ರಾಜಕಾರಣಿಗಳ ಮೇಲಿನ ಭಕ್ತಿ, ಸಂವಿಧಾನಕ್ಕೆ ಅಪಾಯ: ಕ್ಲಿಪ್ಟನ್ ಡಿ ರೊಜಾರಿಯೋ.

Coastal Bulletin
ರಾಜಕಾರಣಿಗಳ ಮೇಲಿನ ಭಕ್ತಿ, ಸಂವಿಧಾನಕ್ಕೆ ಅಪಾಯ: ಕ್ಲಿಪ್ಟನ್ ಡಿ ರೊಜಾರಿಯೋ.

ಬಂಟ್ವಾಳ : ರಾಜಕೀಯ ನಾಯಕರನ್ನು ಹೀರೋಗಳನ್ನಾಗಿ ಭಕ್ತಿ ತೋರಿಸಬೇಡಿ. ಇದು ಸಂವಿಧಾನಕ್ಕೆ ಸವಾಲು ಎಂದು ಆಲ್ ಇಂಡಿಯಾ ಲಾಯರ್ಸ್ ಅಸೋಸಿಯೇಷನ್ ಫಾರ್ ಜಸ್ಟಿಸ್ (ಎಐಎಲ್ಎಜೆ) ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹೈಕೋರ್ಟ್ ವಕೀಲರಾದ ಕ್ಲಿಪ್ಟನ್ ಡಿ’ ರೊಜಾರಿಯೋ ಹೇಳಿದರು.

ಅವರು (ಎಐಎಲ್ಎಜೆ) ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಹಾಗೂ ಲೀಗಲ್ ಪ್ರೆಂಡ್ಸ್ ದಕ್ಷಿಣ ಕನ್ನಡ ಜಿಲ್ಲಾ ಘಟಕ ಬಿ ಸಿ ರೋಡಿನ ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ‘ಸಂವಿಧಾನದ ಮುಂದಿರುವ ಸವಾಲುಗಳು’ ಎಂಬ ವಿಚಾರವಾಗಿ ಮಾತನಾಡಿದರು.

ಇಂದು ರಾಜಕೀಯ ನಾಯಕರನ್ನು ಹೀರೋಗಳನ್ನಾಗಿ ಭಾರೀ ಭಕ್ತಿಯಿಂದ ನೋಡುತ್ತಿರುವುದು ಸಂವಿಧಾನದ ಮೂಲ ಆಶಯಕ್ಕೆ ಧಕ್ಕೆಯಾಗಿದೆ. ಭಕ್ತರಾಗಿಬಿಟ್ಟರೆ ಪ್ರಭುತ್ವವನ್ನು ಪ್ರಶ್ನೆ ಮಾಡೋದು ಸಾಧ್ಯವಿಲ್ಲ. ಅಂಬೇಡ್ಕರ್ ಅವರು ಈ ಅಪಾಯವನ್ನು 1974ರಲ್ಲಿಯೇ ಹೇಳಿದ್ದರು. ಇದನ್ನು ನಾವು ಭಾರತ ಸಂವಿಧಾನದ ಭಾರೀ ಅಪಾಯವಾಗಿ ಕಾಣಬೇಕು ಎಂದು ಹೇಳಿದರು.

