ಬಂಟ್ವಾಳ :ಎಳೆಯರ ಬಳಗ ರಾಮಲ್ ಕಟ್ಟೆ (ರಿ)ಹಾಗೂ ಎಳೆಯರ ಬಳಗ ಮಹಿಳಾ ಮಂಡಳಿ ಇವರ ಅಶ್ರಯದಲ್ಲಿ ಇತಿಹಾಸ ಪ್ರಸಿದ್ಧ ಷಷ್ಠಿ ಜಾತ್ರೆಯ ಪ್ರಯುಕ್ತ ಸಸಿಹಿತ್ತು ಶ್ರೀ ಭಗವತೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಇವರ "ಮುಗುರು ಮಲ್ಲಿಗೆ" ಎಂಬ ಕಾಲಮಿತಿ ಯಕ್ಷಗಾನ ಬಯಲಾಟ ನ.27ರಂದು ಗುರುವಾರ ತುಂಬೆ ರಾಮಲ್ಕಟ್ಟೆಯಲ್ಲಿ ನಡೆಯಲಿದೆ. ಸಂಜೆ ಗಂಟೆ 6-30ಕ್ಕೆ ಶ್ರೀ ದೇವರ ಚೌಕಿಪೂಜೆ ನಂತರ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ.
ರಾಮಲ್ ಕಟ್ಟೆಯ ಷಷ್ಠಿ ಜಾತ್ರೆ ಈಗ ಇತಿಹಾಸ:
ಸುಮಾರು 25ವರುಷಗಳ ಹಿಂದೆ ಷಷ್ಠಿ ಜಾತ್ರೆಯ ಪ್ರಯುಕ್ತ ನಿರಂತರವಾಗಿ ಒಂದು ವಾರದ ಗೆಜ್ಜೆ ಸೇವೆ (ಯಕ್ಷಗಾನ)ಹಾಗೂ ಕೋಳಿ ಅಂಕ ನಡೆಯುತ್ತಿದ್ದ ತುಂಬೆಯ ರಾಮಲ್ ಕಟ್ಟೆಗೆ ಕುಂದಾಪುರದಿಂದ ಕುಂಬ್ಳೆ, ಸುಳ್ಯ ಮುಂತಾದ ದೂರದ ಊರುಗಳಿಂದಲೂ ಜನರು ಬಂದು ಜಾತ್ರೆಯನ್ನು ಸಂಭ್ರಮಿಸುತಿದ್ದ ಕಾಲ ಒಂದಿತ್ತು.
ಆ ಕಾಲದ ಹೆಸರುವಾಸಿ ಟೆಂಟ್ ಮೇಳ ಕರ್ನಾಟಕ ಯಕ್ಷಗಾನ ಮಂಡಳಿ ಯ ಪ್ರಥಮ ಸೇವೆಯಾಟ ಪೊಳಲಿಯಲ್ಲಿ ನಡೆದರೆ ಬಳಿಕ ಏಳು ದಿನಗಳ ಬಯಲಾಟವನ್ನು ಕಿಕ್ಕಿರಿದು ತುಂಬುತಿದ್ದ ಕಲಾಭಿಮಾನಿಗಳ ಮದ್ಯೆ ರಾಮಲ್ ಕಟ್ಟೆಯಲ್ಲಿ ಪ್ರದರ್ಶನ ಮಾಡುತಿದ್ದರು, ಹೊಸ ಪ್ರಸಂಗಗಳ ರಂಗ ಪ್ರಯೋಗಗಳು ಇಲ್ಲಿಯೇ ನಡೆಯುತ್ತಿತ್ತು, ಕೆಲವು ಸಲ ಪ್ರೇಕ್ಷಕವರ್ಗ ಅಧಿಕವಾಗಿ ಟೆಂಟ್
ಬಿಚ್ಚಿ ಜಾಗ ವಿಸ್ತರಿಸಿದ ಪ್ರಸಂಗವು ನಡೆಯುತಿತ್ತು.
ಕರ್ನಾಟಕ, ಮಂಗಳಾದೇವಿ ಮುಂತಾದ ಖ್ಯಾತ ಮೇಳಗಳ ಯಕ್ಷಗಾನ ಹಾಗೂ ಕೋಳಿ ಅಂಕ ನಿರಂತರವಾಗಿ ನಡೆಯುತ್ತಿದ್ದ ಐತಿಹಾಸಿಕ, ಪೌರಣಿಕ ಹಿನ್ನಲೆಯುಳ್ಳ ರಾಮಲ್ ಕಟ್ಟೆಯಲ್ಲಿ ಕೆಲವು ಸಣ್ಣ ಪುಟ್ಟ ಘಟನೆ, ಕಾನೂನಾತ್ಮಕ ತೊಡಕು ಹಾಗೂ ಆದುನಿಕತೆಯ ಭರಾಟೆಗೆ ಕಾಲ ಕ್ರಮೇಣ ಏಳು ದಿನಗಳ ಪ್ರಸಿದ್ಧ ಷಷ್ಠಿ ಜಾತ್ರೆಯು ಇತಿಹಾಸದ ಪುಟಕ್ಕೆ ಸೇರಿತು.
ಈ ಸಂದರ್ಭದಲ್ಲಿ ಜಾಗದ ಹಾಗೂ ಷಷ್ಠಿ ಜಾತ್ರೆಯ ಮಹತ್ವವನ್ನು ಮನಗಂಡು ಸ್ಥಳೀಯ ಸೇವಾ ಸಂಸ್ಥೆ ಎಳೆಯರ ಬಳಗ ರಾಮಲ್ ಕಟ್ಟೆ (ರಿ)ಹಾಗೂ ಎಳೆಯರ ಬಳಗ ಮಹಿಳಾ ಮಂಡಳಿಯು ಪ್ರತಿ ವರ್ಷ ಒಂದು ದಿನದ ಯಕ್ಷಗಾನ ಬಯಲಾಟ ಪ್ರದರ್ಶನಕ್ಕೆ ಅವಕಾಶವನ್ನು ಮಾಡಿಕೊಟ್ಟು ಸಂಪ್ರದಾಯವನ್ನು ಮುಂದುವರಿಸುತ್ತ ಬರುತಿದೆ.















