ಬಂಟ್ವಾಳ :ಶ್ರೀರಾಮ ವಿದ್ಯಾಕೇಂದ್ರದ ವಿಶಾಲ ಮೈದಾನದಲ್ಲಿ ಭಾನುವಾರ ಸಂಪನ್ನಗೊಂಡ ಕ್ರೀಡೋತ್ಸವದಲ್ಲಿ 3900 ವಿದ್ಯಾರ್ಥಿಗಳು ವೈವಿಧ್ಯಮಯ ಸಾಂಸ್ಕೃತಿಕ ಪ್ರದರ್ಶನವನ್ನು ನೀಡಿ ಸಹಸ್ರಾರು ಮಂದಿ ಪ್ರೇಕ್ಷಕರಿಗೆ ಮನೋರಂಜನೆ ನೀಡಿದರು.
ಮುಖ್ಯ ಅತಿಥಿ ಮೈಸೂರು ಸಂಸ್ಥಾನದ ರಾಜವಂಶಸ್ಥರು ಲೋಕ ಸಭಾ ಸದಸ್ ಯದುವೀರ ಕೃಷ್ಣದತ್ತ ಒಡೆಯರ್ ಹೊನಲು ಬೆಳಕಿನ ಕ್ರೀಡೋತ್ಸವ ವೀಕ್ಷಿಸಿ ಬಳಿಕ ಮಾತನಾಡಿ, ವಿದ್ಯಾರ್ಥಿಗಳ ಅದ್ಬುತ ಪ್ರತಿಭಾ ಪ್ರದರ್ಶನ ನೋಡಿ ರೋಮಾಂಚನವಾಗಿದೆ, ಮೋದಿ ನೇತೃತ್ವದ ಸರಕಾರ ಆರ್ಥಿಕ ಸಬಲೀಕರ,ಜನ ಜೀವನ ಮಟ್ಟ ಸುಧಾರಣೆಯ ದೃಷ್ಟಿಯಿಂದ ಮುಂದಡಿ ಇಟ್ಟಿರುವ ವಿಕಸಿತ ಭಾರತ ಕನಸನ್ನು ಸಕರಾಗೊಳಿಸುವ ನಿಟ್ಟಿನಲ್ಲಿ ನಮ್ಮ ಪರಂಪರೆ, ಸಂಸ್ಕೃತಿ,ಸಂಸ್ಕಾರವನ್ನು ಕಲಿಸಿ ವಿದ್ಯಾರ್ಥಿಗಳನ್ನು ಬೆಳೆಸುವ ಮೂಲಕ ಶ್ರೀರಾಮ ಶಾಲೆ ದೊಡ್ಡ ಕೊಡುಗೆಯನ್ನು ನೀಡುತ್ತಿದೆ, ಕರಾವಳಿಯಲ್ಲಿ ಅತ್ಯದ್ಭುತ ಸಂಸ್ಕೃತಿ ಇದ್ದು, ಧರ್ಮ ಪಾಲನೆ ಮಾಡುವುದು, ಅರಿವು ಮೂಡಿಸುವುದು ನಮ್ಮ ಕರ್ತವ್ಯ ಎಂದರು.
ಸುಮಾರು 800 ವಿದ್ಯಾರ್ಥಿಗಳು ಮೈದಾನದ ಹೊನಲು ಬೆಳಕಿನಲ್ಲಿ ಲಯಬದ್ಧವಾಗಿ ಕುಣಿದು ಕುಪ್ಪಳಿ ಸಿನಿರ್ಮಿಸಿದ ರಂಗೋಲಿಗಳ ಚಿತ್ತಾರ ,ಸಾಲು ಸಾಲಾಗಿ ಕುಳಿತು ಮಾಡುವ ಸಾಮೂಹಿಕ ರಚನೆಗಳು ಹಾಗೂ ಆಪರೇಷನ್ ಸಿಂಧೂರ ಕಾರ್ಯಾಚರಣೆ , ಬ್ರಹ್ಮೋಸ್ ದಾಳಿಯ ಮರುಸೃಷ್ಠಿಯ ಪ್ರದರ್ಶನ ,ಅಯೋಧ್ಯಾ ಶ್ರೀರಾಮ ಮಂದಿರದಲ್ಲಿ ಧ್ವಜಾರೋಹಣದ ದೃಶ್ಯಾವಳಿಗಳ ವೈಭವ ಕ್ರೀಡೋತ್ಸವದಲ್ಲಿ ಭಾಗವಹಿಸಿದ್ದ ಗಣ್ಯ ಅತಿಥಿಗಳ ಹಾಗೂ ನೆರೆದಿದ್ದ ಸಹಸ್ರಾರು ಪ್ರೇಕ್ಷಕರ ಕರತಾಡನದೊಂದಿಗೆ ಮೆಚ್ಚುಗೆಗೆ ಪಾತ್ರವಾಯಿತು.
