ನವದೆಹಲಿ: ನೀಟ್ ಪತ್ರಿಕೆ ಸೋರಿಕೆ ವಿರುದ್ಧ ಕಾಕ್ರೋಚ್ ಜನತಾ ಪಾರ್ಟಿ(CJP) ನಡೆಸಿದ ಪ್ರತಿಭಟನೆಯು ಶಿಕ್ಷಣ ಸಚಿವರ ರಾಜೀನಾಮೆಗೆ ಕಾರಣವಾದ ಬೆನ್ನಲ್ಲೇ, ಅದೇ ಹಾದಿಯಲ್ಲಿ ‘E20 ಜನತಾ ಪಕ್ಷ’ ಎಂಬ ನೂತನ ನಾಗರಿಕ ಹಕ್ಕುಗಳ ಚಳವಳಿ ದೇಶಾದ್ಯಂತ ಸದ್ದು ಮಾಡುತ್ತಿದೆ. ಸರಬರಾಜಾಗುತ್ತಿರುವ ಶೇ. 20 ಎಥೆನಾಲ್ ಮಿಶ್ರಿತ ಇಂಧನದ (E20) ಬದಲು ಸಾರ್ವಜನಿಕರಿಗೆ ಶೇ.100 ಶುದ್ಧ ಪೆಟ್ರೋಲ್ ಆಯ್ಕೆ ಮಾಡುವ ಸ್ವಾತಂತ್ರ್ಯ ನೀಡಬೇಕೆಂದು ಆಗ್ರಹಿಸಿರುವ ಈ ಸಂಘಟನೆಯು, ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರ ರಾಜೀನಾಮೆಗೆ ಒತ್ತಾಯಿಸಿದೆ.
ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಶುರುವಾದ ಈ ಚಳವಳಿಯು ಕೆಲವೇ ಗಂಟೆಗಳಲ್ಲಿ 25,000ಕ್ಕೂ ಹೆಚ್ಚು ಬೆಂಬಲಿಗರನ್ನು ಗಳಿಸಿದೆ. ಈ ಅಭಿಯಾನಕ್ಕೆ ದೆಹಲಿ ಟ್ಯಾಕ್ಸಿ ಮತ್ತು ಪ್ರವಾಸಿ ಸಂಘಟನೆಗಳು ಸಂಪೂರ್ಣ ಬೆಂಬಲ ಸೂಚಿಸಿದ್ದು, ಆಗಸ್ಟ್ 4 ರಂದು ಸಂಸತ್ತಿನ ಕಡೆಗೆ ಬೃಹತ್ ಮೆರವಣಿಗೆ ನಡೆಸುವುದಾಗಿ ಘೋಷಿಸಿವೆ.
ಎಥೆನಾಲ್ ಮಿಶ್ರಿತ ಪೆಟ್ರೋಲ್ ಬಳಕೆಯಿಂದಾಗಿ ವಾಹನಗಳ ಮೈಲೇಜ್ ಗಣನೀಯವಾಗಿ ಕಡಿಮೆಯಾಗುತ್ತಿದ್ದು, ವಿಶೇಷವಾಗಿ ಹಳೆಯ ವಾಹನಗಳಲ್ಲಿ ಎಂಜಿನ್ ವೈಫಲ್ಯ ಮತ್ತು ದುರಸ್ತಿ ವೆಚ್ಚ ಹೆಚ್ಚಾಗುತ್ತಿದೆ ಎಂದು ಚಾಲಕರು ಆರೋಪಿಸಿದ್ದಾರೆ.ನಾವು ಇಂಧನ ಉಚಿತವಾಗಿ ಕೇಳುತ್ತಿಲ್ಲ ಅಥವಾ ಸಬ್ಸಿಡಿ ಬಯಸುತ್ತಿಲ್ಲ. ಎಥೆನಾಲ್ ಪೆಟ್ರೋಲ್ ಅನ್ನು ಬ್ಯಾನ್ ಮಾಡಿ ಎಂದೂ ಹೇಳುತ್ತಿಲ್ಲ. ಗ್ರಾಹಕರಿಗೆ ಶೇ. 100 ಶುದ್ಧ ಪೆಟ್ರೋಲ್ ಆಯ್ಕೆ ಮಾಡುವ ಅಧಿಕಾರ ಸಿಗಬೇಕು ಎಂಬುದು ಪಕ್ಷದ ಮುಖ್ಯ ಬೇಡಿಕೆಯಾಗಿದೆ.