ಸಾಮಾಜಿಕ ಮತ್ತು ಆರ್ಥಿಕ ಸಮಾನತೆ ಪ್ರಜಾಪ್ರಭುತ್ವದಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತದೆ. ಬಡತನ ಸಂವಿಧಾನದ ಆಶಯಗಳನ್ನು ಸಾಧಿಸಲು ಅಡ್ಡಿಯಾಗುತ್ತಿದೆ. ಬಡವರಿಗೆ ಇಂದು ಒಬ್ಬ ನಾಗರಿಕನಾಗಿ ಚಿಂತಿಸಲು ಸಾಧ್ಯವಾಗುತ್ತಿಲ್ಲ. ಇದರಿಂದ ಸಂವಿಧಾನದ ಆಶಯವನ್ನು ಮನದಟ್ಟು ಮಾಡಿಕೊಳ್ಳಲು ಕೂಡಾ ಸಾಧ್ಯವಿಲ್ಲ. “ಇಂದು ಯುವಕರು ಧರ್ಮದ ಗೋಡೆಗಳನ್ನು ಸೃಷ್ಠಿ ಮಾಡುತ್ತಿದ್ದಾರೆ. ಇದನ್ನು ಒಡೆಯಬೇಕಾಗಿದೆ. ಈ ಮೂಲಕ ನಾವು ಸಂವಿಧಾನಕ್ಕೆ ಪೂರಕವಾಗಿ ಬದುಕಬಹುದು” ಎಂದರು.

“ಸಂವಿಧಾನವನ್ನು ಎಲ್ಲರೂ ದಿನನಿತ್ಯದ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಅದೇ ರೀತಿಯ ಶಿಕ್ಷಣ ನಮ್ಮ ಸಮಾಜದಲ್ಲಿ ಬೇಕಾಗಿದೆ. ಸಮಾಜದಲ್ಲಿ ಬಡವ-ಶ್ರೀಮಂತ ಎಂಬ ಭೇದ-ಭಾವ, ಜಾತಿ ಶೋಷಣೆ, ಧರ್ಮ-ಲಿಂಗ ತಾರತಮ್ಯ ಇಲ್ಲದ ಸಮಾಜ ಇಂದು ನಿರ್ಮಾಣವಾಗಬೇಕಿದೆ. ಇದು ಇಂದಿನ ಹಿರಿಯರು ಮುಂದಿನ ಸಮಾಜಕ್ಕೆ ನೀಡಬಹುದಾದ ಕೊಡುಗೆ” ಎಂದು ಒತ್ತಿ ಹೇಳಿದರು.

“ದೇಶದ ಪ್ರಜಾಪ್ರಭುತ್ವ ಇಂದಿರಾ ಗಾಂಧಿ ಆಡಳಿತದಲ್ಲಿ ‘ತುರ್ತು ಪರಿಸ್ಥಿತಿ’ ಎಂಬ ಅತ್ಯಂತ ಕರಾಳ ದಿನಗಳನ್ನು ಎದುರಿಸಿತ್ತು. ಆ ಸಂದರ್ಭ ಸಂವಿಧಾನದಲ್ಲಿ ಬದಲಾವಣೆ ತರಲು ಇಂದಿರಾ ಗಾಂಧಿ ಪ್ರಯತ್ನ ಮಾಡಿದ್ದರು. ಆದರೆ ಸುಪ್ರೀಂ ಕೋರ್ಟ್ ಸಂವಿಧಾನದ ಮೂಲ ಆಶಯಕ್ಕೆ ಧಕ್ಕೆ ಉಂಟಾಗುವ ತಿದ್ದುಪಡಿ ಸಾಧ್ಯವಿಲ್ಲ ಎಂದು

ತೀರ್ಪು ನೀಡಿತ್ತು. ಹೀಗಾಗಿ ಸಂವಿಧಾನ ಬದುಕಿ ಉಳಿದಿದೆ” ಎಂದರು.

