಿತಿಯನ್ನು 3 ತಿಂಗಳ ಒಳಗೆ ಕೊಡಬೇಕು. 3 ತಿಂಗಳ ಒಳಗೆ ಬಾಕಿ ಇರುವ 20 ಸಾವಿರ ಎಕರೆ ದೇವಾಲಯ ಜಮೀನು ಇಂಡೀಕರಣ ಆಗಬೇಕು.
ಗ್ರಾಮಾಂತರ ಮತ್ತು ನಗರ ಭಾಗದಲ್ಲಿ ಇರುವ ಮುಜರಾಯಿ ದೇವಾಲಯಗಳ ಆಸ್ತಿಗಳನ್ನ ಪ್ರತ್ಯೇಕ ಸರ್ವೆ ಮಾಡಬೇಕು. ದೇವಸ್ಥಾನ ಹೆಸರಿನಲ್ಲಿ ಖಾತೆ, ಆಸ್ತಿ ಪತ್ರ ದಾಖಲೆಗಳು ಸರಿಯಾಗಿ ಇರದಿದ್ದರೆ ಎಲ್ಲಾ ದೇವಾಲಯದ ಜಾಗ 3 ತಿಂಗಳ ಒಳಗಡೆ ಸರ್ವೆ ಮಾಡಿ ನೋಟಿಫಿಕೇಶನ್ ಮಾಡಲು ಸೂಚನೆ.
ಅರ್ಚಕರಿಗೆ ತಸ್ತೀಕ್ ನೇರ ವರ್ಗಾವಣೆ(DBT) ಮೂಲಕ ನೀಡಲು ಕ್ರಮ. ಈಗ 25 ಸಾವಿರ ಅರ್ಚಕರ ಪೈಕಿ 14 ಸಾವಿರ ಅರ್ಚಕರು ಮಾಹಿತಿ ಕೊಟ್ಟಿದ್ದಾರೆ. ಉಳಿದವರು ಬೇಗ ಮಾಹಿತಿ ಕೊಟ್ಟರೆ ಅವರಿಗೂ DBT ಮೂಲಕ ತಸ್ತೀಕ್ ನೀಡಲು ಕ್ರಮ.
31 ಜಿಲ್ಲೆಗಳಲ್ಲಿ ಧಾರ್ಮಿಕ ಪರಿಷತ್ ರಚನೆಗೆ
ಕ್ರಮಕ್ಕೆ ಸೂಚನೆ ನೀಡಲಾಗಿದೆ. 8 ಜಿಲ್ಲೆಯಲ್ಲಿ ಮಾತ್ರ ಧಾರ್ಮಿಕ ಪರಿಷತ್ ರಚನೆಯಾಗಿದ್ದು ಉಳಿದ ಕಡೆ ಶೀಘ್ರವೇ ಮಾಡಬೇಕು.
ಬೇರೆ ಬೇರೆ ರಾಜ್ಯದಲ್ಲಿ ಇರೋ ಮುಜರಾಯಿ ಇಲಾಖೆ ವಸತಿ ಭವನಗಳಲ್ಲಿ 3 ಸ್ಟಾರ್ ಸೌಲಭ್ಯ ಗಳನ್ನು ನೀಡಲು ನಿರ್ಧಾರ. ತಿರುಪತಿ, ತುಳಿಜಾಪುರ, ಪಂಡರಾಪುರ, ಸೇರಿ ಹಲವು ಕಡೆ ಭವನಗಳನ್ನು ನಿರ್ಮಾಣಕ್ಕೆ ಅಗತ್ಯ ಕ್ರಮ ತೆಗೆದುಕೊಳ್ಳುವುದು.
ಬೇರೆ ರಾಜ್ಯದಲ್ಲಿ ಇರುವ ಭವನಗಳ ರೂಮ್ ಬುಕ್ಕಿಂಗ್ ಅನ್ನು ಆನ್ಲೈನ್ ಮೂಲಕ ಜಾರಿ ಮಾಡಲು ವ್ಯವಸ್ಥೆ ರೂಪಿಸಲು ಸೂಚನೆ.
ಹೊಸ ಪ್ರಾಧಿಕಾರಗಳ ಸಮಗ್ರ ಯೋಜನೆಗೆ ಕ್ರಮವಹಿಸಲಾಗಿದೆ. ಹುಲಿಗೆಮ್ಮ, ಮಲೆ ಮಹದೇಶ್ವರ, ಘಾಟಿ ಸುಬ್ರಮಣ್ಯ, ರೇಣುಕಾ ಎಲ್ಲಮ್ಮ, ಚಾಮುಂಡೇಶ್ವರಿ ದೇವಾಲಯ ಅಭಿವೃದ್ಧಿ ಪ್ರಾಧಿಕಾರ ಮಾಸ್ಟರ್ ಪ್ಲ್ಯಾನ್ ಮಾಡಲು ನಿರ್ಧಾರ.
ಚಾಮುಂಡೇಶ್ವರಿ ಬೆಟ್ಟದಲ್ಲಿ ಒತ್ತುವರಿ ಆಗಿದ್ದ 11 ಎಕರೆ ಜಾಗವನ್ನು ತೆರವು ಮಾಡಲಾಗಿದೆ. ಉಳಿದ ಜಾಗ ತೆರವುಗೊಳಿಸಲು ಸೂಚನೆ.
ಕಳೆದ 3 ತಿಂಗಳಲ್ಲಿ 1,253 ದೇವಾಲಯಗಳನ್ನು ಗುರುತಿಸಲಾಗಿದೆ. 11,332 ಆಸ್ತಿ ಗುರುತಿಸಿ ನಮೂದಿಸಲಾಗಿದೆ. ಹೊರರಾಜ್ಯಗಳಲ್ಲಿ ವಸತಿ ಗೃಹಗಳನ್ನು ನಿರ್ಮಿಸಲು ಯೋಜನೆ. ತಿರುಪತಿಯ ಗಾಂಧಿ ರಸ್ತೆಯಲ್ಲಿರುವ ಜಾಗದಲ್ಲಿ ವಸತಿಗೃಹ, ವಸತಿಗೃಹ ಸಂಕೀರ್ಣ ನಿರ್ಮಾಣ ಮಾಡಲು ಸೂಚಿಸಲಾಗಿದೆ.
ದೇವಾಲಯದ ಅರ್ಚಕರ ಮಕ್ಕಳಿಗೆ ಅರ್ಚಕರ 249 ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಲಾಗಿದೆ. ಅರ್ಚಕರ ಮಕ್ಕಳ ವಿದ್ಯಾರ್ಥಿ ವೇತನಕ್ಕೆ 34,37,000 ರೂ.
ಮರಣಹೊಂದಿದ 7 ಅರ್ಚಕರ ಕುಟುಂಬಕ್ಕೆ ಪರಿಹಾರ ನೀಡಿದ್ದೇವೆ. ಮರಣೋತ್ತರ ಪರಿಹಾರ 14 ಲಕ್ಷ ರೂಪಾಯಿ ನೀಡಲಾಗಿದೆ.