ಕೊಲ್ಕತ್ತಾ: ತೃಣಮೂಲ ಕಾಂಗ್ರೆಸ್ (TMC) ಪಕ್ಷದ ಆಂತರಿಕ ಭಿನ್ನಮತ ಈಗ ತಾರಕಕ್ಕೇರಿದೆ. ಪಶ್ಚಿಮ ಬಂಗಾಳದ ಪ್ರತಿಪಕ್ಷ ನಾಯಕ ರಿತಬ್ರತಾ ಬ್ಯಾನರ್ಜಿ ಕರೆದಿದ್ದ ಸಭೆಯಲ್ಲಿ ಭಾಗವಹಿಸಿದ್ದ ಕಾರಣಕ್ಕಾಗಿ ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ (Mamata Banerjee) ಫಿರ್ಹಾದ್ ಹಕೀಮ್ ಮತ್ತು ಅರೂಪ್ ರಾಯ್ ಸೇರಿದಂತೆ 8 ಹಿರಿಯ ನಾಯಕರನ್ನು ಪಕ್ಷದಿಂದ ಉಚ್ಛಾಟಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ಮೂಲಕ ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (TMC) ಪಕ್ಷದಲ್ಲಿ ಉಂಟಾಗಿರುವ ಭಿನ್ನಮತ ಈಗ ಮತ್ತೆ ಸ್ಫೋಟಗೊಂಡಿದೆ.
ಮಮತಾ ಬ್ಯಾನರ್ಜಿ ಅವರನ್ನು ಪಕ್ಷದ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲು ಸಂಚು ರೂಪಿಸಿದ ಆರೋಪದ ಹಿನ್ನೆಲೆಯಲ್ಲಿ ಮಮತಾ ಬ್ಯಾನರ್ಜಿ ಬಣವು ಹಿರಿಯ ನಾಯಕ ಹಾಗೂ ಕೊಲ್ಕತ್ತಾ ಮೇಯರ್ ಫಿರ್ಹಾದ್ ಹಕೀಮ್, ಸಚಿವ ಅರೂಪ್ ರಾಯ್ ಸೇರಿದಂತೆ 8 ಬಂಡಾಯ ಶಾಸಕರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ತಕ್ಷಣದಿಂದಲೇ ಜಾರಿಗೆ ಬರುವಂತೆ ಉಚ್ಛಾಟಿಸಿದೆ. ಟಿಎಂಸಿ ನಾಯಕ ರಿತಬ್ರತಾ ಬ್ಯಾನರ್ಜಿ ಅವರೊಂದಿಗೆ ನಡೆಸಿದ ರಹಸ್ಯ ಸಭೆಯ ಬೆನ್ನಲ್ಲೇ ಈ ಕಠಿಣ ಕ್ರಮ ಕೈಗೊಳ್ಳಲಾಗಿದೆ. ಸೋಮವಾರ ನಡೆದಿದ್ದ ಈ ರಹಸ್ಯ ಸಭೆಯಲ್ಲಿ ಭಾಗವಹಿಸಿದ್ದ ಹಲವು ನಾಯಕರಿಗೆ ಮೊದಲು ಶೋಕಾಸ್ ನೋಟಿಸ್ ಜಾರಿ ಮಾಡಲಾಗಿತ್ತು. ನಂತರ ಅವರನ್ನು ಪಕ್ಷದಿಂದ ವಜಾಗೊಳಿಸಲಾಗಿದೆ.
ಫಿರ್ಹಾದ್ ಹಕೀಮ್ ಅವರನ್ನು ಟಿಎಂಸಿ ಪಕ್ಷದ ಅತ್ಯಂತ ಪ್ರಭಾವಶಾಲಿ ನಾಯಕರಲ್ಲಿ ಒಬ್ಬರೆಂದು ಪರಿಗಣಿಸಲಾಗಿತ್ತು. ಕೊಲ್ಕತ್ತಾದ ಬಂದರು ಪ್ರದೇಶದ ಶಾಸಕರಾಗಿರುವ ಹಕೀಮ್, 2018ರಿಂದ ಕೊಲ್ಕತ್ತಾ ಮಹಾನಗರ ಪಾಲಿಕೆಯ ಮೇಯರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರು ಮಮತಾ ಬ್ಯಾನರ್ಜಿ ಸರ್ಕಾರದಲ್ಲಿ ಹಲವು ಪ್ರಮುಖ ಸಚಿವ ಸ್ಥಾನಗಳನ್ನು ನಿಭಾಯಿಸಿದ್ದಾರೆ. ಮಮತಾ ಬ್ಯಾನರ್ಜಿ ಅವರೊಂದಿಗೆ ಹಕೀಮ್ ಅವರ ರಾಜಕೀಯ ಸಂಬಂಧವು ದಶಕಗಳಷ್ಟು ಹಳೆಯದಾಗಿದೆ. ಮತ್ತೊಬ್ಬ ಪ್ರಮುಖ ನಾಯಕ ಅರೂಪ್ ರಾಯ್ ಅವರು 2011ರಿಂದ 2026ರವರೆಗೆ ರಾಜ್ಯದ ಸಹಕಾರ ಇಲಾಖೆಯ ಸಚಿವರಾಗಿ ಸೇವೆ ಸಲ್ಲಿಸಿದ್ದರು.