ಪ್ರತಿಯೊಂದು ಬಂಕ್ಗಳಲ್ಲಿ ಇಂಧನದ ವಿವರ, ಮೈಲೇಜ್, ಎಂಜಿನ್ ಮೇಲಾಗುವ ಪರಿಣಾಮಗಳ ಕುರಿತು
ಸ್ವತಂತ್ರ ಅಧ್ಯಯನದ ವರದಿಗಳನ್ನು ಸಾರ್ವಜನಿಕವಾಗಿ ಪ್ರಕಟಿಸಬೇಕು. ಇತ್ತೀಚೆಗೆ ಸಂಸತ್ತಿನಲ್ಲಿ ಮಾತನಾಡಿದ್ದ ಪೆಟ್ರೋಲಿಯಂ ಖಾತೆ ರಾಜ್ಯ ಸಚಿವ ಸುರೇಶ್ ಗೋಪಿ, ಎಥೆನಾಲ್ ಮಿಶ್ರಿತ ಇಂಧನದಿಂದ ವಾಹನಗಳ ಕಾರ್ಯಕ್ಷಮತೆ ಹಾಳಾಗುತ್ತಿದೆ ಎಂಬ ಕುರಿತು ಸರ್ಕಾರಕ್ಕೆ ಯಾವುದೇ ಸಮರ್ಥನೀಯ ದೂರುಗಳು ಬಂದಿಲ್ಲ ಎಂದು ಸ್ಪಷ್ಟಪಡಿಸಿದ್ದರು.
ಪ್ರಸ್ತುತ ದೆಹಲಿಯಲ್ಲಿ ಸಾಮಾನ್ಯ E20 ಪೆಟ್ರೋಲ್ ಲೀಟರ್ಗೆ 102.12 ರೂ. ಇದ್ದರೆ, ಎಥೆನಾಲ್-ಮುಕ್ತವಾಗಿರುವ 100-ಆಕ್ಟೇನ್ ಪ್ರೀಮಿಯಂ ಪೆಟ್ರೋಲ್ ಲೀಟರ್ಗೆ 169 ರೂ.ನಷ್ಟಿದೆ. ಇದು ಅತ್ಯಂತ ದುಬಾರಿಯಾಗಿರುವುದರಿಂದ ಸಾಮಾನ್ಯ ನಾಗರಿಕರಿಗೆ ಶುದ್ಧ ಪೆಟ್ರೋಲ್ ಸಿಗದಂತಾಗಿದೆ.
ಭಾರತ ಸರ್ಕಾರವು ಕಚ್ಚಾ ತೈಲ ಆಮದು ವೆಚ್ಚವನ್ನು ತಗ್ಗಿಸಲು ಮತ್ತು ಮಾಲಿನ್ಯ ನಿಯಂತ್ರಿಸಲು 2025-26 ರ ವೇಳೆಗೆ ಶೇ.20 ಎಥೆನಾಲ್ ಮಿಶ್ರಣ ಮಾಡುವ ಗುರಿ ಹೊಂದಿತ್ತು. ಆದರೆ ವಾಹನ ತಯಾರಕ ಸಂಸ್ಥೆಗಳು ಇ-20 ಇಂಧನಕ್ಕೆ ತಕ್ಕಂತೆ ಎಂಜಿನ್ಗಳನ್ನು ಪೂರ್ಣವಾಗಿ ನವೀಕರಿಸುವ ಮೊದಲೇ ಈ ನೀತಿ ಜಾರಿಯಾಗಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
