ಮುಸ್ಸಂಜೆ ಹೊತ್ತಿಗೆ ಹೊನಲು ಬೆಳಕಿನಲ್ಲಿ ಶಿಶು ಮಂದಿರದ ಪುಟಾಣಿಗಳಿಂದ ಬನ್ನಿಬನ್ನಿ ಹಕ್ಕಿಗಳಾಗೋಣ ಎಂಬ ಹಾಡಿನೊಂದಿಗೆ ಪುಟ್ಟ ಪುಟ್ಟ ಹೆಜ್ಜೆಗಳನ್ನಿಟ್ಟು ಅತಿಥಿಗಳನ್ನು ಸ್ವಾಗತಿಸಿದರು. ಬಳಿಕ ಸಮವಸ್ತ್ರ ಧರಿಸಿದ ಕಾಲೇಜು ವಿದ್ಯಾರ್ಥಿಗಳ ಪಥ ಸಂಚಲನವು ಶಿಸ್ತಿನ ಸೈನಿಕರನ್ನು ನೆನಪಿಸುವಂತಿತ್ತು. ವಿವಿಧ ವಾದ್ಯಗಳಿಂದ ಸೋಯೋಜಿತಗೊಂಡ ಘೋಷ್ ಪ್ರದರ್ಶನ ತಾಳ ಲಯದೊಂದಿಗೆ ಮಿಳಿತಗೊಂಡು ಆಕರ್ಷಕವಾಗಿತ್ತು.
ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು ಗುಜರಾತಿ ಭಾಷೆಯ ಹಾಡಿಗೆ ಕೋಲಾಟ ನೃತ್ಯ ಮಾಡಿದರು. ತೆಲುಗು
ಭಾಷೆಯ ಹಾಡಿಗೆ ಶಿವಲಿಂಗ , ರಥ, ತಾವರೆಯ ರಚನೆಗಳಿಂದ ವಿವಿಧ ಚಿತ್ತಾರಗಳನ್ನು ಮೂಡಿಸಿದರು. ನಿಯುದ್ಧ ಕಲೆ , ಯೋಗಾಸನ ಗುಚ್ಛಗಳ ವಿವಿಧ ಆಯಾಮಗಳು ಪ್ರದರ್ಶನಗೊಂಡಿತು. ತುಳು ಭಾಷೆಯ ಹಾಡುಗಳಿಗೆ ಜೈ ಹನುಮಾನ್ ನೃತ್ಯ ಭಜನೆ ನಡೆಯಿತು. ದೀಪಾರತಿಯಲ್ಲಿ ವಿವಿಧ ರಚನೆಗಳು ಮನಸೂರೆಗೊಂಡಿತು. ಉಳ್ಳಾಲದ ರಾಣಿ ಅಬ್ಬಕ್ಕನ ಸಾಹಸವನ್ನು ನೃತ್ಯ ವೈವಿಧ್ಯಗಳ ಮೂಲಕ ಕಾಲೇಜು ವಿದ್ಯಾರ್ಥಿಗಳು ಪ್ರದರ್ಶಿಸಿದರು.
