ಬುಲವಾಯೊ(ಜಿಂಬಾಬ್ವೆ): ಈ ಬಾರಿಯ ಐಸಿಸಿ ಅಂಡರ್-19 ಏಕದಿನ ವಿಶ್ವಕಪ್ನಲ್ಲಿ 5 ಬಾರಿ ಚಾಂಪಿಯನ್ ಭಾರತ ಭರ್ಜರಿ ಶುಭಾರಂಭ ಮಾಡಿದೆ. ಗುರುವಾರ ಯುಎಸ್ಎ ವಿರುದ್ಧ ಯುವ ಭಾರತಕ್ಕೆ 6 ವಿಕೆಟ್ ಗೆಲುವು ಲಭಿಸಿತು. ಹೆನಿಲ್ ಪಟೇಲ್ ಮಾರಕ ದಾಳಿ ತಂಡಕ್ಕೆ ಸುಲಭ ಗೆಲುವು ತಂದುಕೊಟ್ಟಿತು.
ಟಾಸ್ ಸೋತು ಬ್ಯಾಟಿಂಗ್ಗೆ ಆಹ್ವಾನಿಸಲ್ಪಟ್ಟ ಯುಎಸ್ಎ ತೀವ್ರ ಬ್ಯಾಟಿಂಗ್ ವೈಫಲ್ಯ ಅನುಭವಿಸಿತು. ಭಾರತದ ನಿಖರ ದಾಳಿ ಮುಂದೆ ರನ್ ಗಳಿಸಲು ಪರದಾಡಿದ ತಂಡ 35.2 ಓವರ್ಗಳಲ್ಲಿ 107 ರನ್ಗೆ ಆಲೌಟಾಯಿತು. ನಿತೀಶ್ ಸುದಿನಿ(36) ತಂಡದ ಪರ ಗರಿಷ್ಠ ವೈಯಕ್ತಿಕ ಮೊತ್ತ ಗಳಿಸಿದರೆ, ಅದ್ನಿತ್ 18, ಸಾಹಿಲ್ ಗರ್ಗ್ 16, ಅರ್ಜುನ್ ಮಹೇಶ್ 16 ರನ್ ಬಾರಿಸಿದರು. ವೇಗಿ ಹೆನಿಲ್ ಪಟೇಲ್ 7 ಓವರ್ಗಳಲ್ಲಿ 1 ಮೇಡಿನ್ ಸಹಿತ 16 ರನ್ ನೀಡಿ 6 ವಿಕೆಟ್ ಪಡೆದರು.
ಸುಲಭ ಗುರಿ
ಪಡೆದ ಭಾರತಕ್ಕೆ ಉತ್ತಮ ಆರಂಭವೇನೂ ಸಿಗಲಿಲ್ಲ. ತಂಡದ ಮೊತ್ತ 25 ಆಗುವಷ್ಟರಲ್ಲಿ ಪ್ರಮುಖ 3 ವಿಕೆಟ್ ಬಿದ್ದವು. ವೈಭವ್ ಸೂರ್ಯವಂಶಿ(2), ವೇದಾಂತ್ ತ್ರಿವೇದಿ(2) ಮಿಂಚಲಿಲ್ಲ. ಈ ನಡುವೆ ಮಳೆಯಿಂದ ಪಂದ್ಯ ಸ್ಥಗಿತಗೊಂಡಿತು. ಬಳಿಕ 37 ಓವರ್ಗಳಲ್ಲಿ 96 ರನ್ ಗುರಿ ಪಡೆದ ಭಾರತ ತಂಡ, 17.2 ಓವರ್ಗಳಲ್ಲಿ ಗೆಲುವಿನ ದಡ ಸೇರಿತು. ಅಭಿಗ್ಯಾನ್ ಕುಂಡು ಔಟಾಗದೆ 42 ರನ್ ಸಿಡಿಸಿದರೆ, ನಾಯಕ ಆಯುಶ್ ಮ್ಹಾತ್ರೆ 19, ವಿಹಾನ್ ಮಲ್ಹೋತ್ರ 18 ರನ್ ಕೊಡುಗೆ ನೀಡಿದರು. ರಿತ್ವಿಕ್ ಅಪ್ಪಿಡಿ 2 ವಿಕೆಟ್ ಕಿತ್ತರು.










