ಬಂಟ್ವಾಳ: ಪುರಸಭೆ ಸಮಗ್ರ ಕುಡಿಯುವ ನೀರಿನ ಯೋಜನೆ ಬಗ್ಗೆ ಶಾಸಕ ರಾಜೇಶ್ ನಾಯ್ಕ್ ಸಭೆ

Coastal Bulletin
ಬಂಟ್ವಾಳ: ಪುರಸಭೆ ಸಮಗ್ರ ಕುಡಿಯುವ ನೀರಿನ ಯೋಜನೆ ಬಗ್ಗೆ ಶಾಸಕ ರಾಜೇಶ್ ನಾಯ್ಕ್ ಸಭೆ

ಬಂಟ್ವಾಳ: ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರು ತಮ್ಮ ಕಚೇರಿಯಲ್ಲಿ ಬಂಟ್ವಾಳ ಪುರಸಭೆಯ ಸಮಗ್ರ ಕುಡಿಯುವ ನೀರಿನ ಯೋಜನೆಯ ೨ನೇ ಹಂತದ ಕಾಮಗಾರಿಯ ಪ್ರಗತಿಯ ಕುರಿತು ಪುರಸಭಾ ಜನಪ್ರತಿನಿದಿಗಳು ಹಾಗೂ ಅದಿಕಾರಿಗಳ ಸಭೆ ನಡೆಸಿದರು.

ಸಭೆಯ ಬಳಿಕ ಮಾತನಾಡಿ, ಕುಡಿಯುವ ನೀರಿನ ಯೋಜನೆಯ ಕಾಮಗಾರಿಗೆ ಸಂಬಂಧಿಸಿ ಒಟ್ಟು ೭ ವಲಯಗಳ ಪೈಕಿ ೧ನೇ ವಲಯದ ಕಾಮಗಾರಿಯ ಪ್ರಗತಿ ಎಲ್ಲರಿಗೂ ತೃಪ್ತಿ ತಂದಿದೆ. ೨ನೇ ವಲಯದ ಕಾಮಗಾರಿ ಪೂರ್ತಿಗೊಳಿಸಲು ನ. ೧೬ರ ವರೆಗೆ ಸಮಯಾವಕಾಶ ನೀಡಲಾಗಿದೆ. ಪುರಸಭಾ ವ್ಯಾಪ್ತಿಯ ಒಳಚರಂಡಿ ವ್ಯವಸ್ಥೆಗೆ ಈಗಾಗಲೇ ಅನುದಾನ ಬಿಡುಗಡೆಗೊಂಡಿದ್ದು, ಜಾಗದ ಸಮಸ್ಯೆಗಳನ್ನು ಸರಿ ಮಾಡುವುದಕ್ಕೆ ತಹಶೀಲ್ದಾರ್‌ಗೆ ಸೂಚನೆ ನೀಡಲಾಗಿದೆ. ಒಟ್ಟು ಕಾಮಗಾರಿಯನ್ನು ೪೫

ಕೋ.ರೂ. ಹಾಗೂ ೧೪.೫ ಕೋ.ರೂ.ಗಳ ಎರಡು ವಿಭಾಗ ಮಾಡಿದ್ದೇವೆ. ಒಟ್ಟು ೭ ವೆಟ್‌ವೆಲ್‌ಗಳ ಪೈಕಿ ೫ ವೆಟ್‌ವೆಲ್‌ಗಳನ್ನು ಪೂರ್ತಿಗೊಳಿಸಲಾಗುತ್ತದೆ ಎಂದರು.

ಸಭೆಯಲ್ಲಿ ಬಂಟ್ವಾಳ ಪುರಸಭೆಯ ಅಧ್ಯಕ್ಷ ವಾಸು ಪೂಜಾರಿ, ಸದಸ್ಯರಾದ ಗೋವಿಂದ ಪ್ರಭು, ಹರಿಪ್ರಸಾದ್, ಬಂಟ್ವಾಳ ತಹಶೀಲ್ದಾರ್ ಮಂಜುನಾಥ್ ಸಿ, ಮುಖ್ಯಾಧಿಕಾರಿ ಮತ್ತಡಿ, ನಗರ ನೀರು ಸರಬರಾಜು ಮಂಡಳಿಯ ಸಹಾಯಕ ಎಂಜಿನಿಯರ್ ಶೋಭಾಲಕ್ಷ್ಮೀ, ಪಿಡಿಎಂಸಿ ಎಂಜಿನಿಯರ್‌ಗಳಾದ ಹೇಮಂತ್, ಅನೀಶ್, ಪುರಸಭಾ ಎಂಜಿನಿಯರ್ ಡೊಮಿನಿಕ್ ಡಿಮೆಲ್ಲೊ ಸಭೆಯಲ್ಲಿದ್ದರು.

Leave a Comment