ಹಿರಿಯ ವಕೀಲರಾದ ಮನೋರಾಜ್ ರಾಜೀವ ಅವರು ಸಂವಿಧಾನದ ಮಂದಿರುವ ಸವಾಲುಗಳನ್ನು ಜನತೆ ಹೇಗೆ ಎದುರಿಸಬೇಕು ಎಂದು ವಿವರಿಸಿದರು. ಎಐಎಲ್ಎಜೆ ಕೇಂದ್ರ ಸಮಿತಿ ಸದಸ್ಯರಾದ ಅವನಿ ಚೋಕ್ಷಿ ,ಯುವ ವಕೀಲರಾದ ಅಬ್ದುಲ್ ಜಲೀಲ್ ಎನ್ . ಹೈಕೋರ್ಟ್ ವಕೀಲರಾದ ಸಂದ್ಯಾ ಪ್ರಭು ಮಾತನಾಡಿದರು. ಹಿರಿಯ ವಕೀಲರಾದ ಶೋಭಲತಾ ಸುವರ್ಣ, ಬಂಟ್ವಾಳ ವಕೀಲರ ಸಂಘದ ಮಾಜಿ ಅಧ್ಯಕ್ಷರಾದ ಸುರೇಶ್ ಪೂಜಾರಿ, ಹಿರಿಯ ವಕೀಲರಾದ ಹಾತಿಮ್ ಅಹಮದ್, ಶ್ರೀಧರ್ ಪೈ, ಯುವ ವಕೀಲರಾದ ಮೋಹನ್ ಕುಮಾರ್ ಕಡೇಶಿವಾಲ್ಯ, ಉಮಾಕರ್ ಬಂಗೇರ ,ಎಐಎಲ್ ಎ ಜೆ ಉಪಾಧ್ಯಕ್ಷರಾದ ಮಂಜುನಾಥ್ ಪೂಜಾರಿ, ಎಐಎಲ್ ಎಜೆ ಜಿಲ್ಲಾ ಕೋಶಧಿಕಾರಿ ಮಹಮ್ಮದ್ ಮುಂಝಿರ್, ನವೀನ್ ತಾವೋ , ಲೀಗಲ್ ಪ್ರೆಂಡ್ಸ್ ಜಿಲ್ಲಾ ಘಟಕದ ಮುಖಂಡರಾದ ಉಮ್ಮರುಲ್ ಫಾರೂಕ್ ನೆಲ್ಯಾಡಿ ಸಿರಾಜುದ್ದೀನ್ ಉಪ್ಪಿನಂಗಡಿ , ಎಸ್ .ಜಿ ಅಫ್ರೀಝ್ ಯುವ ವಕೀಲರಾದ ಮಹಮ್ಮದ್ ಲುಕ್ಮಾನ್ , ಕಾರ್ತಿಕ್ ಎಂ. ಪ್ರಜ್ವಲ್ ಪುತ್ತೂರು ಮುಂತಾದವರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಆರಂಭದಲ್ಲಿ ಸಂವಿಧಾನದ ಪೀಠಿಕೆಯ ಮೇಲೆ ಪರದೆಯನ್ನು ಎಳೆಯುವ ಮೂಲಕ ಕಾರ್ಯಕ್ರಮ ವನ್ನು ಉದ್ಘಾಟಿಸಲಾಯಿತು.ಯುವ ಮುಖಂಡರಾದ ಸತೀಶ್ ಅರಳ ರವರು ಸಂವಿಧಾನ ದ ಪೀಠಿಕೆಯನ್ನು ಹಾಡಿದರು.

ಹಿರಿಯ ವಕೀಲರಾದ ಚಂದ್ರಶೇಖರ್ ರಾವ್ ಪುಂಚಮೆ , ಹಾಗೂ ಯುವ ವಕೀಲರಾದ ಮಹಮ್ಮದ್ ‌ಗಝಾಲಿ‌ ಕಾರ್ಯಕ್ರಮ ನಿರೂಪಿಸಿದರು. ಎಐಎಲ್ ಜೆ ಜಿಲ್ಲಾ ಕಾರ್ಯದರ್ಶಿ ಮಹಮ್ಮದ್ ಅಸ್ಫಾಕ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಕೊನೆಯಲ್ಲಿ ಎಐಎಲ್ ಎಜೆ ಜಿಲ್ಲಾ ಅಧ್ಯಕ್ಷರಾದ ತುಳಸೀದಾಸ್.ಆರ್ ಮಾತನಾಡಿ ಧನ್ಯವಾದ ಸಲ್ಲಿಸಿದರು

Leave a Comment