ನವದೆಹಲಿ: ರಾಜ್ಯದಲ್ಲಿ ಮಹಿಳೆಯರ ಮೇಲೆ ಹಲ್ಲೆ, ಕಿರುಕುಳದಂಥ ಯಾವುದೇ ಘಟನೆಗಳು ಆಗಕೂಡದು, ಇಂಥ ಅಪರಾಧ ಮಾಡಿದ್ದು ಗೊತ್ತಾದರೆ ಅವರಿಗೆ ಯಮರಾಜ ಕಾಯುತ್ತಿದ್ದಾನೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಪರಾಧಿಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ಅಂಬೇಡ್ಕರ್ನಗರದಲ್ಲಿ ಮೋಟಾರ್ಸೈಕಲ್ನಲ್ಲಿ ಬಂದ ಇಬ್ಬರು ವ್ಯಕ್ತಿಗಳು ಕಿರುಕುಳ ನೀಡುವ ಯತ್ನದಲ್ಲಿ ವಿದ್ಯಾರ್ಥಿನಿಯೊಬ್ಬಳ 'ದುಪಟ್ಟಾ' ಎಳೆದಿದ್ದರಿಂದ ಆಕೆ ತನ್ನ ಬೈಸಿಕಲ್ನಿಂದ ಬಿದ್ದಿದ್ದಳು. ಇದರಿಂದಾಗಿ ಆಕೆಯ ಹಿಂದೆಯೇ ಬರುತ್ತಿದ್ದ ಮತ್ತೊಬ್ಬ ಮೋಟಾರ್ಸೈಕ್ಲಿಸ್ಟ್ನಿಂದ ಆಕೆಯ ಮೈಮೇಲೆ ಬೈಕ್ ಹರಿಸಿದ್ದರಿಂದ ವಿದ್ಯಾರ್ಥಿನಿ ಸ್ಥಳದಲ್ಲಿಯೇ ಪ್ರಾಣ ಕಳೆದುಕೊಂಡಿದ್ದಳು. ಈ ಘಟನೆಯ ಬೆನ್ನಲ್ಲಿಯೇ ಯೋಗಿ ಆದಿತ್ಯನಾಥ್ ಈ ಹೇಳಿಕೆ ನೀಡಿದ್ದಾರೆ. ಶುಕ್ರವಾರ ಈ ಘಟನೆ ನಡೆದಿದ್ದು, ಕ್ಷಿಪ್ರ ಕಾರ್ಯಾಚರಣೆ ಕೈಗೊಂಡ ಉತ್ತರ ಪ್ರದೇಶ ಪೊಲೀಸರು ಶನಿವಾರ ರಾತ್ರಿಯ ವೇಳೆಗೆ ಮೂವರೂ ಆರೋಪಿಗಳನ್ನು ಬಂಧಿಸಲುವಲ್ಲಿ ಯಶಸ್ವಿಯಾಗಿದ್ದಾರೆ. ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ, ಇಬ್ಬರು ಆರೋಪಿಗಳಿಗೆ ಬುಲೆಟ್ ಗಾಯಗಳಾಗಿದ್ದಾರೆ, ಭಾನುವಾರ ಕಸ್ಟಡಿಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ಒಬ್ಬ ವ್ಯಕ್ತಿಯ ಕಾಲು ಮುರಿದು ಹೋಗಿದೆ ಎಂದು ತಿಳಿಸಿದ್ದಾರೆ.
ಈ ವೇದಿಕೆಯಿಂದ ಎಲ್ಲರಿಗೂ ಒಂದು ಎಚ್ಚರಿಕೆ ನೀಡಲು ಬಯಸುತ್ತೇನೆ. ಮಹಿಳೆಯರಿಗೆ ಕಿರುಕುಳ ನೀಡುವಂಥ ಅಪರಾಧ ಕೃತ್ಯ ಎಸಗಿದರೆ, ಅವರಿಗಾಗಿ ಸಾವಿನ ದೇವರು ಯಮರಾಜ ಕಾಯ್ತಾ ಇರ್ತಾನೆ ಎಂದು ಎಚ್ಚರಿಸಲು ಬಯಸುತ್ತೇನೆ ಎಂದು ಯೋಗಿ ಆದಿತ್ಯನಾಥ್, 343 ಕೋಟಿ ರೂ.ಗಳ 76 ಯೋಜನೆಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಿದ ಬಳಿಕ ನಡೆದ ಕಾರ್ಯಕ್ರಮದಲ್ಲಿ ಹೇಳಿದರು.
ಕಾನೂನು
ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಬಲವಾದ ಕಾನೂನು ವ್ಯವಸ್ಥೆಯ ಪ್ರಾಮುಖ್ಯತೆಯನ್ನು ಆದಿತ್ಯನಾಥ್ ಎತ್ತಿ ತೋರಿಸಿದರು ಮತ್ತು ವ್ಯವಸ್ಥೆಯನ್ನು ಅಡ್ಡಿಪಡಿಸಲು ಕಾನೂನನ್ನು ದುರುಪಯೋಗಪಡಿಸಿಕೊಳ್ಳಲು ಯಾರಿಗೂ ಅವಕಾಶ ನೀಡುವುದಿಲ್ಲ ಎಂದು ಒತ್ತಿ ಹೇಳಿದರು. ಉತ್ತರ ಪ್ರದೇಶದ ಆಡಳಿತಾರೂಢ ಬಿಜೆಪಿಯು ಆದಿತ್ಯನಾಥ್ ಸರ್ಕಾರ ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ನಿಭಾಯಿಸುತ್ತಿರುವುದನ್ನು ತನ್ನ ಸಾಧನೆಗಳಲ್ಲಿ ಒಂದು ಎಂದು ಆಗಾಗ್ಗೆ ಬಿಂಬಿಸುತ್ತಿದೆ.















