ಮಂಗಳೂರು: ಫುಟ್ ಪಾತ್ ನಲ್ಲಿ ನಡೆದುಕೊಂಡು ಹೋಗುತ್ತಿದ್ದ ಐವರು ಯುವತಿಯರಿಗೆ ಕಾರು ಢಿಕ್ಕಿಯಾಗಿ ಓರ್ವ ಯುವತಿ ದಾರುಣವಾಗಿ ಮೃತಪಟ್ಟ ಭೀಕರ ಅಪಘಾತ ಅ 18 ಬುಧವಾರ ಸಂಜೆ ನಗರದ ಲೇಡಿಹಿಲ್ ಬಳಿ ಸಂಭವಿಸಿದೆ.
ಈ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ರೂಪಶ್ರೀ ಅವರನ್ನು ತಕ್ಷಣ ಸ್ಥಳೀಯರು ಎ.ಜೆ.ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ದುರಾದೃಷ್ಟವಶಾತ್ ಯುವತಿ ಅಷ್ಟರಲ್ಲಿ ಮೃತಪಟ್ಟಿದ್ದಾರೆ. ಸುರತ್ಕಲ್ ನ ಕಾನ, ಬಾಳದ ಗಂಗಾಧರ್ ಅವರ ಪುತ್ರಿಯಾದ ರೂಪಶ್ರೀ ಕುದ್ರೋಳಿ ದೇವಸ್ಥಾನಕ್ಕೆ ತೆರಳಿ ವಾಪಸಾಗುತ್ತಿದ್ದರೆಂದು ತಿಳಿದುಬಂದಿದೆ.
ಸ್ವಾತಿ, ಹಿತ್ನವಿ, ಕೃತಿಕಾ ಮತ್ತು ಯತಿಕಾ ರಸ್ತೆಗೆ ಅಪ್ಪಳಿಸಿದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.
5 ಮಂದಿ ಹುಡುಗಿಯರು ಮಂಗಳೂರು ಕಾರ್ಪೋರೇಷನ್ ಈಜುಕೊಳದ ಬಳಿ ಲೇಡಿಹಿಲ್ ನಿಂದ ಮಣ್ಣಗುಡ್ಡ ಜಂಕ್ಷನ್ ಕಡೆಗೆ
ಫುಟ್ಪಾತ್ನಲ್ಲಿ ನಡೆದುಕೊಂಡು ಹೋಗುತ್ತಿದ್ದರು. ಅದೇ ವೇಳೆ ಮಣ್ಣಗುಡ್ಡ ಜಂಕ್ಷನ್ನಿಂದ ಲೇಡಿಹಿಲ್ ಕಡೆಗೆ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಅತೀ ವೇಗದಲ್ಲಿ ಬಂದ ಕಾರು ಐವರಿಗೂ ಢಿಕ್ಕಿಯಾಗಿದೆ.
ಕಾರು ಚಾಲಕ ಕಮಲೇಶ್ ಬಲದೇವ್ ಎಂಬಾತ ಘಟನೆ ಬಳಿಕ ಸ್ಥಳದಿಂದ ಪರಾರಿಯಾಗಿದ್ದ,ಬಳಿಕ ಶೋರೂಮ್ ಮುಂದೆ ಅಪಘಾತಕ್ಕೆ ಕಾರಣವಾದ ಕಾರನ್ನು ನಿಲ್ಲಿಸಿ ಮನೆಗೆ ಹೋಗಿ ಟ್ರಾಫಿಕ್ ವೆಸ್ಟ್ ಪೊಲೀಸರಿಗೆ ಶರಣಾಗಿದ್ದಾನೆ.
ಪೊಲೀಸರು ಆರೋಪಿಯನ್ನು ಬಂಧಿಸಿ ಪ್ರಕರಣ ದಾಖಲು ಮಾಡಿದ್ದಾರೆ. ಅಪಘಾತ ಭೀಕರ ದೃಶ್ಯ ಸ್ಥಳೀಯ ಸಿಸಿ ಟಿವಿಯಲ್ಲಿ ದಾಖಲಾಗಿದೆ.