ಚಕ್ರ ಸಮತೋಲನ, ಬೆಂಕಿ ಸಾಹಸ, ಕಾಲ್ಚಕ್ರ, ಕೂಪಿಕಾ ಮೊದಲಾದ ಕಸರತ್ತುಗಳು ವಿದ್ಯಾರ್ಥಿಗಳ ಏಕಾಗ್ರತೆ ಮತ್ತು ಸಾಹಸದ ತಾಲೀಮುಗಳನ್ನು ಪ್ರದರ್ಶಿಸಿದರು. ಚೆಂಡೆ ವಾದನ ವಿಶೇಷ ಮೆರುಗು ನೀಡಿತು.
ಕ್ರೀಡೋತ್ಸವಕ್ಕಾಗಿ ವಿಶೇಷವಾಗಿ ನಿರ್ಮಿಸಿದ ಬೃಹತ್ ವೇದಿಕೆಯಲ್ಲಿ ವಿವೇಕಾನಂದ ವಿದ್ಯಾವರ್ದಕ ಸಂಘ ಪುತ್ತೂರು ಇದರ ಅಧ್ಯಕ್ಷ ಡಾ. ಪ್ರಭಾಕರ ಭಟ್ ಕಲ್ಲಡ್ಕ ಇವರ ಅಧ್ಯಕ್ಷತೆಯಲ್ಲಿ ಕ್ರೀಡೋತ್ಸವ 2025 ವಿಜೃಂಭಣೆಯಿಂದ ನೆರವೇರಿತು. ಅತಿಥಿಗಳಾಗಿ ಉತ್ತರ ಪ್ರದೇಶ ಲಕ್ನೋದ ಉದ್ಯಮಿ ಮನೋಜ್ ಸಿಂಗ್ , ಕೇರಳ ತಿರುವನಂತಪುರ ಸೂಪರ್ ಸ್ಪಷಾಲಿಟಿ ಆಸ್ಪತ್ರೆಯ ಚೇರ್ಮೆನ್ ಸೀಮಾ ಬಿ.ಆರ್.ಶೆಟ್ಟಿ, ಹಿಂದುಸ್ತಾನ್ ಟೈಮ್ಸ್ ಸೀನಿಯರ್ ಎಡಿಟರ್ ಉಮೇಶ್ ರಘುವಂಶಿ, ಮುಂಬೈನ ವಲ್ಡ್ ಟ್ರೇಡ್ ಸೆಂಟರ್ನ ಡಾ. ವಿಜಯ ಜಿ. ಕಲಾಂತ್ರಿ , ಬೆಂಗಳೂರಿನ ಎಲೆಗನ್ಸ್ ಎಂಟರ್ಪ್ರೈಸಸ್ನ ಸಂಸ್ಥಾಪಕ ರವಿಕಾಂತ್ , ಎ.ಬಿ.ಶೆಟ್ಟಿ ಮೆಮೊರಿಯಲ್ ಮಂಗಳೂರಿನ ಡಾ. ಶಿಶಿರ ಶೆಟ್ಟಿ , ಉಡುಪಿ ಶ್ರೀಕೃಷ್ಣ ಪ್ರಸಾದ್ ಗ್ರೂಪ್ ನ ಚೇರ್ಮೆನ್ ಸಂಪತ್ ಶೆಟ್ಟಿ ಮೊದಲಾದವರು ಭಾಗವಹಿಸಿದ್ದರು.
ಮಂಗಳೂರು ಸಂಸದ ಕ್ಯಾಪ್ಟನ್ ಬೃಜೇಶ್ ಚೌಟ,ಶಾಸಕರಾದ ರಾಜೇಶ್ ನಾಯ್ಕ್, ಹರೀಶ್ ಪೂಂಜಾ ಸಹಿತ ಶ್ರೀ ರಾಮ ವಿದ್ಯಾಕೇಂದ್ರದ ಅಧ್ಯಕ್ಷ ಬಿ. ನಾರಾಯಣ ಸೋಮಯಾಜಿ , ಸಂಚಾಲಕ ವಸಂತ ಮಾಧವ ಹಾಗೂ ಆಡಳಿತ ಮಂಡಳಿಯ ಸದಸ್ಯರು ಮತ್ತಿತರ ಅನೇಕ ಗಣ್ಯರು ಉಪಸ್ಥಿತರಿದ್ದರು.













