ಬೆಂಜನಪದವು:ಕೆನರಾ ಇಂಜಿನಿಯರಿಂಗ್‌ ಕಾಲೇಜಿನಲ್ಲಿ ಗುರು ಸುಧೀಂದ್ರರ ಮೂರ್ತಿ ಅನಾವರಣ. ಡಿಜಿಟಲ್‌ ಪ್ಲಾಟ್‌ ಫಾರಂ ಹಾಗೂ ನೂತನ ವೆಬ್‌ಸೈಟ್‌ ಲೋಕಾರ್ಪಣೆ. ವಾತ್ಸಲ್ಯಭರಿತ ಭೋಧನೆ, ಸಂಸ್ಕಾರಯುತ ಶಿಕ್ಷಣ ಇಂದಿನ ಅಗತ್ಯ: ಶ್ರೀ ಸಂಯಮೀಂದ್ರ ತೀರ್ಥ ಸ್ವಾಮೀಜಿ.

Coastal Bulletin
ಬೆಂಜನಪದವು:ಕೆನರಾ ಇಂಜಿನಿಯರಿಂಗ್‌ ಕಾಲೇಜಿನಲ್ಲಿ ಗುರು ಸುಧೀಂದ್ರರ ಮೂರ್ತಿ ಅನಾವರಣ. ಡಿಜಿಟಲ್‌ ಪ್ಲಾಟ್‌ ಫಾರಂ ಹಾಗೂ ನೂತನ ವೆಬ್‌ಸೈಟ್‌ ಲೋಕಾರ್ಪಣೆ. ವಾತ್ಸಲ್ಯಭರಿತ ಭೋಧನೆ, ಸಂಸ್ಕಾರಯುತ ಶಿಕ್ಷಣ ಇಂದಿನ ಅಗತ್ಯ: ಶ್ರೀ ಸಂಯಮೀಂದ್ರ ತೀರ್ಥ ಸ್ವಾಮೀಜಿ.

ಬಂಟ್ವಾಳ : ಗೌಡ ಸಾರಸ್ವತ ಸಮುದಾಯ ವ್ಯಾವಹಾರಿಕ ಚತುರತೆಯಿಂದ ಗುರುತಿಸಿಕೊಂಡರೂ ಅಮ್ಮೆಂಬಳ ಸುಬ್ಬರಾವ್ ಪೈ ಅವರಂಥಹ ದೂರದರ್ಶಿತ್ವದ ಸಾಧಕರಿಂದ ಆರಂಭಗೊಂಡ ಕೆನರಾ ಶಿಕ್ಷಣ ಸಂಸ್ಥೆಗಳು ಮಾತ್ರವಲ್ಲ ಕೆನರಾ ಬ್ಯಾಂಕ್ ಕೂಡ ಸಾಮಾಜಿಕ ಅಭಿವೃದ್ಧಿಯ ಮೂಲ ಕಾಳಜಿಯನ್ನು ಹೊಂದಿರುವುದು ಗಮನಾರ್ಹ ಎಂದು ಶ್ರೀ ಕಾಶೀಮಠಾಧೀಶ ಶ್ರೀಮದ್‌ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರು ನುಡಿದರು.

ಅವರು ಬುಧವಾರ ಸಂಜೆ ಬೆಂಜನಪದವು ಕೆನರಾ ಇಂಜಿನಿಯರಿಂಗ್‌ ಕಾಲೇಜಿಗೆ ಅನುಗ್ರಹ ಭೇಟಿ ನೀಡಿ ಕಾಲೇಜಿನ ಆವರಣದಲ್ಲಿ ನೂತನವಾಗಿ ನಿರ್ಮಿಸಲಾದ ವನಮಂಟಪದಲ್ಲಿ ಪರಮಗುರು ಶ್ರೀಮದ್‌ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಮೂರ್ತಿಯನ್ನು ಅನಾವರಣಗೊಳಿಸಿದರು. ಕಾಲೇಜಿನ ಸಮಗ್ರ ಆವರಣಕ್ಕೆ ʼಸುಧೀಂದ್ರ ನಗರʼ ನಾಮಕರಣ ನೆರವೇರಿಸಿದರು. ಈ ಸವಿನೆನಪಿಗಾಗಿ ಶ್ರೀಗಂಧದ ಸಸಿಯೊಂದನ್ನು ಅವರು ನೆಟ್ಟರು.