ಪಶ್ಚಿಮ ಬಂಗಾಳದ ಪ್ರತಿಪಕ್ಷ ನಾಯಕ ರಿತಬ್ರತಾ ಬ್ಯಾನರ್ಜಿ ನೇತೃತ್ವದ ಬಂಡಾಯ ಬಣವು, ಸೋಮವಾರ ‘ಆಲ್ ಇಂಡಿಯಾ ತೃಣಮೂಲ ಕಾಂಗ್ರೆಸ್ ಸಮಿತಿ’ಗೆ ಹೊಸ ನಾಯಕತ್ವದ ರಚನೆಯನ್ನು
ಘೋಷಿಸಿ, ಅರೂಪ್ ರಾಯ್ ಅವರನ್ನು ಅದರ ಅಧ್ಯಕ್ಷರನ್ನಾಗಿ ನೇಮಿಸಿದ ಬೆನ್ನಲ್ಲೇ ಈ ಉಚ್ಛಾಟನೆ ನಡೆದಿದೆ. ಈ ಬಂಡಾಯ ಬಣವು 30 ಸದಸ್ಯರ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯನ್ನು (NWC) ಸಹ ರಚಿಸಿದೆ.
ಕಟ್ಟುನಿಟ್ಟಿನ ಕ್ರಮ ಕೈಗೊಂಡ ಮಮತಾ ಬಣ:
ಪಕ್ಷದ ಶಿಸ್ತು ಸಮಿತಿಯು ಈ ನಾಯಕರ ವರ್ತನೆಯನ್ನು ಗಂಭೀರ ಶಿಸ್ತು ಉಲ್ಲಂಘನೆ ಮತ್ತು ದ್ರೋಹ ಎಂದು ಪರಿಗಣಿಸಿದೆ. ಪಕ್ಷದ ಆಂತರಿಕ ಪ್ರಜಾಪ್ರಭುತ್ವಕ್ಕೆ ಧಕ್ಕೆ ತರಲು ಯತ್ನಿಸಿದ ಕಾರಣಕ್ಕಾಗಿ ಫಿರ್ಹಾದ್ ಹಕೀಮ್ ಮತ್ತು ಅರೂಪ್ ರಾಯ್ ಅವರೊಂದಿಗೆ ಗುರುತಿಸಿಕೊಂಡಿದ್ದ ಇತರ ಶಾಸಕರನ್ನು ಪಕ್ಷದಿಂದ ಹೊರಹಾಕಲು ಮಮತಾ ಬ್ಯಾನರ್ಜಿ ಆದೇಶಿಸಿದ್ದಾರೆ.
ಟಿಎಂಸಿ ಇತಿಹಾಸದಲ್ಲೇ ಅತಿ ದೊಡ್ಡ ಬಿಕ್ಕಟ್ಟು:
ಫಿರ್ಹಾದ್ ಹಕೀಮ್ ಅವರು ಮಮತಾ ಬ್ಯಾನರ್ಜಿ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ನಾಯಕರಾಗಿದ್ದರು. ಕೊಲ್ಕತ್ತಾದ ಮೇಯರ್ ಆಗಿ ಮತ್ತು ಸಚಿವರಾಗಿ ಅವರು ಪಕ್ಷದಲ್ಲಿ ಭಾರಿ ಹಿಡಿತ ಹೊಂದಿದ್ದರು. ಅಂತಹ ಹಿರಿಯ ನಾಯಕರೇ ಈಗ ಬಂಡಾಯ ಎದ್ದಿರುವುದು ಮತ್ತು ಅವರನ್ನು ಪಕ್ಷದಿಂದ ಉಚ್ಛಾಟಿಸಿರುವುದು ತೃಣಮೂಲ ಕಾಂಗ್ರೆಸ್ ಇತಿಹಾಸದಲ್ಲೇ ಅತ್ಯಂತ ದೊಡ್ಡ ರಾಜಕೀಯ ಬಿಕ್ಕಟ್ಟನ್ನು ಸೃಷ್ಟಿಸಿದೆ.
ಮುಂದಿನ ರಾಜಕೀಯ ನಡೆ ಏನು?:
ಈ ಉಚ್ಛಾಟನೆಯ ಬೆನ್ನಲ್ಲೇ ಪಶ್ಚಿಮ ಬಂಗಾಳದ ರಾಜಕೀಯ ವಲಯದಲ್ಲಿ ತಲ್ಲಣ ಸೃಷ್ಟಿಯಾಗಿದೆ. ಉಚ್ಛಾಟಿತ ನಾಯಕರು ಮುಂದಿನ ದಿನಗಳಲ್ಲಿ ಹೊಸ ಬಣವನ್ನು ರಚಿಸುತ್ತಾರಾ ಅಥವಾ ಪ್ರತಿಪಕ್ಷಗಳೊಂದಿಗೆ ಕೈಜೋಡಿಸುತ್ತಾರಾ ಎಂಬುದು ಕುತೂಹಲ ಮೂಡಿಸಿದೆ. ಮತ್ತೊಂದೆಡೆ, ಮಮತಾ ಬ್ಯಾನರ್ಜಿ ಅವರು ತಮ್ಮ ಸರ್ಕಾರ ಮತ್ತು ಪಕ್ಷದ ಮೇಲಿನ ಹಿಡಿತವನ್ನು ಬಿಗಿಗೊಳಿಸಲು ಶಾಸಕರ ತುರ್ತು ಸಭೆಯನ್ನು ಕರೆದಿದ್ದಾರೆ.















