ಬಂಟ್ವಾಳ ಆ.3 ಭಾರತೀಯ ಜೈನ್ ಮಿಲನ್ ಬಂಟ್ವಾಳ ಘಟಕ ಇದರ ವತಿಯಿಂದ ಸ್ಪರ್ಶ ಕಲಾಮಂದಿರದಲ್ಲಿ ನಡೆದ 19ನೇ ವರ್ಷದ ಆಟಿಡೊರ ತಮ್ಮನದ ಲೇಸ್ ಕಾರ್ಯಕ್ರಮವು ಬಂಟ್ವಾಳ ಭಾರತೀಯ ಜೈನ್ ಮಿಲನ್ ಅಧ್ಯಕ್ಷ ರಾಜೇಂದ್ರ ಜೈನ್ ಇವರ ಅಧ್ಯಕ್ಷತೆಯಲ್ಲಿ ಜರಗಿತು.
ಎಕ್ಸಲೆಂಟ್ ಮೂಡಬಿದ್ರೆ ಕಾಲೇಜಿನ ಆಡಳಿತ ನಿರ್ದೇಶಕ ಡಾ. ಬಿ .ಪಿ. ಸಂಪತ್ ಕುಮಾರ್ ಜೈನ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಆಟಿ ತಿಂಗಳಲ್ಲಿ ಮಾಡುವ ಹಲವು ಬಗೆಯ ಸೊಪ್ಪು, ಬೇರು, ದಂಟಿನಿಂದ ಮಾಡುವ ವೈವಿಧ್ಯಮಯ ತಿಂಡಿ ತಿನಿಸುಗಳು ಆರೋಗ್ಯದ ದೃಷ್ಟಿಯಲ್ಲಿ ಪ್ರಾಮುಖ್ಯತೆಯನ್ನು ಪಡೆದಿದೆ. ತುಳುನಾಡಿನ ಕೃಷಿಕರು ವಿವಿಧ ಆಚರಣೆಗಳನ್ನು ಮಾಡುತ್ತಿದ್ದು ಕೃಷಿ ಸಂಸ್ಕೃತಿಯ ಪ್ರತೀಕವಾಗಿದೆ ಎಂದು ಅವರು ಹೇಳಿದರು.
ವಿಶೇಷ ಆಹ್ವಾನಿತರಾಗಿ ಮಾಜಿ ಸಚಿವರು ಬಿ. ರಮನಾಥ ರೈ ಸಾಂಕೇತಿಕವಾಗಿ ಉದ್ಘಾಟನೆಯನ್ನು ಮಾಡಿ ಶುಭ ಹಾರೈಸಿದರು.
ಜೈನ್ ಮಿಲನ್ ವಲಯ-8 ಉಪಾಧ್ಯಕ್ಷ ಸುದರ್ಶನ್ ಜೈನ್ ಪಂಜಿಕಲ್ಲು ಇವರು ಲೇಸಿನ ತಿನಿಸಿನ ಪಟ್ಟಿಯನ್ನು ಬಿಡುಗಡೆಗೊಳಿಸಿ ದರು. ಭಾ. ಜೈ . ಮಿಲನ್ ಮಂಗಳೂರು ವಿಭಾಗದ ನಿರ್ದೇಶಕ ಜಯರಾಜ್ ಕಂಬಳಿ ಶುಭ ಹಾರೈಸಿ ಮಾತನಾಡಿದರು. ಕಾರ್ಯದರ್ಶಿ ಸುಭಾಶ್ಚಂದ್ರ ಜೈನ್ ನಿರೂಪಿಸಿದರು.
ವೀರ್ ಭರತ್ ಜೈನ್
ಪಾಪುದಡ್ಕ ಇವರಿಗೆ ವರ್ಷದ ಮಿಲನೋತ್ತಮ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಭರತ್ ಕುಮಾರ್ ವೇಣೂರು, ಸ್ವಪ್ನ ಚಂದ್ರಪ್ರಭ ಅತಿಥಿಗಳನ್ನು ಪರಿಚಯಿಸಿದರು. ರಾಜೇಂದ್ರ ಜೈನ್ ಪ್ರಸ್ತಾವನೆ ಮಾಡಿ ಸ್ವಾಗತಿಸಿದರು. ಉದಯ ಕುಮಾರ್ ಮದ್ವ ಪ್ರಾರ್ಥನೆ ಮಾಡಿದರು. ಮಾಸಿಕ ಸಭೆಯ ಅದೃಷ್ಟ ಚೀಟುಗಳನ್ನು ಪ್ರವೀಣ್ ಬಸ್ತಿ ಪಡ್ಪು ನೆರವೇರಿಸಿದರು. 68 ಮನೆಗಳಿಂದ ಜೈನ ಪಾರಂಪರಿಕ ಬಗೆಯ ವಿವಿಧ ತಿಂಡಿ, ಕಷಾಯ, ಚಟ್ನಿ ಸೇರಿದಂತೆ ಸುಮಾರು 50 ಬಗೆಯ ತಿಂಡಿ ತೀರ್ಥಗಳನ್ನು ವಿರಾಂಗನೆಯರು ತಂದಿದ್ದು ಆಗಮಿಸಿದ ಎಲ್ಲರಿಗೂ ಉಣಬಡಿಸಿದರು.
ಜೈನ್ ಮೆಡಿಕೋ ಸರ್ಜಿಕಲ್ ಲ್ಯಾಬ್ ಸಂಸ್ಥೆಯ ಸಿಬ್ಬಂದಿಗಳು ಆಗಮಿಸಿದವರ ರಕ್ತದ ಗುಂಪು ಪರಿಶೀಲನೆ, ರಕ್ತದ ಒತ್ತಡ, ಬ್ಲಡ್ ಶುಗರ್ ಚೆಕ್ ಕ್ಯಾಂಪ್ ಉಚಿತವಾಗಿ ನಡೆಸಿದರು. ಉಪಾಧ್ಯಕ್ಷ ಹರ್ಷರಾಜ್ ಬಳ್ಳಾಲ್ ಸದಸ್ಯತ್ವ ನೋಂದಣಿ ಬಗ್ಗೆ ತಿಳಿಸಿದರು. ಕಾರ್ಯದರ್ಶಿ ಜಯಕೀರ್ತಿ ಇಂದ್ರ ವಂದಿಸಿದರು.
