ಕಾಲೇಜಿನ ಸಭಾಂಗಣದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಶ್ರೀಗಳವರು ವಾತ್ಸಲ್ಯಭರಿತ ಭೋಧನೆ, ಸಂಸ್ಕಾರಯುತ ಶಿಕ್ಷಣ, ಪ್ರಾಯೋಗಿಕ ಜ್ಞಾನದ ಜತೆಗೆ ಸಂಶೋಧನಾತ್ಮಕ ಚಟುವಟಿಕೆಗಳಿಗೆ ಒತ್ತು ನೀಡುವ ಅಗತ್ಯವಿದೆ ಎಂದರು. ನಮ್ಮ ರಾಷ್ಟ್ರದ ಉತ್ಪನ್ನಗಳಿಗೆ ನಾವು ಮೊದಲ ಪ್ರಾಶಸ್ತ್ಯ ನೀಡಬೇಕು. ವಿದ್ಯಾರ್ಥಿಗಳಲ್ಲಿ ಪರಿಸರ ಪ್ರೀತಿಯ ಮಹತ್ವವನ್ನು ಪರಿಣಾಮಕಾರಿಯಾಗಿ ತಿಳಿಸಿಕೊಡುವ ಅಗತ್ಯವಿದೆ ಎಂದವರು ನುಡಿದರು.

ಕೆನರಾ ಸಮೂಹ ಶಿಕ್ಷಣ ಸಂಸ್ಥೆಗಳ ʼಡಿಜಿಟಲ್‌ ಪ್ಲಾಟ್‌ ಫಾರಂʼ ಹಾಗೂ ಕೆನರಾ ಇಂಜಿನಿಯರಿಂಗ್‌ ಕಾಲೇಜಿನ ನೂತನ ವೆಬ್‌ಸೈಟ್‌ ಲೋಕಾರ್ಪಣೆಯನ್ನು ಶ್ರೀಗಳವರು ಈ ಸಂದರ್ಭದಲ್ಲಿ ನೆರವರೇರಿಸಿದರು. ಕಾಲೇಜಿನ ವಿವಿಧ ವಿಭಾಗಗಳು, ಪ್ರಯೋಗಾಲಯಗಳಿಗೂ ಶ್ರೀಗಳವರು ಭೇಟಿ ನೀಡಿದರು.

ಕಾಲೇಜಿನ ಆಡಳಿತ ಮಂಡಳಿ ಕೆನರಾ ಹೈಸ್ಕೂಲ್‌ ಅಸೋಸಿಯೇಶನ್‌ ಪದಾಧಿಕಾರಿಗಳು, ಕಾಲೇಜಿನ ವತಿಯಿಂದ ಶ್ರೀಗಳವರಿಗೆ ಗೌರವಾದರಗಳಿಂದ ಪೂರ್ಣ ಕುಂಭ ಸ್ವಾಗತ ನೀಡಲಾಯಿತು.

ಆಡಳಿತ ಮಂಡಳಿ ಅಧ್ಯಕ್ಷ ಡಿ.ವಾಸುದೇವ ಕಾಮತ್‌, ಗೌರವ ಕಾರ್ಯದರ್ಶಿ ಎಂ. ರಂಗನಾಥ ಭಟ್‌ ಗುರು ಪಾದಪೂಜೆ ನೆರವೇರಿಸಿದರು. ಅಡಳಿತ ಮಂಡಳಿಯ ಸಹ ಕೋಶಾಧಿಕಾರಿ ಎಂ. ಜಗನ್ನಾಥ ಕಾಮತ್‌ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿ ಶ್ರೀ ಹರಿ ಗುರು ದಯೆಯಿಂದ ಕೆನರಾ ಸಂಸ್ಥೆಗಳು ಬೆಳೆದಿವೆ. ಪ್ರಸ್ತುತ ಹೊಸದಾಗಿ ನರ್ಸಿಂಗ್ ಶಿಕ್ಷಣದ

ಜತೆಗೆ ಯು.ಪಿ.ಎಸ್ಸಿ ಪರೀಕ್ಷಾರ್ಥಿಗಳಿಗೆ ರೆಸಿಡೆನ್ಸಿಶಿಯಲ್ ಕೋರ್ಸ್ ಆರಂಭಿಸುವ ತಯಾರಿ ನಡೆದಿದ್ದು ಮುಂದಿನ ಹಂತದಲ್ಲಿ ಮೆಡಿಕಲ್ ಕಾಲೇಜು ಆರಂಭಿಸುವ ಕನಸು ನನಸಾಗಬೇಕಿದೆ ಎಂದರು.

