ಬಂಟ್ವಾಳ: ಸುವರ್ಣಮಹೋತ್ಸವದ ಸಂಭ್ರಮದಲ್ಲಿರುವ ಲಯನ್ಸ್ ಕ್ಲಬ್ ಬಂಟ್ವಾಳ 2022-23 ಸಾಲಿಗೆ ಸುಮಾರು 35 ಲಕ್ಷ ರೂ.ವಿನ ವಿವಿಧ ಯೋಜನೆಯನ್ನು ಕಾರ್ಯಗತಗೊಳಿಸಲು ನಿರ್ಧರಿಸಿದ್ದು,ಎ.26 ರಂದು ಬಿ.ಸಿ.ರೋಡಿನ ಲಯನ್ಸ್ ಸೇವಾ ಮಂದಿರದಲ್ಲಿ ಸುವರ್ಣ ಮಹೋತ್ಸವ ಸಂಭ್ರಮಕ್ಕೆ ಚಾಲನೆ ಹಾಗೂ ಲಾಂಛನ ಬಿಡುಗಡೆ ಸಮಾರಂಭ ನಡೆಯಲಿದೆ ಎಂದು ಸುವರ್ಣ ಮಹೋತ್ಸವ ಸಮಿತಿ ಅಧ್ಯಕ್ಷ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.
ಶನಿವಾರ ಸಂಜೆ ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು ಲಯನ್ ಜಿಲ್ಲಾ ಗವರ್ನರ್ ವಸಂತಶೆಟ್ಟಿ ಅವರು ಸುವರ್ಣ ಮಹೋತ್ಸವ ಸಂಭ್ರಮಕ್ಕೆ ಚಾಲನೆ ನೀಡಲಿದ್ದು,ನಿಯೋಜಿತ ಜಿಲ್ಲಾ ಗವರ್ನರ್ ಸಂಜೀತ್ ಶೆಟ್ಟಿ ಲಾಂಛನ ಬಿಡುಗಡೆ ಮಾಡಲಿದ್ದಾರೆ.ಹಲವರು ಗಣ್ಯರು ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದರು.
ಸುವರ್ಣ ಮಹೋತ್ಸವದ ಪ್ರಯುಕ್ತ ಒಟ್ಟು 50 ವಿವಿಧ ಕಾರ್ಯಕ್ರಮವನ್ನು ಹಾಕಿಕೊಳ್ಳಲಾಗಿದೆ ಎಂದ ಅವರು 13 ಲ.ರೂ.ವೆಚ್ಚದಲ್ಲಿ ಸರಕಾರಿ ಆಸ್ಪತ್ರೆಗೆ ಎರಡು ಡಯಾಲಿಸಿಸ್ ಯಂತ್ರದ ಹಸ್ತಾಂತರ,ಈಗಾಗಲೇ ಕಾರ್ಯಾಚರಿಸುತ್ತಿರುವ ವಿಶೇಷ ಅಗತ್ಯವುಳ್ಳ ಮಕ್ಕಳ ಶಾಲೆಯನ್ನು7 ಲ.ರೂ.ವೆಚ್ಚದಲ್ಲಿ ವಿಸ್ತರಿಸುವುದು,
4 ಲ.ರೂ.ವೆಚ್ಚದಲ್ಲಿ ನಮ್ಮ ಮರ- ನಮ್ಮ ಉಸಿರು ಯೋಜನೆಯ ಮುಂದುವರಿಕೆ,8 ಲ.ರೂ.ವಿನಲ್ಲಿ ಇಬ್ಬರು ಅಶಕ್ತ ಮಹಿಳೆಯರಿಗೆ ಮನೆ ನಿರ್ಮಾಣ ಹಾಗೂ ಈಗಿರುವ ಲಯನ್ಸ್ ಮಕ್ಕಳ ಪಾರ್ಕ್ ನ್ನು 5
ಲ.ರೂ.ವೆಚ್ಚದಲ್ಲಿ ಪುನರ್ ನಿರ್ಮಿಸಲು ಯೋಜನೆ ಹಾಕಿಕೊಳ್ಳಲಾಗಿದೆ. ಸುವರ್ಣಮಹೋತ್ಸವದ ಸಂದರ್ಭದಲ್ಲಿ ಈ ಎಲ್ಲಾ ಯೋಜನೆಯನ್ನು ಲೋಕಾರ್ಪಣೆಗೊಳಿಸ ಲಾಗುವುದು ಎಂದರು.
ಇದೇ ವೇಳೆ ಹಾಜರಿದ್ದ ಲಯನ್ ಜಿಲ್ಲಾ ಗವರ್ನರ್ ವಸಂತ ಕುಮಾರ್ ಶೆಟ್ಟಿ ಮಾತನಾಡಿ, ಅಂತರಾಷ್ಟ್ರೀಯ ಎಲ್. ಸಿ.ಎಫ್ ಯೋಜನೆಯಡಿ ಜಿಲ್ಲೆಯಲ್ಲಿ ಸುಮಾರು 2.50 ಕೋ.ರೂ.ವೆಚ್ಚದ ಯೋಜನೆ ಕಾರ್ಯಗತಗೊಂಡಿದೆ ಎಂದರು. ಮುಡಿಪುವಿನಲ್ಲಿ 1.50 ಕೋ.ರೂ.ವೆಚ್ಚದಲ್ಲಿ ಕ್ಯಾನ್ಸರ್ ಸೆಂಟರ್ ನಿರ್ಮಾಣಕ್ಕೆ ಈಗಾಗಲೇ ಅನುಮೋದನೆ ದೊರೆತಿದ್ದು,32 ಲಕ್ಷದಲ್ಲಿ 4 ಡಯಾಲಿಸಿಸ್ ಯಂತ್ರ,ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ 20 ಲಕ್ಷದಲ್ಲಿ ಮೊಬೈಲ್ ಕಿಚನ್ ವ್ಯವಸ್ಥೆಗೂ ಅನುಮೋದನೆ ಸಿಕ್ಕಿದೆ ಹಾಗೆಯೇ ಲೇಡಿಘೋಷನ್ ಆಸ್ಪತ್ರೆಯಲ್ಲಿ 6.50 ಲ.ರೂ.ದೌರ್ಜನ್ಯಕ್ಕೊಳಗಾದ ಮಹಿಳೆಯರ ಸಾಂತ್ವನ ನೀಡುವ ಸಖಿ ಸೆಂಟರ್ ನಿರ್ಮಾಣ ಹಂತದಲ್ಲಿದೆ ಎಂದು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಸಮಿತಿ ಪದಾಧಿಕಾರಿಗಳಾದ. ಮಧ್ವರಾಜ್ ಜಿ.ಕಲ್ಮಾಡಿ,ಜಯಂತ ಶೆಟ್ಟಿ, ಶಿವಾನಂದ ಬಾಳಿಗಾ,ಉಮೇಶ್ ಆಚಾರ್ಯ ಉಪಸ್ಥಿತರಿದ್ದರು.














