ಬಂಟ್ವಾಳ :ರಕ್ತದ ಕಣಕಣದಲ್ಲೂ ದೇಶಸೇವೆಯು ದೇಶಭಕ್ತಿ, ದೇಶರಕ್ಷಣೆಯ ಕಿಚ್ಚನ್ನು ಹೊತ್ತಿಸಿರುವಾಗ ಸೈನಿಕರಿಗೆ ಯುದ್ಧ ಎಂದರೆ ಮಾಡು ಇಲ್ಲವೇ ಮಡಿ ಎಂಬ ಧ್ಯೇಯದೊಂದಿಗೆ ಮಾತೃಭೂಮಿಯ ರಕ್ಷಣೆಯೊಂದೆ ಮಂತ್ರವಾಗಿರುತ್ತದೆ. ವ್ಯಕ್ತಿ ಗೌರವ,ರಾಷ್ಟ್ರದ ಏಕತೆ, ಸಮಗ್ರತೆ, ಭಾವೈಕ್ಯತೆ ಎಂಬ ಕರ್ತವ್ಯ ಪ್ರಜ್ಞೆಯೊಂದಿಗೆ ಪ್ರತಿವರ್ಷ ಓರ್ವ ಯೋಧರನ್ನು ಗೌರವಿಸುತ್ತಾ ಬಂದಿರುವುದು ಸಂತಸದ ಸಂಗತಿ ಎಂದು ನಿವೃತ್ತ ಯೋಧರಾದ ಹವಾಲ್ದಾರ್ ಡೋಮಿ.ಪಿ.ಎಂ ಹೇಳಿದರು.
ಅವರು ಬೊಂಡಾಲ ಜಗನ್ನಾಥ ಶೆಟ್ಟಿ ಸ್ಮಾರಕ ಸರಕಾರಿ ಪ್ರೌಢಶಾಲೆ ಶಂಭೂರು ಇಲ್ಲಿ ಅಳುಪ ಸಮಾಜ ವಿಜ್ಞಾನ ಸಂಘ ಹಾಗು ಜೇಸಿಐ ಜೋಡುಮಾರ್ಗ ನೇತ್ರಾವತಿಯ ಜೇಜೇಸಿ ಹಾಗು ಜೇಸಿಐ ಮಹಿಳಾ ವಿಭಾಗ ಆಶ್ರಯದಲ್ಲಿ ನಡೆದ ಕಾರ್ಗಿಲ್ ವಿಜಯ್ ದಿವಸ್ ಆಚರಣೆಯಲ್ಲಿ ಗೌರವ ಸ್ವೀಕರಿಸಿ ಮಾತನಾಡುತ್ತಿದ್ದರು.
ಕಾರ್ಗಿಲ್ ಯುದ್ಧ ಸಮಯದಲ್ಲಿ ಅಪರೇಷನ್ ವಿಜಯ್ ನಲ್ಲಿ ಭಾಗಿಯಾಗಿದ್ದ ಅವರು ಆಗಿನ ಘಟನೆಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು. ಮುಖ್ಯ ಶಿಕ್ಷಕ
ಕಮಲಾಕ್ಷ ಕಲ್ಲಡ್ಕ ಅಧ್ಯಕ್ಷತೆ ವಹಿಸಿದ್ದರು.
ನಿವೃತ್ತ ಯೋಧ ಶಾಲಾ ಸಿಬ್ಬಂದಿ ಹರೀಶ್ ಡಿ. ಸೈನಿಕ ಕಾರ್ಯಾಚರಣೆಯ ಬಗ್ಗೆ ವಿದ್ಯಾರ್ಥಿಗಳಿಗೆ ವಿವರಿಸಿದರು.ಕಾರ್ಯಕ್ರಮದಲ್ಲಿ ಜೇಸಿಐ ಪೂರ್ವಾಧ್ಯಕ್ಷ ಹರಿಪ್ರಸಾದ್ ಕುಲಾಲ್, ಶಿಕ್ಷಕರಾದ ಭಾರತಿಹರೀಶ್, ದೇವದಾಸ್ ಅರ್ಕುಳ, ಗೀತಾ ವಿಟ್ಲ, ಸುಶ್ಮಿತಾ ಬಂಟ್ವಾಳ, ಸುಜಾತ,ಪ್ರಕಾಶ್,ವರಮಹಾಲಕ್ಷ್ಮೀ, ಜೇಜೇಸಿ ಅಧ್ಯಕ್ಷ ಭವಿಷ್ ಉಪಸ್ಥಿತರಿದ್ದರು.
ಶಾಲಾ ನಾಯಕ ಕೌಶಿಕ್ ಶೆಟ್ಟಿ ಸ್ವಾಗತಿಸಿ, ಅಳುಪ ಸಮಾಜ ವಿಜ್ಞಾನ ಸಂಘದ ಅಧ್ಯಕ್ಷೆ ಪ್ರಜ್ಞಾವಿ ವಂದಿಸಿದರು. ವಿದ್ಯಾರ್ಥಿನಿ ಇಂಚರ ಕಾರ್ಯಕ್ರಮ ನಿರೂಪಿಸಿದರು.