ಆಡಳಿತ ಮಂಡಳಿಯ ಉಪಾಧ್ಯಕ್ಷ ಎಂ. ಪದ್ಮನಾಭ ಪೈ, ಜತೆ ಕಾರ್ಯದರ್ಶಿಗಳಾದ ಕೆ. ಸುರೇಶ್‌ ಕಾಮತ್‌, ಟಿ.ಗೋಪಾಲಕೃಷ್ಣ ಶೆಣೈ, ಸಹಿತ ಸದಸ್ಯರಾದ ಬಸ್ತಿ ಪುರುಷೋತ್ತಮ ಶೆಣೈ, ಕೆ. ಶಿವಾನಂದ ಶೆಣೈ, ಎಂ. ನರೇಶ್‌ ಶೆಣೈ, ಯೋಗೀಶ ಆರ್.ಕಾಮತ್‌, ಅಶ್ವಿನಿ ಗಣೇಶ್ ಕಾಮತ್ ,ಕಾಲೇಜಿನ ಪ್ರಾಂಶುಪಾಲ ಡಾ.ನಾಗೇಶ್‌ ಹೆಚ್. ಆರ್. , ಡೀನ್ಸ್‌ , ವಿಭಾಗ ಮುಖ್ಯಸ್ಥರುಗಳು,ಕಾಲೇಜಿನ ಬೋಧಕ, ಬೋಧಕೇತರರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಅವಿಸ್ಮರಣೀಯವಾದ ಗುರುಭೇಟಿ!

ಶ್ರೀ ಕಾಶೀಮಠ ಸಂಸ್ಥಾನಕ್ಕೂ ಕೆನರಾ ಶಿಕ್ಷಣ ಸಂಸ್ಥೆಗಳಿಗೂ ವಿಶೇಷವಾದ ಬಾಂಧವ್ಯ. ಶ್ರೀಮತ್ ಭುವನೇಂದ್ರ ತೀರ್ಥ ಸ್ವಾಮೀಜಿಯವರ ಪ್ರೇರಣೆಯೊಂದಿಗೆ ಶ್ರೀಮತ್‌ ವರದೇಂದ್ರ ತೀರ್ಥ ಸ್ವಾಮೀಜಿಯವರ ಆಶೀರ್ವಾದ ರಾಯಸದೊಂದಿಗೆ 1891ರಲ್ಲಿ ಆರಂಭವಾದ ಕೆನರಾ ಶಿಕ್ಷಣ ಸಂಸ್ಥೆಗಳ ಪಗ್ರತಿಯಲ್ಲಿ ನಿರಂತರ ಶ್ರೀ ಕಾಶೀಮಠಾಧೀಶರುಗಳ ಅನುಗ್ರಹವಿದೆ. ಈ ಗೌರವ , ಧನ್ಯತಾ ಭಾವದಿಂದ ಇದೀಗ ಕೆನರಾ ಇಂಜಿನಿಯರಿಂಗ್‌ ಕಾಲೇಜಿನ ಆವರಣದಲ್ಲಿ ಅಷ್ಟಕೋನಾಕೃತಿಯ , ನಕ್ಷತ್ರಾಕಾರದ ಮಂಟಪದಲ್ಲಿ ಗುರು ಸುಧೀಂದ್ರ ತೀರ್ಥರ ಮನಮೋಹಕ ಮೂರ್ತಿ ಅನಾವರಣ, ಇಡೀ ಸಂಸ್ಥೆಯ ಆವರಣವನ್ನೇ ಸುಧೀಂದ್ರ ನಗರ ಎಂದು ನಾಮಕರಣ ಮಾಡಲಾಗಿರುವುದು ವಿಶೇಷ. ನಡೆದಾಡಿದ ದೇವರಾಗಿ ಶ್ರೀ ಮಠದ ೨೦ನೇ ಯತಿವರ್ಯರಾಗಿ, ಸಮಾಜದ ಗುರುಪೀಠದಲ್ಲಿ ಧ್ರುವತಾರೆಯಂತಿರುವ ಗುರು ಸುಧೀಂದ್ರರನ್ನು ನಕ್ಷತ್ರಾಕಾರದ ಮಂಟಪದಲ್ಲಿ ೨೦ನೇ ತಾರೀಖಿನಂದೇ ಕಾಲೇಜಿನ ಆವರಣಕ್ಕೆ ಪ್ರಥಮ ಭೇಟಿ ನೀಡಿದ ಗುರು ಸಂಯಮೀಂದ್ರ ತೀರ್ಥರ ಅಮೃತ ಹಸ್ತಗಳಿಂದ ಅನಾವರಣಗೊಳಿಸುವ ಸೌಭಾಗ್ಯ ಕೆನರಾ ಶಿಕ್ಷಣ ಸಂಸ್ಥೆಗಳ ಪಾಲಿಗೆ ಒದಗಿದ್ದೂ ಒಂದು ಸುಯೋಗವೇ!

Leave a Comment